IPL 2023: 5 ಸಿಕ್ಸರ್ ಹೊಡೆಸಿಕೊಂಡ ಯಶ್ ದಯಾಳ್ಗೆ ತಂದೆಯ ಸಮಾಧಾನದ ಆಸರೆ!
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟನ್ಸ್ ಬೌಲರ್ ಯಶ್ ದಯಾಳ್ ಕೆಟ್ಟ ದಾಖಲೆ ಬರೆದಿದ್ದಾರೆ. ಚೇಸಿಂಗ್ ಮಾಡುವ ಸಂದರ್ಭದಲ್ಲಿ 20ನೇ ಓವರ್ ಬೌಲಿಂಗ್ ಮಾಡಿದ ಅವರು 31 ರನ್ಗಳನ್ನು ಬಿಟ್ಟುಕೊಡುವ ಮೂಲಕ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಯಾವುದೇ ಮಾದರಿ ಕ್ರಿಕೆಟ್ನಲ್ಲಿ ಕೊನೆಯ ಓವರ್ ನಲ್ಲಿ 29 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ.
ಕೊನೆಯ ಓವರ್ ನಲ್ಲಿ 30 ರನ್ ಸಿಡಿಸಿದ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ಗೆ ಜೀವನದ ಮರೆಯಲಾಗದ ಸಂಭ್ರಮದ ದಿನವಾದರೆ ಯಶ್ ದಯಾಳ್ಗೆ ಕ್ರಿಕೆಟ್ ಬದುಕಿನ ಅತ್ಯಂತ ಕೆಟ್ಟ ದಿನವಾಯಿತು. ಪಂದ್ಯ ಮುಗಿಯುತ್ತಿದ್ದಂತೆ ಅಪರಾಧಿ ಭಾವನೆಯಿಂದ ಮೈದಾನದಲ್ಲೇ ಕುಸಿದರು, ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು. ತಂಡದ ಸಹ ಆಟಗಾರರು ಬಂದು ದಯಾಳ್ಗೆ ಸಮಾಧಾನ ಮಾಡಿದರು.

ದಯಾಳ್ 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೆ 69 ರನ್ ಬಿಟ್ಟುಕೊಟ್ಟರು. ಐಪಿಎಲ್ ಇತಿಹಾಸದಲ್ಲಿ ಎರಡನೇ ದುಬಾರಿ ಬೌಲರ್ ಎನಿಸಿಕೊಂಡರು. ಯಶ್ ದಯಾಳ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಮಾನಸಿಕವಾಗಿ ಕುಸಿದ ಯಶ್ಗೆ ಅವರ ತಂದೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ.
ಅಹಮದಾಬಾದ್ ಸಮೀಪದಲ್ಲಿರುವ ಅಲಹಾಬಾದ್ನಲ್ಲಿ ಚಂದ್ರಪಾಲ್ ದಯಾಳ್ ತನ್ನ ಮಗನ ನೋವನ್ನು ಅರ್ಥಮಾಡಿಕೊಂಡಿದ್ದಾರೆ. ಚಂದ್ರಪಾಲ್ ಕೂಡ ಕ್ರಿಕೆಟ್ ಆಟಗಾರ, ವೇಗದ ಬೌಲರ್ ಆಗಿದ್ದ ಅವರಿಗೆ ಮಗನ ಭಾವನೆಗಳ ಅರ್ಥವಾಗಿದೆ. ಹೀಗಾಗಿ ಮಗನನ್ನು ಭೇಟಿ ಮಾಡಿ ಮಾನಸಿಕವಾಗಿ ಸ್ಥೈರ್ಯ ತುಂಬಿದ್ದಾರೆ.
ಆತ ಕಡಿಮೆ ಮಾತನಾಡುತ್ತಾನೆ
"ಆತನ ಬಳಿ ಹೋಗಿ ಮಾತನಾಡುವಂತೆ ನಾನು ಮನೆಯವರಿಗೆ ಹೇಳಿದೆ. ಆತ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಆತ ಖಿನ್ನತೆಗೆ ಒಳಗಾಗುತ್ತಾನೆ, ಅವನು ಕಡಿಮೆ ಮಾತನಾಡುತ್ತಾನೆ, ಅಂತರ್ಮುಖಿ. ಈ ರೀತಿಯ ಘಟನೆಗಳು ಅವನನ್ನು ಮತ್ತಷ್ಟು ಕುಗ್ಗಿಸುತ್ತವೆ. ಯಾಕಾಗಿ ಇದು ಸಂಭವಿಸಿತು ಎನ್ನುವ ಪ್ರಶ್ನೆ ಕಾಡುತ್ತಿದೆ" ಎಂದು ಚಂದ್ರಪಾಲ್ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಮಗನಿಗೆ ಸ್ಥೈರ್ಯ ತುಂಬಲು ಚಂದ್ರಪಾಲ್ ಯಶ್ಗೆ ಹಲವು ಉದಾಹರಣೆಗಳನ್ನು ನೀಡಿದ್ದಾರೆ. ಕ್ರಿಕೆಟ್ನಲ್ಲಿ ಈ ರೀತಿ ಆಗುವುದು ಇದೇ ಮೊದಲಲ್ಲ ಎಂದ ಅವರು ಮಗನಿಗೆ ನೆನಪು ಮಾಡಿದ್ದಾರೆ. ಇಂಗ್ಲೆಂಡ್ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಒಂದೇ ಓವರ್ ನಲ್ಲಿ 6 ಸಿಕ್ಸರ್ ಹೊಡೆಸಿಕೊಂಡಿದ್ದರು, ನಂತರ ಅವರು ಹೇಗೆ ಶ್ರೇಷ್ಠ ಪ್ರದರ್ಶನ ನೀಡುವ ವಾಪಸಾದರು ಎಂದು ನೆನಪಿಸಿದ್ದಾರೆ. ಟಿ20 ವಿಶ್ವಕಪ್ನ ಫೈನಲ್ನ ಕೊನೆಯ ಓವರ್ ನಲ್ಲಿ ಬೆನ್ಸ್ಟೋಕ್ಸ್ ಕೂಡ ಹೀಗೆ ಹೊಡೆಸಿಕೊಂಡ ನಂತರ ವಾಪಸಾತಿ ಮಾಡಿದ್ದು ನಮ್ಮ ಮುಂದೆ ಇದೆ ಎಂದು ಹೇಳಿದ್ದಾರೆ.
"ಗಾಬರಿಯಾಗುವುದು ಬೇಡ, ಕ್ರಿಕೆಟ್ನಲ್ಲಿ ಇದು ಹೊಸ ವಿಷಯವಲ್ಲ. ದೊಡ್ಡ ಬೌಲರ್ಗಳಿಗೆ ಕೂಡ ರೀತಿಯಾಗಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಗುರುತಿಸಿಕೊಳ್ಳಿ, ಮುಂದಿನ ಪಂದ್ಯದಲ್ಲಿ ಆ ರೀತಿ ತಪ್ಪಾಗದಂತೆ ನೋಡಿಕೊಳ್ಳಬೇಕಿದೆ. ನಾನು ನಿನ್ನ ಬಳಿಗೆ ಬರುತ್ತಿದ್ದೇನೆ ಎಂದು ಯಶ್ಗೆ ಹೇಳಿದೆ. ಸ್ವಲ್ಪ ಸಮಯ ಕಳೆದ ಬಳಿಕ ವಾಪಸಾಗುತ್ತೇನೆ. ಇದು ಕರಾಳ ರಾತ್ರಿ ಮತ್ತೆಂದೂ ಇಂತಹ ದಿನ ಆತನ ಜೀವನದಲ್ಲಿ ಬರುವುದಿಲ್ಲ" ಎಂದು ಅವರು ಹೇಳಿದರು.












Click it and Unblock the Notifications