SMAT 2024: ತಮಿಳುನಾಡು ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ
ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಮಿಳುನಾಡು ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಇಂದೋರ್ ನ ಎಮರಾಲ್ಡ್ ಹೈಸ್ಕೂಲ್ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ಮಾರಕ ಬೌಲಿಂಗ್ ದಾಳಿಗೆ ತಮಿಳುನಾಡು ತತ್ತರಿಸಿತು. ಮನೀಷ್ ಪಾಂಡೆ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ಗಳ ಭರ್ಜರಿ ಗೆಲುವ ಸಾಧಿಸಿದ ಕರ್ನಾಟಕ, ರನ್ರೇಟ್ ಉತ್ತಮಪಡಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಗೆದ್ದ ತಮಿಳುನಾಡು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಬೌಲರ್ ಗಳ ಮುಂದೆ ತಮಿಳುನಾಡು ಬ್ಯಾಟಿಂಗ್ ಪಡೆ ತತ್ತರಿಸಿತು. 20 ಓವರ್ ಗಳಲ್ಲಿ 90 ರನ್ ಗಳಿಸಿ ಆಲೌಟ್ ಆಯಿತು. ವರುಣ್ ಚಕ್ರವರ್ತಿ 24 ರನ್ ಗಳಿಸಿದ್ದೇ ತಮಿಳುನಾಡು ಪರ ಬ್ಯಾಟರ್ ಗಳಿಸಿದ ಅತ್ಯಧಿಕ ರನ್ ಆಗಿದೆ.

ಬಾಬಾ ಇಂದ್ರಜಿತ್ 5 ರನ್ ಗಳಿಸಿದರೆ, ಎನ್ ಜಗದೀಶನ್ ಮತ್ತು ವಿಜಯ್ ಶಂಕರ್ ಯಾವುದೇ ರನ್ ಗಳಿಸದೆ ಔಟಾದರು. ಶರತ್ ಕುಮಾರ್ 19 ರನ್, ಮೊಹಮ್ಮದ್ ಅಲಿ 15 ರನ್, ರಿತಿಕ್ ಈಶ್ವರನ್ 12 ರನ್ ಗಳಿಸಿದರು. ಕರ್ನಾಟದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವಾಸುಕಿ ಕೌಶಿಕ್ 4 ಓವರ್ ಗಳಲ್ಲಿ 10 ರನ್ ನೀಡಿ 3 ವಿಕೆಟ್ ಪಡೆದರು. ಮನೋಜ್ ಭಾಂಡಗೆ 4 ಓವರ್ ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ವಿದ್ಯಾದರ್ ಪಾಟೀಲ್ 2 ವಿಕೆಟ್ ಪಡೆದರೆ, ವಿಜಯ್ಕುಮಾರ್ ವೈಶಾಖ್ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
ಮನೀಶ್ ಪಾಂಡೆ ಅಬ್ಬರ
91 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಕರ್ನಾಟಕ 11.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 93 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಮನೀಷ್ ಪಾಂಡೆ 29 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 42 ರನ್ ಗಳಿಸಿದರು. ನಾಯಕ ಮಯಾಂಕ್ ಅಗರ್ವಾಲ್ 27 ಎಸೆತಗಳಲ್ಲಿ 30 ರನ್ ಗಳಿಸಿದರು.
ಈ ಭರ್ಜರಿ ಗೆಲುವಿನ ಮೂಲಕ ಕರ್ನಾಟಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಕರ್ನಾಟಕ ಬಿ ಗುಂಪಿನಲ್ಲಿ ಆಡುತ್ತಿದ್ದು, ಈವರೆಗೂ ಆಡಿರುವ 5 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವ ಸಾಧಿಸಿದ್ದು 2 ಪಂದ್ಯಗಳಲ್ಲಿ ಸೋಲು ಕಂಡಿದ್ದು 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.












Click it and Unblock the Notifications