KL Rahul: ಐಪಿಎಲ್ ಮೆಗಾ ಹರಾಜಿಗೆ ಮುನ್ನ ದೊಡ್ಡ ಸೂಚನೆ ಕೊಟ್ಟ ಕನ್ನಡಿಗ ಕೆಎಲ್ ರಾಹುಲ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜು ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದೆ. ಭಾರತೀಯ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಹರಾಜಿನಲ್ಲಿದ್ದು ಎಷ್ಟು ಮೊತ್ತ ಪಡೆಯುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ರನ್ನು ತಂಡ ಕೈಬಿಟ್ಟಿದ್ದು ನಿರೀಕ್ಷಿತವಾಗಿತ್ತು.
2023ರ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು ಫ್ರಾಂಚೈಸಿ ಮಾಲಿಕ ಸಂಜೀವ್ ಗೊಯೆಂಕಾರ ಅಸಮಾಧಾನಕ್ಕೆ ಕಾರಣವಾಗಿತ್ತು. ಸನ್ರೈಸರ್ಸ್ ಹೈದಾರಾಬಾದ್ ವಿರುದ್ಧ ಎಲ್ಎಸ್ಜಿ ಹೀನಾಯವಾಗಿ ಸೋತ ಬಳಿಕ ಮೈದಾನದಲ್ಲೇ ಕೆಎಲ್ ರಾಹುಲ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು,

ಕೆಎಲ್ ರಾಹುಲ್ ಮುಂದಿನ ಐಪಿಎಲ್ನಲ್ಲಿ ಎಲ್ಎಸ್ಜಿ ಪರವಾಗಿ ಆಡುವುದಿಲ್ಲ ಎಂದು ಅಭಿಮಾನಿಗಳು ಆಗಲೇ ಭವಿಷ್ಯ ನುಡಿದಿದ್ದರು. ಅಭಿಮಾನಿಗಳ ನಿರೀಕ್ಷೆಯಂತೆ ಮೆಗಾ ಹರಾಜಿಗೆ ಮುನ್ನ ಎಲ್ಎಸ್ಜಿ ತನ್ನ ನಾಯಕನನ್ನೇ ತಂಡದಿಂದ ಬಿಡುಗಡೆ ಮಾಡಿತು.
ಕೆಎಲ್ ರಾಹುಲ್ ಹೇಳಿದ್ದೇನು?
ಆಸ್ಟ್ರಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಕೆಎಲ್ ರಾಹುಲ್, ಕೊನೆಗೂ ಎಲ್ಎಸ್ಜಿ ತಂಡದಿಂದ ದೂರವಾದ ಬಗ್ಗೆ ಮಾತನಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಪೋಸ್ಟ್ ಮಾಡಿದ ಪ್ರೋಮೋ ವಿಡಿಯೋದಲ್ಲಿ ಕೆಎಲ್ ರಾಹುಲ್ ತಮ್ಮ ಟಿ20 ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತನಾಡಿದ್ದು ವೈರಲ್ ಆಗುತ್ತಿದೆ.
"ನಾನು ಕೆಲವು ತಿಂಗಳಿನಿಂದ ಟಿ20 ತಂಡದಿಂದ ಹೊರಗುಳಿದಿದ್ದೇನೆ. ಆಟಗಾರನಾಗಿ ನನ್ನ ಸ್ಥಾನ ಏನು ಎನ್ನುವುದು ನನಗೆ ಗೊತ್ತಿದೆ, ತಂಡಕ್ಕೆ ವಾಪಸ್ ಬರಲು ಏನು ಮಾಡಬೇಕು ಎನ್ನುವುದು ನನಗೆ ತಿಳಿದಿದೆ. ಆದ್ದರಿಂದ ಈ ಬಾರಿ ಐಪಿಎಲ್ ನನ್ನ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಎಂದು ನಾನು ನೋಡುತ್ತೇನೆ. ಭಾರತ ಟಿ20 ತಂಡಕ್ಕೆ ಮರಳುವುದು ನನ್ನ ಗುರಿಯಾಗಿದೆ. ನಾನು ನನ್ನ ಆಟವನ್ನು ಆನಂದಿಸಲು ಐಪಿಎಲ್ ಉತ್ತಮ ಅವಕಾಶ ಎಂದು ಹೇಳಿದ್ದಾರೆ.
ಮೆಗಾ ಹರಾಜಿಗೆ ಬಂದಿದ್ಯಾಕೆ ಎಂದು ಕೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಹೊಸದಾಗಿ ಆರಂಭಿಸಲು ಬಯಸುತ್ತೇಬೆ. ನನಗೆ ಸ್ವಾತಂತ್ರ ಸಿಗುವ ಸ್ಥಳದಲ್ಲಿ ಹೋಗಿ ಆಡಲು ಬಯಸುತ್ತೇನೆ. ತಂಡದ ವಾತಾವರಣ ಉತ್ತಮವಾಗಿರಬೇಕು, ಕೆಲವೊಮ್ಮೆ ನೀವು ದೂರ ಸರಿದು ಒಳ್ಳೆಯದನ್ನು ಹುಡುಕಿಕೊಳ್ಳಬೇಕು" ಎಂದು ಮಾರ್ಮಿಕವಾಗಿ ಉತ್ತರ ಕೊಟ್ಟರು.












Click it and Unblock the Notifications