"ಅವನನ್ನ ಅಲ್ಲೇ ಸಾಯಲು ಬಿಡಿ": ಕೃನಾಲ್ ಪಾಂಡ್ಯ ಕುರಿತ ವಿವಾದಾತ್ಮಕ ಹೇಳಿಕೆಗೆ ಕೊನೆಗೂ ಸ್ಪಷ್ಟನೆ ನೀಡಿದ ಎಸ್. ಬದ್ರಿನಾಥ್
ರಾಯ್ಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2026ರ ಪಂದ್ಯದ ವೇಳೆ ಕೃನಾಲ್ ಪಾಂಡ್ಯ ಬಗ್ಗೆ ತಮಿಳು ಕಾಮೆಂಟರಿಯಲ್ಲಿ ತಾವು ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಎಸ್. ಬದ್ರಿನಾಥ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಭಾನುವಾರ ರಾಯ್ಪುರದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿತ್ತು. ಕ್ರೀಸ್ನಲ್ಲಿದ್ದ ಕೃನಾಲ್ ಪಾಂಡ್ಯ ತೀವ್ರ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಈ ವೇಳೆ ಎದುರಾಳಿ ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ರಿಯಾನ್ ರಿಕೆಲ್ಟನ್ ಅವರು ಕೃನಾಲ್ ಪಾಂಡ್ಯ ಬಳಿ ತೆರಳಿ ಸಹಾಯ ಮಾಡಲು ಮುಂದಾಗಿದ್ದರು. ತಮಿಳು ಕಾಮೆಂಟರಿ ಪ್ಯಾನೆಲ್ನಲ್ಲಿದ್ದ ಬದರಿನಾಥ್ ಈ ದೃಶ್ಯದ ಬಗ್ಗೆ ಮಾತನಾಡಿದ್ದರು. ಆದರೆ, "ಪಾಂಡ್ಯ ಎದುರಾಳಿ ಆಟಗಾರನಾಗಿದ್ದು, ರಿಕೆಲ್ಟನ್ ಸಹಾಯ ಮಾಡಬಾರದು. ಆತನನ್ನು ಅಲ್ಲೇ ಸಾಯಲು ಬಿಡಬೇಕು" ಎಂದು ಬದ್ರಿನಾಥ್ ತಮಾಷೆ ಮಾಡಿದ್ದಾರೆ ಎಂದು ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು.

ಸ್ಪಷ್ಟನೆ ನೀಡಿದ ಬದ್ರಿನಾಥ್
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡ ನಂತರ, ಬದ್ರಿನಾಥ್ ತಮ್ಮ ಎಕ್ಸ್ ಖಾತೆಯಲ್ಲಿ, ಕಾಮೆಂಟರಿ ಬಾಕ್ಸ್ನಲ್ಲಿ ತಾವು ಹೇಳಿದ್ದೇನು ಎಂಬುದರ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾರೆ. "ಪಂದ್ಯ ತೀವ್ರ ಕುತೂಹಲ ಘಟ್ಟದಲ್ಲಿದ್ದರೂ ಮತ್ತು ಎರಡೂ ತಂಡಗಳ ನಡುವೆ ಕೃನಾಲ್ ಪಾಂಡ್ಯ ಪ್ರಮುಖ ಆಟಗಾರರಾಗಿದ್ದರೂ, ಅವರಿಗೆ ರಿಕೆಲ್ಟನ್ ಸಹಾಯ ಮಾಡಿದ್ದನ್ನು ನಾನು ಕೊಂಡಾಡಿದ್ದೆ. ಆಟದ ಸ್ಫೂರ್ತಿಯನ್ನು ಮೆರೆದಿದ್ದಕ್ಕಾಗಿ ರಿಕೆಲ್ಟನ್ ಮತ್ತು ಮುಂಬೈ ತಂಡಕ್ಕೆ ಫೇರ್ ಪ್ಲೇ ಅಂಕಗಳನ್ನು ನೀಡಬೇಕು ಎಂದಿದ್ದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಅವನು ಅಲ್ಲೇ ಸಾಯಲಿ... ಎಂಬುದು ನನ್ನ ಮನಸ್ಥಿತಿಯಲ್ಲ. ನಾನೇ ಖುದ್ದಾಗಿ ಹೋಗಿ ಅವನಿಗೆ ಸಹಾಯ ಮಾಡುತ್ತಿದ್ದೆ. ರಿಯಾನ್ ರಿಕೆಲ್ಟನ್ ಅವರದ್ದು ಅತ್ಯುತ್ತಮ ನಡೆಯಾಗಿದ್ದು, ಅದಕ್ಕಾಗಿ ಅವರಿಗೆ ಮತ್ತು ಮುಂಬೈ ತಂಡಕ್ಕೆ ಫೇರ್ ಪ್ಲೇ ಅಂಕಗಳನ್ನು ಕೊಡಬೇಕು ಎಂದು ನಾನು ಕಾಮೆಂಟರಿಯಲ್ಲಿ ಹೇಳಿದ್ದೆ. ಆಡುಭಾಷೆಯ ತಮಿಳು ಅರ್ಥವಾಗದವರಿಗಾಗಿ ನಾನು ಈ ಸ್ಪಷ್ಟನೆ ನೀಡುತ್ತಿದ್ದೇನೆ" ಎಂದು ಬದರಿನಾಥ್ ಬರೆದುಕೊಂಡಿದ್ದಾರೆ.
“Let him die there”… that’s not going to be my attitude. I will go and stretch him. Great gesture from Ryan Rickelton.. Fair Play points should be given to him and MI for that.
— S.Badrinath (@s_badrinath) May 11, 2026
This is what I said on air, for people who don’t understand colloquial Tamil. 🙏
ರೋಚಕ ಜಯ ಸಾಧಿಸಿದ ಆರ್ಸಿಬಿ
ಭಾನುವಾರ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹಾಲಿ ಚಾಂಪಿಯನ್ ಆರ್ಸಿಬಿ ಎರಡು ವಿಕೆಟ್ಗಳ ರೋಚಕ ಜಯ ಸಾಧಿಸಿ, ಐಪಿಎಲ್ 2026ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಸೋಲಿನೊಂದಿಗೆ ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಆರ್ಸಿಬಿ ಪರ ಕೃನಾಲ್ ಪಾಂಡ್ಯ 73 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು.












Click it and Unblock the Notifications