ಥ್ರೋಬಾಲ್: ಅಂತಾರಾಷ್ಟ್ರೀಯ ಟೂರ್ನಮೆಂಟ್ನಲ್ಲಿ ಭಾಗವಹಿಸಲು ಹಳ್ಳಿ ಪ್ರತಿಭೆಗಳಿಗೆ ಬೇಕಿದೆ ನೆರವು
ದಾವಣಗೆರೆ, ಜೂನ್ 8: ಕ್ರಿಕೆಟ್, ಕಬಡ್ಡಿ ಸೇರಿದಂತೆ ಇತರೆ ಆಟಗಳಲ್ಲಿ ಚಿನ್ನ ಗೆದ್ದರೆ ಅದ್ಧೂರಿ ಸನ್ಮಾನ, ಭಾರೀ ಸ್ವಾಗತ ಕೋರಲಾಗುತ್ತದೆ. ಆದರೆ ದಾವಣಗೆರೆ ಜಿಲ್ಲೆಯ ಇಬ್ಬರು ಯುವತಿಯರು ಅಂತಾರಾಷ್ಟ್ರೀಯ ಮಟ್ಟದ ಥ್ರೋ ಬಾಲ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರೂ ಕನಿಷ್ಟ ಗೌರವಿಸುವ ಕೆಲಸ ಕೂಡ ಆಗಿಲ್ಲ. ಇದು ಸಾಧಕಿಯರಿಗೆ ಬೇಸರ ತರಿಸಿದೆ.
ಕಳೆದ ಮೇ ತಿಂಗಳಿನಲ್ಲಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋ ಬಾಲ್ ಪಂದ್ಯವಾಳಿಯಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದಿತ್ತು. ಈ ತಂಡದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಗತೂರು ಗ್ರಾಮದ ಸುಜಾತ ಹಾಗೂ ವದಿಗೆರೆ ಗ್ರಾಮದ ರೂಪಾ ಸಹ ಇದ್ದರು. ಅಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡವು ದೇಶಕ್ಕೆ ಕೀರ್ತಿ ತಂದಿತು. ಈ ತಂಡದ ಗೆಲುವಿನಲ್ಲಿ ಇವರಿಬ್ಬರ ಪಾತ್ರ ಅನನ್ಯವಾಗಿತ್ತು.
ದಾವಣಗೆರೆ ಯುವಕ ಸ್ಕಾಲರ್ ಶಿಪ್ನಲ್ಲೇ ಓದಿ, ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸ್
ರೂಪಾ ಹಾಗೂ ಸುಜಾತ ರೈತರ ಮಕ್ಕಳು. ಹಳ್ಳಿಯಲ್ಲೇ ಓದಿ ಬೆಳೆದವರು. ಸರಿಯಾದ ವ್ಯವಸ್ಥೆ ಇಲ್ಲದಿದ್ದರೂ ಚನ್ನಗಿರಿಗೆ ಬಂದು ಥ್ರೋಬಾಲ್ ಅಭ್ಯಾಸ ಮಾಡಿದ್ದರು. ಇವರ ಕಠಿಣ ಪರಿಶ್ರಮದ ಫಲವಾಗಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಬಂದರೂ ಜಿಲ್ಲಾಡಳಿತವಾಗಲೀ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಸಾಧಕಿಯರನ್ನು ಗೌರವಿಸುವ ಕೆಲಸ ಮಾಡದಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಬಡತನದಲ್ಲಿ ಹುಟ್ಟಿ ರೈತರ ಮಕ್ಕಳಾದ ಇವರು ಮಾಡಿರುವ ಸಾಧನೆ ಎಲ್ಲರೂ ಪ್ರಶಂಸೆಗೂ ಪಾತ್ರವಾಗಿದೆ. ಆಡಳಿತ ವರ್ಗ ಮಾತ್ರ ಗುರುತಿಸದಿರುವುದು ಇಲ್ಲಿನ ನಿರ್ಲಕ್ಷ್ಯ ಹಿಡಿದ ಕೈಗನ್ನಡಿಯಾಗಿದೆ.
ಕ್ರೀಡಾ ವಿಶ್ವವಿದ್ಯಾಲಯಕ್ಕಾಗಿ ಯಲಹಂಕದಲ್ಲಿ 100 ಎಕರೆ ಜಮೀನು ಗುರುತು
ಕ್ರೀಡಾ ಇಲಾಖೆಯಿಂದ ತಾತ್ಸಾರ
ನೇಪಾಳದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಟೂರ್ನಮೆಂಟ್ನಲ್ಲಿ ಆಯ್ಕೆಯಾಗಿದ್ದ 15 ಆಟಗಾರರೂ ಕರ್ನಾಟಕದಿಂದ ಆಯ್ಕೆಯಾಗದವರೇ ಇದ್ದರು. ಮಧ್ಯಮ ವರ್ಗದ ಕುಟುಂಬದ ಸುಜಾತ ಮತ್ತು ರೂಪ ದಾವಣಗೆರೆಯಿಂದ ಆಯ್ಕೆಯಾಗಿದ್ದರು. ಆದರೆ ನೇಪಾಳಕ್ಕೆ ಹೋಗಲು ಆರ್ಥಿಕ ಸಮಸ್ಯೆ ಉಂಟಾದ ಕಾರಣ ಕ್ರೀಡಾ ಇಲಾಖೆಯನ್ನು ಕೇಳಿಕೊಂಡಿದ್ದಾರೆ. ಆದರೆ ಈ ಕ್ರೀಡೆಗೆ ಸಹಾಯಧನ ನೀಡಲು ಸಾಧ್ಯವಿಲ್ಲ ಎಂದು ಇಲಾಖೆ ನಿರಾಕರಿಸಿದೆ, ನಂತರ ಸ್ಪೋರ್ಟ್ಸ್ ಕಿಟ್ನಾದರೂ ನೀಡಿ ಎಂದು ಕೇಳಿಕೊಂಡರೂ , ಕ್ರೀಡಾ ಇಲಾಖೆ ಅದಕ್ಕೂ ಮನಸ್ಸು ಮಾಡಿಲ್ಲ, ಬದಲಾಗಿ ಗೆದ್ದು ಬಂದ ನಂತರ ನೋಡೋಣ ಎಂದು ತಿಳಿಸಿದ್ದಾರೆ. ಕೊನೆಗೆ ಮನೆಯವರು ಕಷ್ಟು ಪಟ್ಟು ಹಣವನ್ನು ಹೊಂದಿಸಿಕೊಟ್ಟಿದ್ದಾರೆ. ಸ್ನೇಹಿತರು ನೀಡಿದ ನೆರವಿನಿಂದ ಭಾಗವಹಿಸಿದ್ದಾಗಿ ಇಬ್ಬರು ಕ್ರೀಡಾಪಟುಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರತಿಭೆ ವ್ಯರ್ಥವಾಗಲೂ ಬಿಡಬೇಡಿ
ಕಗತೂರು ಗ್ರಾಮದ ಸುಜಾತ ಈ ಕುರಿತು ಮಾತನಾಡಿ, "ನನಗೆ ಚಿಕ್ಕ ವಯಸ್ಸಿನಿಂದ ಕ್ರೀಡೆಗಳೆಂದರೆ ತುಂಬಾ ಇಷ್ಟ, ಹಲವಾರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೇನೆ. ಇತ್ತೀಚೆಗೆ ಪಂಜಾಬ್ನಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಹಾಗೂ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟ ಟೂರ್ನಮೆಂಟ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದೇನೆ. ಅಲ್ಲಿಗೆ ಆಯ್ಕೆಯಾದಾಗ ನನಗೆ ತುಂಬಾ ಖುಷಿಯಾಗಿತ್ತು. ಆದರೆ ಅಲ್ಲಿಗೆ ಹೋಗಬೇಕಾದರೆ ತುಂಬಾ ಕಷ್ಟಪಟ್ಟೆವು. ಮಧ್ಯಮ ವರ್ಗದವರಾದ ನಮಗೆ ಹಣಕಾಸಿನ ತೊಂದರೆಯಿತ್ತು. ಸಹಾಯಕ್ಕಾಗಿ ಸರಕಾರ ಮತ್ತು ಕ್ರೀಡಾ ಇಲಾಖೆಗೆ ಮೊರೆ ಹೋದೆವು, ಆದರೂ ನಮಗೆ ಯಾವುದೇ ನೆರವು ಸಿಗಲಿಲ್ಲ. ನಮ್ಮಂತಹ ಗ್ರಾಮೀಣ ಪ್ರತಿಭೆಗಳಿಗೆ ಸರಕಾರದಿಂದ ನೆರವು ಸಿಗದಿದ್ದರೆ ಖಂಡಿತ ಮೂಲೆಗುಂಪಾಗುತ್ತೇವೆ" ಎಂದು ಕಗತೂರು ಗ್ರಾಮದ ಸುಜಾತ ತಿಳಿಸಿದ್ದಾರೆ.
ಮಲೇಷ್ಯಾಗೆ ತೆರಳಲು ನೆರವಿನ ನಿರಿಕ್ಷೆ
"ಹಿಂದಿನ ಟೂರ್ನಮೆಂಟ್ಗಳಿಗೆ ನಮಗೆ ಯಾವ ಇಲಾಖೆಯಿಂದಲೂ ಬೆಂಬಲ ಸಿಗಲಿಲ್ಲ. ಆದರೆ ಪದಕ ಗೆದ್ದ ನಂತರವೂ ನಮಗೆ ಯಾವುದೇ ರೀತಿಯ ಗೌರವ ಅಥವಾ ಪ್ರಶಂಸೆ ಸಿಗಲಿಲ್ಲ. ಯಾರೂ ಕರೆ ಮಾಡಿ ನಮಗೆ ಶುಭ ಕೋರಲಿಲ್ಲ. ಮುಂದಿನ ಟೂರ್ನಮೆಂಟ್ ಮಲೇಷ್ಯಾಗೆ ಹೋಗಬೇಕಿದೆ ಈ ಸ್ಪರ್ಧೆಗಾಗಿ ಮತ್ತೆ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಈಗಾಲಾದರೂ ಸರಕಾರದ ನಮ್ಮ ನೆರವಿಗೆ ಬರಬಹುದು ಎಂದು ನಿರೀಕ್ಷೆಸಿದ್ದೆವು, ಆದರೆ ಇದುವರೆಗೆ ನಮ್ಮ ಮನವಿಗೆ ಯಾರು ಸ್ಪಂಧಿಸಿಲ್ಲ. ನಮಗೆ ಸರಕಾರ ಬೆಂಬಲ ನೀಡದಿರುವುದಕ್ಕೆ ನಮಗೆ ತುಂಬಾ ಬೇಜಾರಾಗಿದೆ. ದಯವಿಟ್ಟು ನಮ್ಮಂತಹ ಪ್ರತಿಭೆಗಳನ್ನು ಗುರುತಿಸಿ ಕೈಲಾದಷ್ಟು ನೆರವು ನೀಡಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ" ಎಂದು ಸುಜಾತ ವಿನಂತಿಸಿಕೊಂಡರು.
ಹಳ್ಳಿ ಪ್ರತಿಭೆಗಳನ್ನು ಗೌರವಿಸಿ
ಪ್ರಶಸ್ತಿ ಗೆದ್ದ ತಂಡದ ಮತ್ತೊಬ್ಬ ಕ್ರೀಡಾಪಟು ರೂಪ ಮಾತನಾಡಿ, "ದೇಶವನ್ನು ಪ್ರತಿನಿಧಿಸಿದ ನಮಗೆ ಅಲ್ಲಿಗೆ ತೆರಳಲು ಬೆಂಬಲ ಸಿಗಲಿಲ್ಲ. ಆದರೆ ಅಲ್ಲಿಂದ ಬಂದ ನಂತರವಾದರೂ ಹಳ್ಳಿ ಪ್ರತಿಭೆಗಳು ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿ ಗೌರವ ತಂದಿದ್ದಾರೆಂದು ನಮಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಬಹುದಿತ್ತು. ಆದರೆ ನಮಗೆ ಜಿಲ್ಲೆಯ ಯಾವೊಬ್ಬ ಅಧಿಕಾರಿ ಕರೆ ಮಾಡಿ ಪ್ರೇರೇಪಿಸುವ ಕೆಲಸ ಮಾಡಿಲ್ಲ. ನಮಗೆ ಸ್ಪಾನ್ಸರ್ ಮಾಡದೇ ಇದ್ದರೂ ಪರವಾಗಿಲ್ಲ, ಆದರೆ ಒಂದು ಅಭಿನಂದನೆಯನ್ನಾದರೂ ಸಲ್ಲಿಸಬಹುದಿತ್ತು. ದೊಡ್ಡಮಟ್ಟದ ಟೂರ್ನಮೆಂಟ್ಗಳಿಗೆ ಹೋಗುವ ನಮಗೆ ನೆರವಿನ ಅಗತ್ಯವಿರುತ್ತದೆ. ದೇಶಕ್ಕೆ ಒಳ್ಳೆ ಹೆಸರು ತರುವ ಹಳ್ಳಿ ಕ್ರೀಡಾಪಟುಗಳಿಗೆ ಸಾಧ್ಯವಾದಷ್ಟು ಬೆಂಬಲಿಸಿ" ಎಂದು ಕೇಳಿಕೊಂಡರು.
Recommended Video