ಪದಕ ಗೆದ್ದಾಗ ಮನೆಗೆ ಆಹ್ವಾನಿಸುವ ಮೋದಿಗೆ ಲೈಂಗಿಕ ಕಿರುಕುಳದ ದೂರು ಕೇಳಲಾಗಲ್ವಾ?; ರೆಸ್ಲರ್ಸ್ ಪ್ರಶ್ನೆ
ಕಳೆದ ಎರಡು - ಮೂರು ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಭಾರತದ ಸ್ಟಾರ್ ರೆಸ್ಲರ್ಗಳು ನಡೆಸುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧದ ಪ್ರತಿಭಟನೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದೇಶವ್ಯಾಪಿ ಸುದ್ದಿಯಾಗುತ್ತಿರುವ ಈ ವಿಷಯದ ಬಗ್ಗೆ ಪೊಲೀಸರು ಮಾತ್ರ ಇನ್ನೂ ಸಹ ಎಫ್ ಐ ಆರ್ ದಾಖಲಿಸುವ ಸಾಹಸ ಮಾಡಿಲ್ಲ.
ಹೌದು, ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ( WFI ) ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿ ಕಿರುಕುಳದ ಗಂಭೀರ ಆರೋಪ ಮಾಡಿರುವ ರೆಸ್ಲರ್ಸ್ ಎರಡನೇ ಬಾರಿ ದೂರು ನೀಡಿದರೂ ಸಹ ಪೊಲೀಸರು ತಮ್ಮ ದೂರನ್ನು ಸ್ವೀಕರಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಬಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಹಾಗೂ ವಿನೇಶ್ ಫೋಗಟ್ ರೀತಿಯ ಸ್ಟಾರ್ ರೆಸ್ಲರ್ಗಳೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದು, ಕಳೆದ ಜನವರಿಯಲ್ಲಿ ನೀಡಿದ್ದ ದೂರಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ ಈ ಬಾರಿ ಏಳು ಹೊಸ ದೂರುಗಳೊಂದಿಗೆ ಮರಳಿ ಆರೋಪ ಮಾಡಿದ್ದಾರೆ.
ಈ ಬಾರಿಯೂ ದೂರನ್ನು ಸ್ವೀಕರಿಸದ ಕಾರಣ ರೊಚ್ಚಿಗೆದ್ದಿರುವ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವವರೆಗೂ ಊಟ, ನಿದ್ರೆ ಎಲ್ಲಾ ಇಲ್ಲೇ ಎಂದು ಘೋಷಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಈ ಪ್ರಕರಣಗಳಲ್ಲಿ ಬಿಜೆಪಿ ಎಂಪಿಯ ಹೆಸರೂ ಸಹ ತಳುಕಿಹಾಕಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಪ್ರತಿಭಟನಾನಿರತ ರೆಸ್ಲರ್ಸ್ ನೇರವಾಗಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.
"ಪ್ರಧಾನಿ ಮೋದಿ ಸರ್ 'ಬೇಟಿ ಬಚಾವೋ' ಮತ್ತು 'ಬೇಟಿ ಪಢಾವೋ' ಬಗ್ಗೆ ಮಾತನಾಡುತ್ತಾರೆ ಮತ್ತು ಪ್ರತಿಯೊಬ್ಬರ 'ಮನ್ ಕಿ ಬಾತ್' ಅನ್ನು ಆಲಿಸುತ್ತಾರೆ. ನಮ್ಮ 'ಮನ್ ಕಿ ಬಾತ್' ಕೇಳಲು ಆಗುವುದಿಲ್ವಾ? ನಾವು ಪದಕಗಳನ್ನು ಗೆದ್ದಾಗ ನಮ್ಮನ್ನು ಅವರ ಮನೆಗೆ ಆಹ್ವಾನಿಸುತ್ತಾರೆ ಮತ್ತು ನಮಗೆ ಗೌರವವನ್ನು ನೀಡುತ್ತಾರೆ. ನಮ್ಮನ್ನು ಅವರ ಮಕ್ಕಳು ಎಂದು ಕರೆಯುತ್ತಾರೆ. ಇಂದು ಅವರು ನಮ್ಮ ಮನ್ ಕಿ ಬಾತ್ ಕೇಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ" ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಸಾಕ್ಷಿ ಮಲಿಕ್ "ಸ್ಮೃತಿ ಇರಾನಿ ಅವರು ಈಗ ಏಕೆ ಮೌನವಾಗಿದ್ದಾರೆ ಎಂದು ಕೇಳಲು ಬಯಸುತ್ತೇನೆ. ಸೊಳ್ಳೆಗಳ ಕಾಟ ಸಹಿಸಿಕೊಂಡು ರಸ್ತೆಯಲ್ಲೇ ಮಲಗಿ ನಾಲ್ಕು ದಿನಗಳಾಗಿವೆ. ನಮಗೆ ಪೊಲೀಸರು ಆಹಾರ ತಯಾರಿಸಲು ಮತ್ತು ತರಬೇತಿ ನೀಡಲು ಅನುಮತಿ ನೀಡುತ್ತಿಲ್ಲ. ನೀವು ಯಾಕೆ ಮೌನವಾಗಿದ್ದೀರಿ?" ಎಂದು ಸ್ಮೃತಿ ಇರಾನಿಗೂ ಪ್ರಶ್ನೆಯನ್ನು ಹಾಕಿದ್ದಾರೆ.
ವಿನೇಶ್ ಫೋಗಟ್ ಮಾತನಾಡಿ ನರೇಂದ್ರ ಮೋದಿಯವರನ್ನು ಸಂಪರ್ಕಿಸಲು ಯಾವ ಅಧಿಕಾರಿಯ ದೂರವಾಣಿ ಸಂಖ್ಯೆಗಳು ನಮ್ಮಲ್ಲಿಲ್ಲ. ಹೀಗಾಗಿ ಈ ರೀತಿ ಮನವಿ ಮಾಡಿಕೊಳ್ಳುತ್ತಿದ್ದು, ಇದರಿಂದಾಗಿಯೂ ನಮ್ಮ ಅಳು ಅವರಿಗೆ ಕೇಳಿಸಲಿ, ನಮ್ಮ ಆತ್ಮ ಬಹುತೇಕ ಸತ್ತು ಹೋಗಿದೆ ಎಂದು ಅಳಲು ತೋಡಿಕೊಂಡರು.
ಇನ್ನೂ ಮುಂದುವರಿದು ಮಾತನಾಡಿದ ವಿನೇಶ್ ಫೋಗಟ್ ಬಹುಶಃ ಸಂಬಂಧಪಟ್ಟ ಇಲಾಖೆಗಳಿಗೆ ನಾವು ಕಾಣಿಸುತ್ತಿಲ್ಲ ಎನಿಸುತ್ತದೆ. ನಾವು ಮೇಣದ ಬತ್ತಿಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತೇವೆ. ಆ ಬೆಳಕಿನಿಂದಾದರೂ ನಾವು ಅವರಿಗೆ ಕಾಣಿಸಬಹುದು ಎಂದು ಬೇಸರ ಹೊರಹಾಕಿದರು.












Click it and Unblock the Notifications