ರಾಹುಲ್ ದ್ರಾವಿಡ್, ರಾಥೋರ್ ಮತ್ತು ಮಾಂಬ್ರೆಗೆ ಬಿಸಿಸಿಐ ಎಚ್ಚರಿಕೆ : ಕಾರಣ ಇಲ್ಲಿದೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದೆ. ಕಳೆದ 10 ವರ್ಷಗಳಿಂದ ಭಾರತ ತಂಡ ಐಸಿಸಿ ಟ್ರೋಫಿ ಗೆಲ್ಲದೇ ಇರುವುದು ಭಾರಿ ಟೀಕೆಗೆ ಕಾರಣವಾಗಿದೆ. ಭಾರತ ತಂಡದ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಕೋಚಿಂಗ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರ ವಿರುದ್ಧ ಬಿಸಿಸಿಐ ಕೋಪಗೊಂಡಿದ್ದು, ಎಲ್ಲಿ ಎಡವಟ್ಟಾಗಿದೆ ಎಂದು ಕಾರಣ ಹುಡುಕುತ್ತಿದೆ. ಅತಿ ಶೀಘ್ರದಲ್ಲೇ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಬದಲಾದರೂ ಅಚ್ಚರಿ ಪಡಬೇಕಾಗಿಲ್ಲ.

2023ರ ಏಕದಿನ ವಿಶ್ವಕಪ್ ಮುಗಿಯುವವರೆಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಆದರೆ, ಏಕದಿನ ವಿಶ್ವಕಪ್ ನಂತರ ಭಾರಿ ಬದಲಾವಣೆಯಾಗಲಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಎಲ್ಲರನ್ನು ಬದಲಾವಣೆ ಮಾಡುವಷ್ಟು ಕೆಟ್ಟ ಪರಿಸ್ಥಿತಿ ಇಲ್ಲ ಎನ್ನಲಾಗಿದೆ. ಭಾರತ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದ್ದರೂ, ಫೈನಲ್, ಸೆಮಿಫೈನಲ್ ತಲುಪಿದ್ದಾರೆ.
ಏಕದಿನ ವಿಶ್ವಕಪ್ಗೆ ನಾಲ್ಕು ತಿಂಗಳಷ್ಟೇ ಸಮಯ ಇರುವುದರಿಂದ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುವುದು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಬದಲಾವಣೆ ಮಾಡದೇ ಇದ್ದರೂ, ರಾಥೋರ್ ಮತ್ತು ಮಾಂಬ್ರೆ ಅವರ ಸ್ಥಾನಕ್ಕೆ ಬೇರೆ ಸಿಬ್ಬಂದಿ ನೇಮಿಸುವ ಬಗ್ಗೆ ಚಿಂತನೆ ಮಾಡುತ್ತಿದೆ.
ಸದ್ಯ ಭಾರತ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕೆಲಸ ನಿರ್ವಹಿಸುತ್ತಿದ್ದು, ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್ ಆಗಿದ್ದರೆ, ಪರಾಸ್ ಮಾಂಬ್ರೆ ಬೌಲಿಂಗ್ ಕೋಚ್ ಆಗಿದ್ದು, ಟಿ. ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. .
ವಿದೇಶದಲ್ಲಿ ಭಾರತದ ಪ್ರದರ್ಶನದ ಬಗ್ಗೆ ಆತಂಕ
"ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋತಿದ್ದರೂ, ಅವರು ಫೈನಲ್ ತಲುಪಿರುವುದು ಕಡಿಮೆ ಸಾಧನೆಯೇನಲ್ಲ, ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಮೂಲಕ ಫೈನಲ್ ತಲುಪಿದ್ದೆವು, ಇದು ತಮಾಷೆಯ ವಿಚಯವಲ್ಲ" ಎಂದು ಬಿಸಿಸಿಐ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಆದರೆ ವಿದೇಶಿ ನೆಲದಲ್ಲಿ ಭಾರತ ತಂಡದ ಆಟ ನಿರೀಕ್ಷಿತ ಮಟ್ಟದಲ್ಲಿಲ್ಲ, ಏಷ್ಯಾಕಪ್, ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಗಳಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೆ, ಈ ಬಾರಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡಕ್ಕೆ ಅನುಕೂಲವಾಗಿದೆ. ಈ ಬಾರಿ ಉತ್ತಮ ಪ್ರದರ್ಶನ ನೀಡಿದರೆ ವಿಶ್ವಕಪ್ ಗೆಲ್ಲುವುದು ಸುಲಭವಾಗಲಿದೆ.
ವಿಕ್ರಮ್ ರಾಥೋರ್ ಬ್ಯಾಟಿಂಗ್ ಕೋಚ್ ಆದಾಗಿಂದ ಭಾರತೀಯ ಬ್ಯಾಟರ್ಗಳು ಮಿಂಚುವಲ್ಲಿ ವಿಫಲರಾಗಿದ್ದಾರೆ. ಎಲ್ಲಾ ಅಗ್ರ ಬ್ಯಾಟರ್ ಗಳು ಕಳಪೆ ಫಾರ್ಮ್ ಹೊಂದಿದ್ದಾರೆ. ಭಾರತದ ಅಗ್ರ 5 ಆಟಗಾರರು ವಿದೇಶದಲ್ಲಿ ರನ್ ಗಳಿಸಲು ಪರದಾಡುತ್ತಿರುವುದು ಟೆಸ್ಟ್ನಲ್ಲಿ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಮಾಂಬ್ರೆ ಬೌಲಿಂಗ್ ಕೋಚ್ ಆದ ನಂತರ ಭಾರತ ತಂಡ ವಿದೇಶಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಪ್ರಮುಖ ಬೌಲರ್ ಗಳು ಗಾಯದಿಂದ ಬಳಲುತ್ತಿದ್ದರೂ, ಇತರೆ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫವಾದರು, ಕಠಿಣ ಬೌಲಿಂಗ್ ಪರಿಸ್ಥಿತಿಗಳಲ್ಲಿ ಭಾರತದ ಬೌಲರ್ ಗಳು ವಿಕೆಟ್ ಪಡೆಯುವಲ್ಲಿ ಪರದಾಡಿದ್ದಾರೆ.
ಏಕದಿನ ವಿಶ್ವಕಪ್ ನಂತರ ರಾಹುಲ್ ಭವಿಷ್ಯ ನಿರ್ಧಾರ
ಇನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಭವಿಷ್ಯ ಏಕದಿನ ವಿಶ್ವಕಪ್ ನಂತರ ನಿರ್ಧಾರವಾಗಲಿದೆ. ಈ ಬಾರಿ ತವರಿನಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿರುವುದರಿಂದ ಕಪ್ ಗೆಲ್ಲುವ ಅವಕಾಶ ಹೆಚ್ಚಾಗಿದೆ. ತವರಿನ ಲಾಭ ಪಡೆದು, ಉತ್ತಮ ತಂಡವನ್ನು ಆಯ್ಕೆ ಮಾಡಿದರೆ 10 ವರ್ಷಗಳ ಐಸಿಸಿ ಟ್ರೋಫಿ ಬರಕ್ಕೆ ಅಂತ್ಯ ಹಾಡಬಹುದಾಗಿದೆ.












Click it and Unblock the Notifications