ಮಂಕಡಿಂಗ್ ಅಕ್ರಮವಲ್ಲ, ಎಂಜಲು ಸವರುವಂತಿಲ್ಲ; 8 ಹೊಸ ಕ್ರಿಕೆಟ್ ರೂಲ್ಸ್
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಗಾಗ್ಗೆ ಕ್ರಿಕೆಟ್ ನಿಯಮಗಳಲ್ಲಿ ಕೆಲ ಪರಿಷ್ಕರಣೆಗಳನ್ನು ಮಾಡುತ್ತಿರುತ್ತದೆ. ಕ್ರಿಕೆಟ್ಗೆ ಹೊಸ ಆಯಾಮ ಕೊಡುವ ದೃಷ್ಟಿಯಿಂದ, ಅಥವಾ ಔಟ್ಡೇಟೆಡ್ ಎನಿಸುವ ನಿಯಮಗಳಿಗೆ ವಿದಾಯ ಹೇಳುವ ದೃಷ್ಟಿಯಿಂದ ಬದಲಾವಣೆ ಆಗುತ್ತಿರುತ್ತದೆ. ಐಸಿಸಿ ಮಂಗಳವಾರ ಕೆಲ ಪ್ರಮುಖ ನಿಯಮ ಬದಲಾವಣೆಗಳನ್ನು ಮಾಡಿದೆ.
ಚೆಂಡಿಗೆ ಎಂಜಲು ಸವರುವುದರಿಂದ ಹಿಡಿದು ಮಂಕಡಿಂಗ್ ಮಾಡುವುದು ಸೇರಿದಂತೆ ಹಲವು ನಿಯಮಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ. ಅಕ್ಟೋಬರ್ 1ರಿಂದ ಈ ಹೊಸ ಬದಲಾವಣೆಗಳು ಜಾರಿಗೆ ಬರಲಿವೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ಪುರುಷರ ಕ್ರಿಕೆಟ್ ಸಮಿತಿ ಮಾಡಿದ ಶಿಫಾರಸುಗಳನ್ನು ಪರಿಗಣಿಸಿ ಐಸಿಸಿಯ ಚೀಫ್ ಎಕ್ಸಿಕ್ಯೂಟಿವ್ಸ್ ಕಮಿಟಿ (ಸಿಇಸಿ) ಹೊಸ ನಿಯಮಗಳನ್ನು ಅಧಿಕೃತವಾಗಿ ಘೋಷಿಸಿದೆ.

ಐಸಿಸಿ ಕ್ರಿಕೆಟ್ ಸಮಿತಿ ಸದಸ್ಯರು: ಸೌರವ್ ಗಂಬೂಲಿ (ಅಧ್ಯಕ್ಷರು), ರಮೀಜ್ ರಾಜಾ, ಮಹೇಲ ಜಯವರ್ದನ, ರೋಜರ್ ಹಾರ್ಪರ್, ಡೇನಿಯಲ್ ವೆಟೋರಿ, ವಿವಿಎಸ್ ಲಕ್ಷ್ಮಣ್, ಗ್ಯಾರಿ ಸ್ಟೆಡ್, ಜಯ್ ಶಾ, ಜೋಯಲ್ ವಿಲ್ಸನ್, ರಂಜನ್ ಮುದುಗಲ್ಲೆ, ಜೇಮೀ ಕಾಕ್ಸ್, ಕೈಲೆ ಕೋಟ್ಜರ್, ಶಾನ್ ಪೊಲಾಕ್, ಗ್ರೆಗ್ ಬಾರ್ಕ್ಲೇ, ಜೆಫ್ ಅಲಾರ್ಡೈಸ್, ಕ್ಲೈವ್ ಹಿಚ್ಕಾಕ್, ಡೇವಿಡ್ ಕೆಂಡ್ರಿಕ್ಸ್.
1) ಎಂಜಲು ಸವರುವಂತಿಲ್ಲ
ಆಟಗಾರರು ಚೆಂಡಿಗೆ ಎಂಜಲು ಸವರುವಂತಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಕೋವಿಡ್ ಕಾರಣಕ್ಕೆ ಎರಡು ವರ್ಷಗಳ ಹಿಂದೆಯೇ ಎಂಜಲು ಸವರುವುದನ್ನು ನಿಷೇಧಿಸಿತ್ತು. ಈಗ ಅದನ್ನು ಖಾಯಂ ಆಗಿ ಬ್ಯಾನ್ ಮಾಡಲಾಗಿದೆ. ಆಟಗಾರರು ಎಂಜಲು ಬದಲು ತಮ್ಮ ಬೆವರನ್ನು ಚೆಂಡಿಗೆ ಸವರಲು ಇರುವ ಅನುಮತಿ ಮುಂದುವರಿಯಲಿದೆ.
ಚೆಂಡು ಹೊಳಪು ಬರಲು ಆಟಗಾರರು ಎಂಜಲು ಸವರುವುದನ್ನು ನೋಡಿದ್ದೇವೆ. ಈ ಹೊಳೆವ ಚೆಂಡು ಪಿಚ್ಗೆ ಬಿದ್ದಾಗ ಸ್ವಿಂಗ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಅಭ್ಯಾಸವಿತ್ತು. ಈಗ ಅದನ್ನು ನಿಷೇಧಿಸಲಾಗಿದೆ.
2) ಮಂಕಡಿಂಗ್ ಔಟ್:
ಬೌಲರ್ ಬೌಲಿಂಗ್ ಮಾಡುವ ಮುನ್ನ ನಾನ್-ಸ್ಟ್ರೈಕರ್ನಲ್ಲಿರುವ ಬ್ಯಾಟರ್ ಕ್ರೀಸ್ನಿಂದ ಹೊರಗಿದ್ದರೆ ಅವರನ್ನು ಬೌಲರ್ ಔಟ್ ಮಾಡುವುದಕ್ಕೆ ಮಂಕಡಿಂಗ್ ಎನ್ನುತ್ತಾರೆ. ಈಗ ಮಂಕಡಿಂಗ್ ಮಾಡುವುದು ಅಕ್ರಮ ಅಲ್ಲ ಎನ್ನುತ್ತದೆ ಐಸಿಸಿ ಹೊಸ ನಿಯಮ. ಮಂಕಡಿಂಗ್ ಅನ್ನು ರನ್ ಔಟ್ ಎಂದು ಪರಿಗಣಿಸಲಾಗುತ್ತದೆ.
ಈ ಮುಂಚೆ ಮಂಕಡಿಂಗ್ ಮಾಡುವುದನ್ನು ಅನ್ಫೇರ್ ಪ್ಲೇ ಎಂದು ವರ್ಗೀಕರಿಸಲಾಗಿತ್ತು. ಈಗ ಅದು ರೆಗ್ಯುಲರ್ ರನ್ ಔಟ್ ಆಗಿದೆ. ಹಿಂದೆ ಆರ್ ಅಶ್ವಿನ್ ಈ ರೀತಿ ಮಂಕಡಿಂಗ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಈಗ ಅಶ್ವಿನ್ ಮಾಡಿದ್ದು ಸರಿ ಎನ್ನುತ್ತದೆ ಐಸಿಸಿ ಹೊಸ ನಿಯಮ.

3) ಸ್ಟ್ರೈಕರ್ ತುದಿಗೆ ಚೆಂಡೆಸೆದು ಔಟ್ ಮಾಡುವಂತಿಲ್ಲ:
ಮಂಕಡಿಂಗ್ನಲ್ಲಿ ನಾನ್ ಸ್ಟ್ರೈಕರ್ ಎಂಡ್ನಲ್ಲಿ ಬೇಲ್ ಎಗರಿಸಿ ಬ್ಯಾಟರ್ನನ್ನು ಔಟ್ ಮಾಡಬಹುದು. ಆದರೆ, ಸ್ಟ್ರೈಕಿಂಗ್ ಎಂಡ್ನಲ್ಲಿ ಹಾಗೆ ಮಾಡಲು ಬರುವುದಿಲ್ಲ. ಬ್ಯಾಟಿಂಗ್ಗೆ ನಿಂತ ಆಟಗಾರ ಬೌಲರ್ ಬೌಲಿಂಗ್ ಮಾಡುವ ಮುನ್ನ ಕ್ರೀಸ್ನಿಂದ ಹೊರಗೆ ಬಂದಿದ್ದರೆ, ಅಗ ಬೌಲರ್ ಚೆಂಡನ್ನು ಥ್ರೋ ಮಾಡಿ ವಿಕೆಟ್ ಉರುಳಿಸಿ ಔಟ್ ಮಾಡಲು ಹಿಂದೆ ಅವಕಾಶ ಇತ್ತು. ಹೊಸ ನಿಯಮದಲ್ಲಿ ಅದು ಸಿಂಧುವಲ್ಲ. ಆ ರೀತಿ ಮಾಡಿದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ.
4) ಕ್ಯಾಚ್ ಔಟ್ ಬಳಿಕ ಬರುವ ಬ್ಯಾಟರ್ ನೇರ ಬ್ಯಾಟಿಂಗ್ ಕ್ರೀಸ್ಗೆ:
ಬ್ಯಾಟಿಂಗ್ ಮಾಡುವಾಗ ಯಾವುದೇ ಬ್ಯಾಟರ್ ಕ್ಯಾಚಿತ್ತು ಔಟಾದಾಗ ಕ್ರೀಸ್ಗೆ ಬರುವ ಹೊಸ ಬ್ಯಾಟರ್ ನೇರವಾಗಿ ಸ್ಟ್ರೈಕಿಂಗ್ ಕ್ರೀಸ್ಗೆ ಬರಬೇಕು. ಕ್ಯಾಚ್ ಇತ್ತು ಔಟಾಗುವ ಬ್ಯಾಟರ್ ಮಧ್ಯದಲ್ಲಿ ಒಂದು ರನ್ ಓಡಿ ನಾನ್ ಸ್ಟ್ರೈಕಿಂಗ್ ಕ್ರೀಸ್ ಸೇರಿದ್ದರೂ ಕೂಡ ಹೊಸ ಬ್ಯಾಟರ್ ಸ್ಟ್ರೈಕಿಂಗ್ ಎಂಡ್ಗೆ ಬರಬೇಕು.
5) ಹೊಸ ಬ್ಯಾಟರ್ಗೆ ಇರುವ ಸಮಯ:
ಒಬ್ಬ ಬ್ಯಾಟರ್ ಔಟಾಗಿ ಹೊಸ ಬ್ಯಾಟರ್ ಬಂದು ಸ್ಟ್ರೈಕ್ ತೆಗೆದುಕೊಳ್ಳಲು ನಿರ್ದಿಷ್ಟ ಕಾಲಮಿತಿ ನಿಗದಿ ಮಾಡಲಾಗಿದೆ. ಒಡಿಐ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಈ ಕಾಲಮಿತಿ 2 ನಿಮಿಷ ಇದ್ದರೆ, ಟಿ20 ಪಂದ್ಯದಲ್ಲಿ 90 ಸೆಕೆಂಡ್ ಮಿತಿ ನಿಯಮ ಮುಂದುವರಿಯಲಿದೆ.
6) ಸ್ಟ್ರೈಕರ್ ದೇಹದ ಭಾಗ ಪಿಚ್ ಒಳಗೆ ಇರಬೇಕು:
ಬ್ಯಾಟರ್ ಚೆಂಡನ್ನು ಎದುರಿಸುವಾಗ ಅವರ ಬ್ಯಾಟ್ ಅಥವಾ ದೇಹದ ಯಾವುದಾದರೂ ಭಾಗವು ಪಿಚ್ನ ಒಳಗೆ ಇರಬೇಕು. ಅವರ ದೇಹ ಮತ್ತು ಬ್ಯಾಟ್ ಪಿಚ್ನಿಂದ ಸಂಪೂರ್ಣವಾಗಿ ಹೊರಗಿದ್ದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಬೌಲರ್ ಎಸೆಯುವ ಚೆಂಡನ್ನು ಎದುರಿಸಲು ಬ್ಯಾಟರ್ ಪಿಚ್ನಿಂದ ಆಚೆ ಹೋಗುವುದು ಅನಿವಾರ್ಯವಾದಾಗ ಆ ಎಸೆತವನ್ನು ನೋ-ಬಾಲ್ ಎಂದು ಪರಿಗಣಿಸಲಾಗುತ್ತದೆ.
7) ಬ್ಯಾಟರ್ನನ್ನು ಕೆಣಕಿದರೆ 5 ರನ್ ಪೆನಾಲ್ಟಿ:
ಬೌಲರ್ ಚೆಂಡನ್ನು ಎಸೆಯಲು ಬರುವಾಗ ಸ್ಟ್ರೈಕಿಂಗ್ ಎಂಡ್ನಲ್ಲಿರುವ ಬ್ಯಾಟರ್ನ ಗಮನ ಹಾಳು ಮಾಡಲು ಫೀಲ್ಡರ್ಗಳು ಪ್ರಯತ್ನಿಸಿದರೆ ಆಗ ಬ್ಯಾಟಿಂಗ್ ತಂಡಕ್ಕೆ ಪೆನಾಲ್ಟಿ ರೂಪದಲ್ಲಿ ಐದು ಹೆಚ್ಚುವರಿ ರನ್ ಸಿಗುತ್ತದೆ. ಅಲ್ಲದೇ, ಆ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ.
8) ನಿಧನಗತಿ ಬೌಲಿಂಗ್ಗೆ ದಂಡ:
ಟಿ20 ಕ್ರಿಕೆಟ್ ಪಂದ್ಯದಲ್ಲಿ ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಸಂಖ್ಯೆಯ ಓವರ್ಗಳನ್ನು ಮಾಡದೇ ಹೋದರೆ ಬೌಲಿಂಗ್ ತಂಡಕ್ಕೆ ಪೆನಾಲ್ಟಿ ಹಾಕಲಾಗುತ್ತದೆ. ಉಳಿದ ಓವರ್ಗಳಲ್ಲಿ ಫೀಲ್ಡಿಂಗ್ ಸರ್ಕಲ್ನೊಳಗೆ ಹೆಚ್ಚುವರಿ ಫೀಲ್ಡರ್ನನ್ನು ಹಾಕಬೇಕಾಗುತ್ತದೆ. ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಈ ವರ್ಷದಿಂದ ಈ ನಿಯಮ ಜಾರಿಯಲ್ಲಿದೆ. ಈಗ ಇದು ಒಡಿಐ ಕ್ರಿಕೆಟ್ ಪಂದ್ಯಗಳಿಗೂ ಅನ್ವಯ ಆಗುತ್ತದೆ.
(ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications