ಮೊದ್ಲು ಆರ್ಸಿಬಿ ಬಿಟ್ಟು ಇಂಗ್ಲೆಂಡ್ಗೆ ಬಂದ್ಬಿಡು ಕಂದ: ಸ್ಟಾರ್ ಓಪನರ್ ಜೇಕಬ್ ಬೆಥೆಲ್ಗೆ ಕ್ರಿಕೆಟ್ ದಿಗ್ಗಜರ ಸಲಹೆ
RCB IPL 2026: ಐಪಿಎಲ್ 2026ರ ಸೀಸನ್ ಆರಂಭದಿಂದಲೂ ಉತ್ತಮ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್ 1ಕ್ಕೆ ಅರ್ಹತೆ ಪಡೆದಿದೆ. ಇಂತಹ ಸಂದರ್ಭದಲ್ಲೇ ಇಂಗ್ಲೆಂಡ್ ಮಾಜಿ ಕ್ರಿಕೆಟರ್ ಮೈಕಲ್ ವಾನ್ ಅವರು ಆರ್ಸಿಬಿ ಸ್ಟಾರ್ ಓಪನರ್ ಜೇಕಬ್ ಬೆಥೆಲ್ಗೆ ವಿಮಾನ ಹತ್ತಿ ತಕ್ಷವೇ ತಮ್ಮ ದೇಶಕ್ಕೆ ಮರಳುವಂತೆ ಸೂಚನೆ ನೀಡಿದ್ದಾರೆ. ಇದೇ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಐಪಿಎಲ್ನಲ್ಲಿ ಪ್ಲೇಆಫ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಸ್ಟಾರ್ ಆಟಗಾರ ಜೇಕಬ್ ಬೆಥೆಲ್ ಅವರಿಗೆ ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ಮಹತ್ವದ ಸಲಹೆ ನೀಡಿದ್ದಾರೆ. "ಒಂದು ವೇಳೆ ಆರ್ಸಿಬಿ ತಂಡದ ಮುಂದಿನ ಪಂದ್ಯಗಳಲ್ಲಿ ಜೇಕಬ್ ಬೆಥೆಲ್ ಆಡುವ ಹನ್ನೊಂದರ ಬಳಗದಲ್ಲಿ ಮೊದಲ ಆಯ್ಕೆಯ ಆಟಗಾರನಾಗದಿದ್ದರೆ ಅವರು ತಕ್ಷಣವೇ ಐಪಿಎಲ್ ಶಿಬಿರವನ್ನು ಬಿಟ್ಟು ಇಂಗ್ಲೆಂಡ್ಗೆ ಮರಳಬೇಕು," ಎಂದು ಒತ್ತಾಯಿಸಿದ್ದಾರೆ.

ಇಂಗ್ಲೆಂಡ್ಗೆ ಮರಳುವಂತೆ ಬೆಥೆಲ್ಗೆ ಸೂಚನೆ
ಇದಕ್ಕೂ ಮೊದಲು ಅಲಸ್ಟೇರ್ ಕುಕ್ ಸಹ ಇದೇ ಸಲಹೆಯನ್ನು ನೀಡಿದ್ದರು. ಆರ್ಸಿಬಿಯಲ್ಲಿ ಬೆಂಚ್ ಕಾಯುವ ಬದಲಿಗೆ ಬೆಥೆಲ್ ಅವರು ಇಂಗ್ಲೆಂಡ್ಗೆ ಮರಳಿ ಟೆಸ್ಟ್ ಕ್ರಿಕೆಟ್ನತ್ತ ಗಮನ ಹರಿಸುವುದು ಸೂಕ್ತ ಎಂದು ಅವರು ಸೂಚಿಸಿದ್ದರು. ಮೇ 22ರಂದು ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಬೆಥೆಲ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ಬಗ್ಗೆ ಟಾಸ್ ವೇಳೆ ಮಾತನಾಡಿದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಬೆಥೆಲ್ ಅವರು ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದರು.
ಮೈಕಲ್ ವಾನ್ ಹೇಳಿದ್ದೇನು?
ಮೈಕಲ್ ವಾನ್ ಅವರು ಕ್ರಿಕ್ಬಜ್ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿ, 'ಒಂದು ವೇಳೆ ಜೇಕಬ್ ಬೆಥೆಲ್ ಗಾಯಗೊಂಡಿದ್ದರೆ ಅವರು ತಕ್ಷಣವೇ ವಿಮಾನ ಹತ್ತಿ ಇಂಗ್ಲೆಂಡ್ಗೆ ಮರಳಬೇಕು. ಜೂನ್ 4ರಂದು ಇಂಗ್ಲೆಂಡ್ ತಂಡವು ಟೆಸ್ಟ್ ಪಂದ್ಯವನ್ನಾಡಲಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅವರು ಫಿಟ್ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಅವಕಾಶ ಸಿಗಬೇಕು. ಅವರು ಯುಕೆಗೆ ಮರಳಿ ಅಲ್ಲಿನ ವೈದ್ಯಕೀಯ ತಂಡದಿಂದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.
"ನಾನು ಹಳೆಯ ಕಾಲದ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ ಎನಿಸಬಹುದು. ಆರ್ಸಿಬಿಯು ಬೆಥೆಲ್ ಸೀಸನ್ ಮುಗಿಯುವವರೆಗೆ ಇಲ್ಲೇ ಇರಬೇಕೆಂದು ಹೇಳಬಹುದು. ಆದರೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪಂದ್ಯಗಳನ್ನು ಆಡುತ್ತಿಲ್ಲ ಎಂದಾದರೆ ಅವರು ಯುಕೆಗೆ ಮರಳುವುದು ಉತ್ತಮ. ಏಕೆಂದರೆ ಮುಂದಿನ ವಾರ ಇಂಗ್ಲೆಂಡ್ ತಂಡದ ತರಬೇತಿ ಶಿಬಿರ ಆರಂಭವಾಗಲಿದೆ," ಎಂದು ವಾನ್ ಹೇಳಿದ್ದಾರೆ.
ಐಪಿಎಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾನ್
"ನನಗೆ ಐಪಿಎಲ್ ಮೇಲೆ ಅಪಾರ ನಂಬಿಕೆಯಿದೆ. ಇಲ್ಲಿ ಪಂದ್ಯಗಳನ್ನು ಆಡಿದರೆ ಆಟದ ಬಗ್ಗೆ ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು. ಒಬ್ಬ ಯುವ ಆಟಗಾರನಾಗಿ ದೊಡ್ಡ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದರ ಮಹತ್ವ ನನಗೂ ಅರ್ಥವಾಗುತ್ತದೆ. ಆದರೆ ಆಡುವ ಅವಕಾಶ ಸಿಗದಿದ್ದಾಗ ತರಬೇತಿ ಶಿಬಿರಕ್ಕೆ ಮರಳುವುದು ಉತ್ತಮ," ಎಂಬುದು ಅವರು ಹೇಳಿದ್ದಾರೆ.
"ಜೇಕಬ್ ಬೆಥೆಲ್ ಕಳೆದ ವರ್ಷವೂ ಇಲ್ಲಿದ್ದರು, ಹಾಗಾಗಿ ಅವರು ಸಾಕಷ್ಟು ಕಲಿತಿದ್ದಾರೆ. ಈ ವರ್ಷ ಅವರು ಕೆಲವು ಪಂದ್ಯಗಳನ್ನಾಡಿದ್ದಾರೆ. ಆದರೆ ದೊಡ್ಡ ಮಟ್ಟದ ಯಶಸ್ಸು ಅವರಿಗೆ ಸಿಕ್ಕಿಲ್ಲ. ಕೋಚ್ ಬ್ರೆಂಡನ್ ಮೆಕಲಮ್ ಭಾನುವಾರವೇ ಯುಕೆ ತಲುಪಲಿದ್ದಾರೆ. ಸೋಮವಾರದಿಂದ ತರಬೇತಿ ಶಿಬಿರ ಆರಂಭವಾಗಲಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಬೆಥೆಲ್ ಯುಕೆಗೆ ತೆರಳಿ ತನ್ನ ತಂಡವನ್ನು ಸೇರಿಕೊಳ್ಳಬೇಕು," ಎಂದು ಅವರು ತಿಳಿಸಿದ್ದಾರೆ.
ಜಹೀರ್ ಖಾನ್ ಹೇಳಿದ್ದೇನು?
ಭಾರತದ ಕ್ರಿಕೆಟ್ ದಿಗ್ಗಜ ಜಹೀರ್ ಖಾನ್ ಮಾತನಾಡಿದ್ದು, "ಸಾಮಾನ್ಯವಾಗಿ ವಿದೇಶಿ ಆಟಗಾರರು ಐಪಿಎಲ್ ಸೀಸನ್ ಪೂರ್ಣಗೊಳ್ಳುವ ಮೊದಲೇ ವೈಯಕ್ತಿಕ ಕಾರಣಗಳಿಗಾಗಿ ಅಥವಾ ರಾಷ್ಟ್ರೀಯ ತಂಡದ ಕಾರಣಕ್ಕಾಗಿ ಹೊರನಡೆದರೆ ಅವರ ಒಪ್ಪಂದದ ಮೊತ್ತದಲ್ಲಿ ಕಡಿತವಾಗುವ ಸಾಧ್ಯತೆ ಇರುತ್ತದೆ. ಆರ್ಸಿಬಿ ಈಗ ಪ್ಲೇಆಫ್ನಂತಹ ನಿರ್ಣಾಯಕ ಹಂತದಲ್ಲಿರುವುದರಿಂದ ಬೆಥೆಲ್ ಇಡೀ ಸೀಸನ್ನ ಸಂಭಾವನೆಯನ್ನು ಪಡೆಯುವ ಉದ್ದೇಶದಿಂದ ತಂಡದ ಜೊತೆಗೇ ಇರಲು ಬಯಸುತ್ತಿರಬಹುದು," ಎಂಬುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಐಪಿಎಲ್ನಲ್ಲಿ ಬೆಂಚ್ ಕಾಯುವ ಬದಲು ಬೆಥೆಲ್ ಅವರು ಸ್ವದೇಶಕ್ಕೆ ಮರಳಿ ಕೌಂಟಿ ಕ್ರಿಕೆಟ್ ಆಡುವುದು ಉತ್ತಮ ಎಂಬುದು ಇಂಗ್ಲೆಂಡ್ ಮಾಜಿ ಆಟಗಾರರ ಒತ್ತಾಯವಾಗಿದೆ.












Click it and Unblock the Notifications