RCB: ಸೋಲಿನಿಂದ ಕಂಗೆಟ್ಟಿರುವ ಆರ್ಸಿಬಿ ತಂಡಕ್ಕೆ ಮಹತ್ವದ ಸಂದೇಶ ಕೊಟ್ರು ಎಬಿಡಿ
ಆರ್ಸಿಬಿ ಹೊಸ ಅಧ್ಯಾಯ ಯಾಕೋ ಸರಿಯಾಗಿ ಆರಂಭವಾಗಿಲ್ಲ. ತಂಡದ ಆಯ್ಕೆಯಲ್ಲಿ ಮಾಡುತ್ತಿರುವ ಎಡವಟ್ಟುಗಳು, ದೊಡ್ಡ ಆಟಗಾರರ ವೈಫಲ್ಯದ ಪರಿಣಾಮ ಆರ್ಸಿಬಿ ಐಪಿಎಲ್ 2024ರಲ್ಲಿ ಆಡಿರುವ 4 ಪಂದ್ಯಗಳಲ್ಲಿ ಮೂರು ಸೋಲು ಕಂಡಿದೆ.
ತಂಡದ ಪ್ರದರ್ಶನ ಕಂಡು ಒಂದೆಡೆ ಅಭಿಮಾನಿಗಳು ಆಕ್ರೋಶಗೊಂಡಿದ್ದರೆ, ಮಾಜಿ ಕ್ರಿಕೆಟಿಗರು ಕೂಡ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಅವರ ತವರಿನಲ್ಲಿ ಎದುರಿಸಲಿದೆ.

ಆರ್ಆರ್ ವಿರುದ್ಧದ ಪಂದ್ಯಕ್ಕೆ ಮುನ್ನ ಆರ್ಸಿಬಿ ತಂಡಕ್ಕೆ ಮಾಜಿ ಆಟಗಾರ, ಬ್ಯಾಟಿಂಗ್ ದಿಗ್ಗಜ ಎಬಿ ಡಿ ವಿಲಿಯರ್ಸ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಸಂದೇಶ ನೀಡಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಮಾಡಿ
ಆರ್ಸಿಬಿ ತಂಡದಲ್ಲಿ ಸದ್ಯ ಫಾರ್ಮ್ನಲ್ಲಿರುವ ಬ್ಯಾಟರ್ ವಿರಾಟ್ ಕೊಹ್ಲಿ ಒಬ್ಬರೇ. ಮಧ್ಯಮ ಕ್ರಮಾಂಕದ ಓವರ್ ಗಳಲ್ಲಿ ಅವರು ಕ್ರೀಸ್ನಲ್ಲಿರಬೇಕು ಎಂದು ಎಬಿಡಿ ಸಲಹೆ ನೀಡಿದ್ದಾರೆ. ಅವರ ಸುತ್ತ ಉಳಿದ ಬ್ಯಾಟರ್ ಗಳು ಸ್ಫೋಟಕ ಇನ್ನಿಂಗ್ಸ್ ಆಡಬೇಕು ಎಂದು ಹೇಳಿದರು.
ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್ನಲ್ಲಿ ನಾಲ್ಕು ಪಂದ್ಯಗಳಲ್ಲಿ 67.66 ಸರಾಸರಿಯಲ್ಲಿ ಎರಡು ಅರ್ಧಶತಕಗಳೊಂದಿಗೆ 203 ರನ್ ಗಳಿಸಿದ್ದಾರೆ. ಹೆಚ್ಚು ರನ್ ಗಳಿಸಿದ ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುತ್ತಾ, ಡಿವಿಲಿಯರ್ಸ್, "ವಿರಾಟ್ ಕೊಹ್ಲಿ ಆರಂಭಿಕರಾಗಿ ಉತ್ತಮ ಪ್ರದರ್ಶನ ಮುಂದುವರೆಸಬೇಕು. ಅವರು ಆರಂಭದಲ್ಲಿ ಎಚ್ಚರಿಕೆಯಿಂದ ಆಡಲಿ, ಫಾಫ್ ಡುಪ್ಲೆಸಿಸ್ ಸ್ಫೋಟಕ ಇನ್ನಿಂಗ್ಸ್ ಆಡಬೇಕು. ಕೊಹ್ಲಿ 6-15 ಓವರ್ ವರೆಗೆ ಬ್ಯಾಟಿಂಗ್ ಮಾಡಿದರೆ, ಎಲ್ಲಾ ಆಟಗಾರರು ಸ್ಫೋಟಕ ಇನ್ನಿಂಗ್ಸ್ ಆಡಬಹುದು" ಎಂದು ಹೇಳಿದರು.
"ಆರ್ಸಿಬಿ ಕೆಟ್ಟ ಆರಂಭವಲ್ಲ ಆದರೆ ಉತ್ತಮವಾಗಿಲ್ಲ. ಇದು ಮಧ್ಯದಲ್ಲಿದೆ, ಅವರಿಗೆ ಒಂದೆರಡು ಗೆಲುವುಗಳು ಬೇಕು. ಅವರು ಗೆಲುವಿನ ಹಾದಿಗೆ ಬರುತ್ತಾರೆ ಮತ್ತು ಮತ್ತೆ ತವರಿನಲ್ಲಿ ಆಡಲು ಬರುವ ಮುನ್ನ ಅವರು ಗೆಲುವನ್ನು ಪಡೆಯಲಿ" ಎಂದು ಆಶಿಸಿದರು.
ಆರ್ಸಿಬಿ ತನ್ನ ಮುಂದಿನ ಎರಡು ಪಂದ್ಯಗಳನ್ನು ತವರಿನಿಂದ ಹೊರಗೆ ಆಡಲಿದೆ. ಏಪ್ರಿಲ್ 6 ರಂದು ಶನಿವಾರ ಆರ್ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಅದಾದ ಬಳಿಕ ಏಪ್ರಿಲ್ 11ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.












Click it and Unblock the Notifications