ಚಾಮರಾಜನಗರ; ಈ ಶಾಲೆಯಲ್ಲಿ ಪಾಠದ ಜೊತೆ ಬಿಲ್ಲು, ಕತ್ತಿವರಸೆ ತರಬೇತಿ!
ಚಾಮರಾಜನಗರ,ಜೂ30: ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಈ ಶಾಲೆ ಸೇರಿದ ಬಳಿಕ ಪಾಠದ ಜೊತೆ ಆರ್ಚರಿ, ಫೆನ್ಸಿಂಗ್ನಲ್ಲಿ ಪ್ರಾವೀಣ್ಯತೆ ಸಾಧಿಸುವ ಮೂಲಕ ಆಧುನಿಕ ಅರ್ಜುನರಾಗಿ ರೂಪುಗೊಳ್ಳುತ್ತಿದ್ದಾರೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ರಾಜ್ಯದ ಏಕೈಕ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆಯಲ್ಲಿ 45 ವಿದ್ಯಾರ್ಥಿಗಳಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ 'ಅರ್ಜುನ ಶಕ್ತಿ' ತೋರಿಸುತ್ತಿದ್ದಾರೆ.
ಪರಿಶಿಷ್ಟ ಪಂಗಡದ ಮಕ್ಕಳಿಗೆ ಮಾತ್ರ ಈ ಶಾಲೆ ಸೀಮಿತವಾಗಿದ್ದು ರಾಜ್ಯದ ವಿವಿಧ ಜಿಲ್ಲೆಯ 8 ರಿಂದ ಪದವಿವರೆಗಿನ ವಿದ್ಯಾರ್ಥಿಗಳು ತರಬೇತಿ ಪಡೆದು ಸಾಂಪ್ರದಾಯಿಕ ಕಲೆಯಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಏನಿದು ಕ್ರೀಡಾ ವಸತಿ ಶಾಲೆ, ಏನೇನಿದೆ ಸೌಕರ್ಯ
ಜಾರ್ಖಂಡ್ ಹೊರತುಪಡಿಸಿದರೇ ಕರ್ನಾಟಕದಲ್ಲಿ ಮಾತ್ರ ಸರ್ಕಾರದ ಆರ್ಚರಿ ಮತ್ತು ಫೆನ್ಸಿಂಗ್ ತರಬೇತಿ ವಸತಿ ಶಾಲೆಯಿದೆ. 8 ನೇ ತರಗತಿಯಿಂದ ಪದವಿವರೆಗಿನ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಮಾತ್ರ ಇಲ್ಲಿಗೆ ದಾಖಲಾಗಬಹುದಾಗಿದೆ. 2016-17ನೇ ಸಾಲಿನಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಕ್ರೀಡಾಂಗಣ, ಹಾಸ್ಟೆಲ್ ಸೌಲಭ್ಯ, ಲಕ್ಷಾಂತರ ಮೌಲ್ಯದ ಕ್ರೀಡಾ ಸಾಮಾಗ್ರಿಗಳನ್ನು ಸರ್ಕಾರ ಒದಗಿಸಿದೆ. ನುರಿತ ತರಬೇತುದಾರರಿಂದ ಬಿಲ್ಲು ವಿದ್ಯೆ ಮತ್ತು ಕತ್ತಿವರಸೆಯನ್ನು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಹೇಳಿಕೊಡಲಿದ್ದು ಈಗಾಗಲೇ ಹತ್ತಾರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಆರ್ಚರಿಯಲ್ಲಿ ಮಿಂಚಿದ್ದಾರೆ.

ವಿದ್ಯಾರ್ಥಿಗಳಿಗೆ ಕಠಿಣ ಅಭ್ಯಾಸ
ಇಲ್ಲಿನ ವಿದ್ಯಾರ್ಥಿಗಳಿಗೆ ನಿತ್ಯ ಮೊಟ್ಟೆ, ಡ್ರೈ ಪ್ರೂಟ್ಸ್, ಹಣ್ಣಿನ ಜ್ಯೂಸ್, ಹಾಲು ಕೊಡಲಿದ್ದು ವಾರಕ್ಕೆ 5 ದಿನ ಮಾಂಸಾಹಾರ ನೀಡಲಾಗುತ್ತದೆ. ಬೆಳಗ್ಗೆ 5 ರಿಂದ 7.30 ಸಂಜೆ 5 ರಿಂದ 8 ರವರೆಗೆ ತರಬೇತಿ ಪಡೆಯುತ್ತಾರೆ. ಇದರೊಟ್ಟಿಗೆ, ನಿತ್ಯ ತಮ್ಮ ಶಿಕ್ಷಣ, ಪರೀಕ್ಷಾ ಓದನ್ನು ಮಾಡಲಿದ್ದಾರೆ. ಬಿಲ್ಲು ವಿದ್ಯೆಯಲ್ಲಿ ಊಟದ ಬಳಿಕ ರಾತ್ರಿ ತರಬೇತಿಯೂ ನಡೆಯುತ್ತಿದ್ದು ಆರ್ಚರಿಗೆ ರಘು ಹಾಗೂ ಫೆನ್ಸಿಂಗ್ಗೆ ಲೋಹಿತ್ ಮತ್ತು ಕಾರ್ತಿಕ್ ಎಂಬ ತರಬೇತುದಾರರಿದ್ದು ಕಠಿಣ ಅಭ್ಯಾಸ ನೀಡುತ್ತಿದ್ದಾರೆ.

ರಾಷ್ಟ್ರಮಟ್ಟದ ಸ್ಪರ್ಧೆಗೆ ಐವರು ಆಯ್ಕೆ
ಆರ್. ಜಿ. ಎಫ್. (Rural game federation of India) ನಡೆಸಿದ ದಕ್ಷಿಣ ವಲಯದ ಆರ್ಚರಿ ಸ್ಪರ್ಧೆಯಲ್ಲಿ ಎರಡು ಚಿನ್ನ, ವಿವಿ ಮಟ್ಟದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಕಂಚು ಗೆದ್ದಿದ್ದು ರಾಷ್ಟ್ರ ಮಟ್ಟದಲ್ಲಿ ಆಡಲು 16 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಫೆನ್ಸಿಂಗ್ನ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 14 ಪದಕಗಳನ್ನು ಗೆದ್ದಿದ್ದು ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಐವರು ಆಯ್ಕೆಯಾಗಿದ್ದಾರೆ. ಪುರಾಣಗಳಲ್ಲಿ, ಭಾರತದ ರಾಜರ ಇತಿಹಾಸದಲ್ಲಿ ತನ್ನದೇ ಗೌರವ, ಘನತೆ ಹೊಂದಿರುವ ಬಿಲ್ವಿದ್ಯೆ ಮತ್ತು ಕತ್ತಿವರಸೆಯಲ್ಲಿ ಈ ಆಧುನಿಕ ಅರ್ಜುನರು ಮಿಂಚುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಉತ್ಸುಕರಾಗಿದ್ದಾರೆ.

ಉತ್ಸುಕರಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳು
ಬಿಲ್ವಿದ್ಯೆ ನೋಡುಗರ ಮನಸೂರೆಗೊಂಡಿತು. ಆ ಎರಡು ಯುಗಗಳಲ್ಲಿ ನಡೆದ ವಿವಿಧ ಎಂಟು ಮಾದರಿಯ ಬಿಲ್ವಿದ್ಯೆ ಪ್ರದರ್ಶಿಸುವ ಮೂಲಕ ವೇದ, ಪುರಾಣ, ಹೋಮ, ಹವನ, ಯಜ್ಞ ಇತ್ಯಾದಿ ಮತ್ತು ಕಠಿಣ ಶ್ರಮದಿಂದ ಕಲಿತ ವಿದ್ಯೆ ಎಂದಿಗೂ ಶಾಶ್ವತ ಎನ್ನುವುದನ್ನು ತೋರಿಸಿಕೊಟ್ಟರು. ಗುರಿ ಇಟ್ಟ ಬಾಣ ಒಂದೇ ಸಲಕ್ಕೆ ಗುರಿ ತಲುಪಿತು. ಇದನ್ನು ನೋಡುತ್ತಿದ್ದರೆ ಮೈ ರೋಮಾಂಚನವಾಗುವಂತಿತ್ತು. ಪುರಾತನ ಕಾಲದ ಈ ಧನುರ್ವಿದ್ಯೆಯನ್ನು ಉಳಿಸಿಬೆಳೆಸುವ ಆಸೆಯನ್ನು ತಾವು ಇಟ್ಟುಕೊಂಡಿದ್ದು, ಸಾರ್ವಜನಿಕರ ಸಹಕಾರ ನೀಡಬೇಕು. ತಮ್ಮ ವಂಶಪರಂಪರಾಗತವಾಗಿ ಬಂದಿರುವ ಈ ಕಲೆಯನ್ನು ಕಲಿಯಲು ಯಾರೇ ಉತ್ಸುಕರಾಗಿದ್ದರೂ ಕಲಿಸಲಾಗುತ್ತದೆ.

ತರಬೇತಿಗೆ ಉತ್ತಮ ಸ್ಪಂದನೆ
ಆರ್ಚರಿ ತರಬೇತುದಾರ ರಘು ಮಾತನಾಡಿ, "ದೇಶದಲ್ಲಿ ರಾಜ್ಯದಲ್ಲಿರುವ ಒಂದೇ ಒಂದು ಕ್ರೀಡಾಶಾಲಾ ಚಾಮರಾಜನಗರ ಸಂತೇಮರಹಳ್ಳಿಯಲ್ಲಿದೆ. ತರಬೇತುದಾರನಾಗಿ 2019 ರಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ಹಾಸ್ಟೆಲ್ನಲ್ಲಿ 45 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಅರ್ಜುನ ಶಕ್ತಿ ತೋರಿಸುತ್ತಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ 14 ಪದಕಗಳನ್ನು ಗೆದ್ದಿದ್ದು ಹರ್ಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಐವರು ಆಯ್ಕೆಯಾಗಿದ್ದಾರೆ. ತರಬೇತಿಗೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಈ ಶಾಲೆಗೆ ಸೇರ್ಪಡೆಗೊಂಡು ಪಾಠದೊಟ್ಟಿಗೆ ಆರ್ಚರಿ, ಫೆನ್ಸಿಂಗ್ನಲ್ಲಿ ಪ್ರಾವೀಣ್ಯತೆ ಸಾಧಿಸುತ್ತಿದ್ದಾರೆ" ಎಂದರು.












Click it and Unblock the Notifications