IPL 2023: ಮುಂಬೈಗೆ ವಾಪಸಾದ ವಿರಾಟ್ ಕೊಹ್ಲಿ: ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಸೋತ ಬಳಿಕ ಭಾರತ ತಂಡದ ಆಟಗಾರು ಐಪಿಎಲ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ, ಪಂದ್ಯದ ಬಳಿಕ ಮುಂಬೈಗೆ ವಾಪಸಾಗಿದ್ದಾರೆ.
ಚೆನ್ನೈನಿಂದ ಮುಂಬೈಗೆ ತೆರಳುವ ಮುನ್ನ ವಿರಾಟ್ ಕೊಹ್ಲಿ ಸೋಲಿನ ಬೇಸರವನ್ನು ಬದಿಗಿಟ್ಟು ಅಭಿಮಾನಿಗೆ ಆಟೋಗ್ರಾಫ್ ನೀಡಿದ್ದಾರೆ. ಎರಡು ದಿನಗಳ ಕಾಲ ಕುಟುಂಬದ ಜೊತೆ ವಿಶ್ರಾಂತಿ ಪಡೆಯಲಿರುವ ವಿರಾಟ್ ಕೊಹ್ಲಿ, ಮಾರ್ಚ್ 26ರಂದು ಬೆಂಗಳೂರಿಗೆ ಬರಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಗೆ ಅವರು ತಯಾರಿ ಆರಂಭಿಸಲಿದ್ದಾರೆ.

ಅದಕ್ಕೂ ಮುನ್ನ ಆರ್ಸಿಬಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನ್ಬಾಕ್ಸ್ ಕಾರ್ಯಕ್ರಮವನ್ನು ಯೋಜಿಸಿದೆ, ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಭಾಗವಹಿಸಲಿದ್ದಾರೆ. ಆರ್ಸಿಬಿಯ ಮಾಜಿ ಆಟಗಾರರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ಗೆ ವಿಶೇಷವಾದ ಅಭಿನಂದನೆಯನ್ನು ಸಲ್ಲಿಸುವ ಕಾರ್ಯಕ್ರಮ ಇದಾಗಿದೆ.
ಈಗಾಗಲೇ ತಂಡದ ಪ್ರಮುಖ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ತಯಾರಿ ಆರಂಭಿಸಿದ್ದಾರೆ. ನಾಯಕ ಫಾಫ್ ಡುಪ್ಲೆಸಿಸ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದ ಬಾರಿ ಪ್ಲೇ ಆಫ್ಗೆ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.

ವಿರಾಟ್ ಕೊಹ್ಲಿ ನೋಡಲು ಅಭಿಮಾನಿಗಳ ಕಾತರ
ಕೊವಿಡ್-19 ಸಾಂಕ್ರಾಮಿಕದ ಬಳಿಕ ಇದೇ ಮೊದಲ ಬಾರಿಗೆ ಆರ್ ಸಿಬಿ ತವರಿನಲ್ಲಿ ಪಂದ್ಯಗಳನ್ನಾಡಲಿದೆ. ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯ ಆಟವನ್ನು ಚಿನ್ನಸ್ವಾಮಿ ಅಂಗಳದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಚಿನ್ನಸ್ವಾಮಿಯಲ್ಲಿ ನಡೆಯುವ ಎಲ್ಲಾ ಪಂದ್ಯಗಳ ಬಹುತೇಕ ಟಿಕೆಟ್ಗಳು ಮಾರಾಟವಾಗಿವೆ. ದುಬಾರಿ ದರ ಇದ್ದರೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 54 ರನ್ ಗಳಿಸಿರುವ ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಿದ್ದಾರೆ. ಕಳೆದ ಬಾರಿ ರನ್ ಗಳಿಸಲು ಪರದಾಡುತ್ತಿದ್ದ ಕೊಹ್ಲಿ, ಈ ಬಾರಿ ಸ್ಫೋಟಕ ಬ್ಯಾಟಿಂಗ್ ಆಡುವ ಸಾಧ್ಯತೆ ಇದೆ. ಮ್ಯಾಕ್ಸ್ವೆಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ತವರಿನಲ್ಲಿ ಆಡಲು ಖುಷಿಯಾಗುತ್ತೆ ಎಂದ ಡುಪ್ಲೆಸಿಸ್
ಕಳೆದ ಆವೃತ್ತಿಯಲ್ಲಿ ಆರ್ ಸಿಬಿ ತಂಡಕ್ಕೆ ನಾಯಕನಾಗಿ ನೇಮಕಗೊಂಡ ಫಾಫ್ ಡು ಪ್ಲೆಸಿಸ್ ಇದೇ ಮೊದಲ ಬಾರಿಗೆ ತವರಿನಲ್ಲಿ ಆರ್ ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ. ಸಿಎಸ್ಕೆ ತಂಡದಲ್ಲಿದ್ದಾಗ ಬೆಂಗಳೂರಿನಲ್ಲಿ ಆಡಿದ ಅನುಭವ ಅವರಿಗಿದೆ. ಆರ್ ಸಿಬಿ ತಂಡದ ಅಭಿಮಾನಿಗಳ ಪ್ರೋತ್ಸಾಹ, ಬೆಂಬಲದ ಬಗ್ಗೆ ತಿಳಿದಿರುವ ಅವರು ಬೆಂಗಳೂರಿನಲ್ಲಿ ಪಂದ್ಯವನ್ನಾಡಲು ಕಾಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಎಸ್ಎ20 ಲೀಗ್ನಲ್ಲಿ ಜೋ ಬರ್ಗ್ ಸೂಪರ್ ಕಿಂಗ್ಸ್ ತಂಡವನ್ನು ಡುಪ್ಲೆಸಿಸ್ ಮುನ್ನಡೆಸಿದ್ದರು. ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದ ಅವರು ತಮ್ಮ ತಂಡವನ್ನು ಸೆಮಿಫೈನಲ್ಗೆ ಮುನ್ನಡೆಸಿದ್ದರು. ಶತಕ ಕೂಡ ಬಾರಿಸಿರುವ ಅವರು, ಅದೇ ಪ್ರದರ್ಶನವನ್ನು ಐಪಿಎಲ್ನಲ್ಲಿ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ಆರ್ ಸಿಬಿ ಪ್ಲೇಆಫ್ಗೆ ಪ್ರವೇಶಿಸಿತ್ತು. ಈ ಬಾರಿ ಬಲಿಷ್ಠ ತಂಡವನ್ನು ಹೊಂದಿದ್ದು ಇನ್ನೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆರ್ ಸಿಬಿ ಈ ಬಾರಿಯ ಐಪಿಎಲ್ನಲ್ಲಿ ಮೊದಲನೇ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಏಪ್ರಿಲ್ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.












Click it and Unblock the Notifications