RCB: ಮುಂಬೈ ಹಾದಿ ಹಿಡಿದ ಆರ್ಸಿಬಿ; ಕಪ್ ಗೆಲ್ಲಲು ಡಿಕೆ ಮಾಸ್ಟರ್ ಪ್ಲಾನ್
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಮೆಗಾ ಹರಾಜಿಗೆ ಇನ್ನು 4 ದಿನ ಮಾತ್ರ ಬಾಕಿ ಇದೆ. ನವೆಂಬರ್ 24-25ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಎಲ್ಲಾ ತಂಡಗಳು ಬಲಿಷ್ಠ ತಂಡ ಕಟ್ಟಲು ಯೋಜನೆ ಹಾಕಿಕೊಂಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೂಡ ಮೆಗಾ ಹರಾಜಿಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಬಲಿಷ್ಠ ತಂಡ ಕಟ್ಟುವ ಲೆಕ್ಕಾಚಾರದಲ್ಲಿದೆ.
ಪ್ರತಿ ಬಾರಿ ಹರಾಜಿನಲ್ಲೂ ಆರ್ಸಿಬಿ ಎಡವಟ್ಟು ಮಾಡುತ್ತಲೇ ಇತ್ತು, ಬೌಲರ್, ಆಲ್ರೌಂಡರ್ ಖರೀದಿಯಲ್ಲಿ ಎಡವಿದ ಪರಿಣಾಮ ಪಂದ್ಯಾವಳಿಯಲ್ಲಿ ಕಾಣಿಸುತ್ತಿತ್ತು. ಆರ್ ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದ್ದರೂ ಬೌಲಿಂಗ್ ಪರಿಣಾಮಕಾರಿಯಾಗಿ ಇರುತ್ತಿರಲಿಲ್ಲ. ಆದರೆ ಈ ಬಾರಿ ಬಲಿಷ್ಠ ಬೌಲಿಂಗ್ ಪಡೆಯನ್ನು ಕಟ್ಟುವ ಬಗ್ಗೆ ಮೊ ಬೊಬಾಟ್ ಸುಳುವು ಕೊಟ್ಟಿದ್ದಾರೆ. ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಈ ಬಾರಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಮೆಗಾ ಹರಾಜಿಗೆ ಮುನ್ನ ಆರ್ಸಿಬಿ ಯುವ ಆಟಗಾರರನ್ನು ಟ್ರಯಲ್ಸ್ಗೆ ಕರೆಯುತ್ತದೆ. ಈ ವರ್ಷ ಕೂಡ ಸಾಕಷ್ಟು ಯುವ ಆಟಗಾರರು ಆರ್ಸಿಬಿ ಟ್ರಯಲ್ಸ್ಗೆ ಬಂದಿದ್ದಾರೆ. ದಿನೇಶ್ ಕಾರ್ತಿಕ್ ಎಲ್ಲಾ ಆಟಗಾರರನ್ನು ಹತ್ತಿರದಿಂದ ನೋಡಿದ್ದು, ಭವಿಷ್ಯದ ಸೂಪರ್ ಸ್ಟಾರ್ ಗಳನ್ನು ಆಯ್ಕೆ ಮಾಡಲಿದ್ದಾರೆ.
ಕರ್ನಾಟಕ, ತಮಿಳುನಾಡು ಆಟಗಾರರು
ದಿನೇಶ್ ಕಾರ್ತಿಕ್ಗೆ ಸ್ಥಳೀಯ ಆಟಗಾರರ ಬಗ್ಗೆ ಹೆಚ್ಚು ಮಾಹಿತಿ ಇದೆ. ತಮಿಳುನಾಡು ಪ್ರೀಮಿಯರ್ ಲೀಗ್, ಮಹಾರಾಜ ಕಪ್, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಉತ್ತಮ ಪ್ರದರ್ಶನ ನೀಡಿದ ಆಟಗಾರರ ಮೇಲೆ ಕಣ್ಣಿಡಲಾಗಿದೆ.
ಕರ್ನಾಟಕದ ಮಿಸ್ಟರಿ ಬೌಲರ್ ಎಂದೇ ಹೆಸರು ಮಾಡುತ್ತಿರುವ ದೀಪಕ್ ದೇವಾಡಿಗ, ಬೌಲಿಂಗ್ ಆಲ್ರೌಂಡರ್ ಮನ್ವಂತ್ ಕುಮಾರ್, ಶುಭಮ್ ದುಬೆ ಆರ್ಸಿಬಿ ಟ್ರಯಲ್ಸ್ನಲ್ಲಿ ಭಾಗಿಯಾಗಿದ್ದಾರೆ. ದೆಹಲಿಯ ವೇಗದ ಬೌಲರ್ ಮೋನೆ ಗ್ರವಾಲ್ರನ್ನು ಆಂಡಿ ಫ್ಲವರ್ ಮತ್ತು ದಿನೇಶ್ ಕಾರ್ತಿಕ್ ಮೆಚ್ಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಮಿಳುನಾಡು ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್ ಟ್ರಯಲ್ಸ್ನಲ್ಲಿ ಭಾಗವಹಿಸಿದ್ದರು, ದಿನೇಶ್ ಕಾರ್ತಿಕ್ ಸಿದ್ಧಾರ್ಥ್ ಬೌಲಿಂಗ್ ಕಂಡು ಮೆಚ್ಚಿಕೊಂಡಿದ್ದಾರೆ. ಕಳೆದ ವರ್ಷ ಕೆಕೆಆರ್ ತಂಡದ ಪರವಾಗಿ ಆಡಿ ಗಮನ ಸೆಳೆದಿದ್ದ ಆಂಗ್ಕ್ರಿಶ್ ರಘುವಂಶಿ ಕೂಡ ಟ್ರಯಲ್ಸ್ನಲ್ಲಿ ಭಾಗವಹಿಸಿದ್ದರು. ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ ಕೂಡ ಚಿನ್ನಸ್ವಾಮಿಯಲ್ಲಿ ಟ್ರಯಲ್ಸ್ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಆಡಿ ಗಮನ ಸೆಳೆದಿದ್ದ ಆಶುತೋಷ್ ಶರ್ಮಾ ಕೂಡ ಕಾಣಿಸಿಕೊಂಡಿದ್ದು ವಿಶೇಷ.
ಬಲಿಷ್ಠ ತಂಡ ಕಟ್ಟಿದರೆ ಅರ್ಧ ಪಂದ್ಯಾವಳಿ ಗೆದ್ದಂತೆ ಎನ್ನುವುದು ತಜ್ಞರು ಹೇಳುವ ಮಾತು. ಚಿನ್ನಸ್ವಾಮಿಯಲ್ಲಿ ಬೌಲಿಂಗ್ ಮಾಡುವುದು ಕಷ್ಟದ ಕೆಲಸ, ಆದ್ದರಿಂದಲೇ ಅನುಭವಿ, ಮಿಸ್ಟರಿ ಬೌಲರ್ ಗಳು ಬೇಕಾಗಿದ್ದು, ಉತ್ತಮ ತಂಡ ಕಟ್ಟಲು ದಿನೇಶ್ ಕಾರ್ತಿಕ್ ನೀಡುವ ಸಲಹೆ ತುಂಬಾ ಮಹತ್ವದ್ದಾಗಿದೆ.
ಮುಂಬೈ ಇಂಡಿಯನ್ಸ್ ಕೂಡ ಯುವ ಆಟಗಾರರನ್ನು ಆಯ್ಕೆ ಮಾಡಿಕೊಂಡು ಅವರನ್ನು ಸಜ್ಜಾಗಿಸುತ್ತದೆ. ಆದ್ದರಿಂದಲೇ ಎಂಐ ತಂಡವು ಐದು ಬಾರಿ ಚಾಂಪಿಯನ್ ಆಗಿದೆ. ಈಗ ಆರ್ ಸಿಬಿ ಕೂಡ ಇದೇ ಹಾದಿ ಹಿಡಿದಿದ್ದು ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.












Click it and Unblock the Notifications