R.Ashwin:'ನೀವು ನಿಜವಾಗ್ಲೂ ಒಬ್ಬ ಕ್ರಿಕೆಟಿಗರಾ?': ಹೋಲ್ಡರ್ ಹಿಡಿದ ಕ್ಯಾಚ್ ಸಮರ್ಥಿಸಿಕೊಂಡ ಆರ್.ಅಶ್ವಿನ್ಗೆ ನೆಟ್ಟಿಗರ ತರಾಟೆ
R.Ashwin: ಅಹಮದಾಬಾದ್ನಲ್ಲಿ ಗುರುವಾರ (ಏಪ್ರಿಲ್ 30) ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿತು. ಆದರೆ, ಪಂದ್ಯದ ವೇಳೆ ರಜತ್ ಪಾಟಿದಾರ್ ಅವರನ್ನು ಔಟ್ ಮಾಡಲು ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ದೊಡ್ಡ ವಿವಾದಕ್ಕೆ ಕಾರಣವಾಯಿತು. ಈ ಬಗ್ಗೆ ಆರ್.ಅಶ್ವಿನ್ ಅವರು ಪ್ರತಿಕ್ರಿಯಿಸಿ ಜಿಟಿ ಪರ ಬ್ಯಾಟ್ ಬೀಸಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅದೇನೋ ಗೊತ್ತಿಲ್ಲ.. ಆರ್ ಅಶ್ವಿನ್ ಅವರು ಯಾವಾಗಲೂ ಸಂದರ್ಶನಗಳ ಸಂದರ್ಭಗಳಲ್ಲಿ ಆರ್ಸಿಬಿ ವಿರುದ್ಧವೇ ಮಾತನಾಡಿ ಟೀಕೆಗೆ ಗುರಿಯಾಗುತ್ತಲಿರುತ್ತಾರೆ. ಈಗಲೂ ಸಹ ಅದನ್ನೇ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟಿದರ್ ವಿಕೆಟ್ ಪತನದ ವಿಚಾರದ ಬಗ್ಗೆ ಮಾತನಾಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅಂಪೈರ್ ಜೊತೆ ಕೊಹ್ಲಿ ಸುದೀರ್ಘ ಚರ್ಚೆ
ಅರ್ಷದ್ ಖಾನ್ ಎಸೆದ ಬಾಲ್ಗೆ ರಜತ್ ಪಾಟಿದಾರ್ ಪುಲ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಈ ವೇಳೆ ಬಾಲ್ ಬ್ಯಾಟ್ನ ಮೇಲ್ಭಾಗಕ್ಕೆ ತಗುಲಿ ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಹೋಯಿತು. ಬೌಂಡರಿ ಲೈನ್ನಿಂದ ಓಡಿ ಬಂದ ಹೋಲ್ಡರ್ ಕೆಳಕ್ಕೆ ಜಿಗಿಯುವ ಮೂಲಕ ಕ್ಯಾಚ್ ಪೂರ್ಣಗೊಳಿಸಿದರು. ಆದರೆ, ಹೋಲ್ಡರ್ ಹಿಡಿದ ಕ್ಯಾಚ್ ಸಂಪೂರ್ಣ ಆಗಿರಲಿಲ್ಲ, ಬಾಲ್ ನೆಲಕ್ಕೆ ತಗುಲಿದೆ ಎಂಬುದು ವಿರಾಟ್ ಕೊಹ್ಲಿ ಅವರ ವಾದವಾಗಿತ್ತು. ಇದೇ ವಿಚಾರವಾಗಿ ಅವರು ಮೈದಾನದ ಹೊರಗಿದ್ದ ನಾಲ್ಕನೇ ಅಂಪೈರ್ ಜೊತೆ ಚರ್ಚೆ ನಡೆಸುತ್ತಿರುವುದು ಕಂಡುಬಂದಿತು.
ಆರ್ಸಿಬಿ ಮ್ಯಾನೇಜ್ಮೆಂಟ್ ಅಸಮಾಧಾನ
ಆರ್ಸಿಬಿ ಮ್ಯಾನೇಜ್ಮೆಂಟ್ ಈ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರೂ, ಅಂಪೈರ್ ಮಾತ್ರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಕೊನೆಗೆ ರಜತ್ ಪಾಟಿದಾರ್ ಯಾವುದೇ ದಾರಿಯಿಲ್ಲದೆ ಪೆವಿಲಿಯನ್ ಸೇರಬೇಕಾಯಿತು. ಈ ವಿವಾದದ ಬೆನ್ನಲ್ಲೇ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಕೂಡ ಪ್ರತಿಕ್ರಿಯಿಸಿದ್ದು, ಈ ಔಟ್ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದಾರೆ.
ಅಂಪೈರ್ ತೀರ್ಪು ಬೆಂಬಲಿಸಿದ ಆರ್.ಅಶ್ವಿನ್
"ಜೇಸನ್ ಹೋಲ್ಡರ್ ಅವರ ಹಸ್ತಗಳು ನನಗಿಂತ ಎರಡರಷ್ಟು ದೊಡ್ಡದಾಗಿವೆ. ಅವರ ಕೈಯಲ್ಲಿ ಚೆಂಡು ಬಹುತೇಕ ಕಾಣದಂತಾಗುತ್ತದೆ. ಹಾಗಾಗಿ ಅವರ ಬೆರಳುಗಳ ನಡುವಿನ ಸಂಧಿಯಿಂದ ನಿಮಗೆ ಚೆಂಡು ಕಾಣಿಸಿದ ಮಾತ್ರಕ್ಕೆ ಅದು ನೆಲಕ್ಕೆ ತಗುಲಿದೆ ಎಂದರ್ಥವಲ್ಲ. ಅವರು ಬಹುಶಃ ಚೆಂಡನ್ನು ಸಂಪೂರ್ಣವಾಗಿ ಹಿಡಿದಿರಬಹುದು. ಚೆಂಡು ನೆಲಕ್ಕೆ ತಾಗಿಲ್ಲ ಎಂದೇ ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ. ಈ ಮೂಲಕ ಅಶ್ವಿನ್ ಪಾಟಿದಾರ್ ಔಟ್ ವಿಚಾರದಲ್ಲಿ ಅಂಪೈರ್ ತೀರ್ಪನ್ನು ಬೆಂಬಲಿದಂತಿದೆ.
ರಜತ್ ಪಾಟಿದಾರ್ ಅವರ ಈ ವಿಕೆಟ್ ಪತನವು ಪಂದ್ಯದ ಅತ್ಯಂತ ಮಹತ್ವದ ತಿರುವು ಎಂದು ಸಾಬೀತಾಯಿತು. ಅಂತಿಮವಾಗಿ ಆರ್ಸಿಬಿ ಈ ಪಂದ್ಯದಲ್ಲಿ 4 ವಿಕೆಟ್ಗಳ ಸೋಲು ಅನುಭವಿಸಬೇಕಾಯಿತು. ಆದರೆ ಈ ಬಗ್ಗೆ ಮಾತನಾಡಿದ ಅಶ್ವಿನ್, "ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ಸಂಪೂರ್ಣವಾಗಿ ನಿಯಮಬದ್ಧವಾಗಿತ್ತು ಎಂದು ನನಗೆ ಅನ್ನಿಸಿತು," ಎಂದು ಹೇಳಿದ್ದಾರೆ. ಅಶ್ವಿನ್ ಅವರ ಪ್ರಕಾರ ಅಂಪೈರ್ ನೀಡಿದ ತೀರ್ಪು ಸರಿಯಾಗಿತ್ತು, ಹೋಲ್ಡರ್ ಯಾವುದೇ ತಪ್ಪು ಮಾಡಿಲ್ಲೆ ಅಂತಲೇ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು "ನೀವು ಆರ್ಸಿಬಿ ಪರವಾಗಿದ್ದರೆ, ಪಾಟಿದಾರ್ ದುರಾದೃಷ್ಟಶಾಲಿ ಎಂದು ನಿಮಗೆ ಅನ್ನಿಸಬಹುದು. ಅದೇ ನೀವು ಜಿಟಿ ತಂಡದ ಪರವಾಗಿ ನೋಡಿದರೆ, ಅದು ಸ್ಪಷ್ಟವಾಗಿ ಔಟ್ ಆಗಿ ಕಾಣಿಸುತ್ತದೆ. ಆದರೆ ನೀವು ಒಬ್ಬ ಪ್ರೇಕ್ಷಕನಾಗಿ ನೋಡಿದರೆ ಅದು ಸಂಪೂರ್ಣವಾಗಿ ನ್ಯಾಯಸಮ್ಮತವಾದ ಕ್ಯಾಚ್ ಆಗಿತ್ತು," ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಆರ್.ಅಶ್ವಿನ್ ಅವರ ಈ ಹೇಳಿಕೆ ಸಂಪೂರ್ಣ ಅಂಪೈರ್ ಪರ ಇದೆ ಅಂತಲೇ ಹೇಳಬಹುದು. ಈ ಹೇಳಿಕೆ ಬೆನ್ನಲ್ಲೇ ನೆಟ್ಟಿಗರು "ನೀವು ನಿಜವಾಗ್ಲೂ ಒಬ್ಬ ಕ್ರಿಕೆಟಿಗರಾ?," ಎಂದು ಪ್ರಶ್ನೆ ಮಾಡುತ್ತಾ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications