ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ಕೊರೊನಾಗೆ ಬಲಿ; ಸಿಎಂ ಸಂತಾಪ
ಶಿರಸಿ, ಏಪ್ರಿಲ್ 18: ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಎರಡನೇ ಬಾರಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ ಹೆಗಡೆಯವರು ಭಾನುವಾರ ಕೊರೊನಾಗೆ ಸಾವನ್ನಪ್ಪಿದ್ದಾರೆ. ಪ್ರಸಂಗಕರ್ತ, ಸಂಸ್ಕೃತ ವಿದ್ವಾಂಸ, ಗ್ರಂಥಕರ್ತ, ಭಾಷಾಶಾಸ್ತ್ರಜ್ಞ ಹಾಗೂ ನಿವೃತ್ತ ಪ್ರಾಂಶುಪಾಲರೂ ಆಗಿದ್ದ ಅವರ ಅಗಲಿಕೆ ಇಡೀ ಯಕ್ಷಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಪ್ರೊ.ಎಂ.ಎ ಹೆಗಡೆಯವರು ಜುಲೈ 3, 1948ರಂದು ಶಿರಸಿಯ ದಂಟಕಲ್ ನಲ್ಲಿ ಅಣ್ಣಪ್ಪ ಹೆಗಡೆ ಮತ್ತು ಕಾಮಾಕ್ಷಿ ದಂಪತಿಯ ಪುತ್ರನಾಗಿ ಜನಿಸಿದರು. ಸಿದ್ದಾಪುರ ತಾಲ್ಲೂಕಿನ ಜೋಗಿನ್ಮನೆಯಲ್ಲಿ ಪ್ರಾಥಮಿಕ, ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಹಾಗೂ ಶಿರಸಿಯ ಎಂ.ಎಂ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಅವರು, ಎಂ.ಎ ಉನ್ನತ ಪದವಿ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ 1971ರಲ್ಲಿ ನಡೆಯಿತು.
2004ರಿಂದ 2006ರವರೆಗೆ ಪ್ರಾಂಶುಪಾಲರಾಗಿ ಸೇವೆ
ಬಿ.ಎ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಇವರಿಗೆ ಬಿ.ವಿ ಬೇವೂರ ಅವರ ಬಹುಮಾನ ಲಭಿಸಿತ್ತು. ಎಂ.ಎ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಸಿ.ಡಿ ದೇಶಮುಖ್ ಬಹುಮಾನ ಕೂಡ ಲಭಿಸಿತ್ತು. ಬಳಿಕ ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿ.ಸಿ ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ 1971ರಿಂದ 73ರ ವರೆಗೆ ಸೇವೆ ಸಲ್ಲಿಸಿದ್ದರು.
ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿ 1973ರಿಂದ 2004ರ ವರೆಗೆ ಸೇವೆ ಸಲ್ಲಿಸಿದರು. ಅದೇ ಕಾಲೇಜಿನಲ್ಲಿ 2004ರಿಂದ 2006ರವರೆಗೆ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾದರು.
ವಿಮರ್ಶಕ, ಮತ್ತು ಪ್ರಸಂಗ ಕರ್ತರಾಗಿ ಕೆಲಸ
ಪ್ರೊ.ಎಂ.ಎ ಹೆಗಡೆ ಅವರು ಸಂಸ್ಕೃತ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ ನಾಡಿನ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ಯಕ್ಷಗಾನ ಇವರ ಪ್ರಿಯವಾದ ಹವ್ಯಾಸ. ಯಕ್ಷಗಾನದಲ್ಲಿ ವೇಷಧಾರಿ, ತಾಳಮದ್ದಲೆಯ ಅರ್ಥಧಾರಿ, ಸಂಶೋಧಕ, ವಿಮರ್ಶಕ, ಮತ್ತು ಪ್ರಸಂಗ ಕರ್ತರಾಗಿ ಕೆಲಸ ಮಾಡಿದ್ದಾರೆ.
ಹೆಗಡೆಯವರು ಸೀತಾ ವಿಯೋಗ, ತ್ರಿಶಂಕು ಚರಿತ್ರೆ, ರಾಜಾಕರಂಧಮ, ಮುಂತಾದ ಸುಮಾರು ಹದಿನೈದಕ್ಕೂ ಮಿಕ್ಕ ಪ್ರಸಂಗಗಳನ್ನು ರಚಿಸಿದ್ದಾರೆ. ಅವು ಜನಪ್ರಿಯವಾಗಿದ್ದು, ಸಾಕಷ್ಟು ಪ್ರಯೋಗಗಳನ್ನು ಕಾಣುತ್ತಿವೆ. 2013ರ ಮಾರ್ಚ್ ತಿಂಗಳಲ್ಲಿ ಶಿರಸಿಯಲ್ಲಿ ನಡೆದ ಎಂಟನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಸಂದಿದೆ. 16ನೇ ವಯಸ್ಸಿನಲ್ಲಿಯೇ ಕೆರೆಮನೆ ಮೇಳದಲ್ಲಿ ಶಿವರಾಮ ಹೆಗಡೆ ಅದರೊಂದಿಗೆ ಬಣ್ಣ ಹಚ್ಚಿದ್ದ ಇವರು, ತ್ರಿಶಂಕು ಚರಿತ್ರೆ, ಸೀತಾ ವಿಯೋಗ, ಪ್ರಚ೦ಡ ಚಾಣಕ್ಯ ಸೇರಿ ಇಪ್ಪತ್ತಕ್ಕೂ ಅಧಿಕ ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ.
ಎಂ.ಎ ಹೆಗಡೆ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ""ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಗಳೂ ಆಗಿದ್ದ ಪ್ರೊ.ಹೆಗಡೆ ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಹಾಗೂ ಕಲಾವಿದರ ಹಿತರಕ್ಷಣೆಗೆ ಶ್ರಮಿಸಿದ್ದರು.''
ಸಂಸ್ಕೃತ ವಿದ್ವಾಂಸರಾಗಿದ್ದ ಅವರು ಸಂಸ್ಕೃತ ಮತ್ತು ಯಕ್ಷಗಾನ ಕುರಿತು ರಚಿಸಿದ ಕೃತಿಗಳು ಅತ್ಯಂತ ಮೌಲಿಕವಾದ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ, ಹಿರಿಯ ವಿದ್ವಾಂಸ ಪ್ರೊಫೆಸರ್ ಎಂ.ಎ ಹೆಗಡೆ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಶೋಕ ವ್ಯಕ್ತಪಡಿಸಿದ್ದಾರೆ.
""ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಎಂ.ಎ ಹೆಗಡೆ ಅವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದು ದುರಾದೃಷ್ಟಕರ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದರು, ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು, ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕ ಒಂದು ದಿಗ್ಗಜ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.
ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿಸಿ ಜಬಿನ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು.''
Recommended Video
ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ
ಸಂಸ್ಕೃತದಲ್ಲಿಯೂ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಆನಂತರ ಸಂಸ್ಕೃತ ಉಪನ್ಯಾಸಕರಾಗಿಯೂ ಸಹ ಸೇವೆ ಸಲ್ಲಿಸಿದ್ದ ಹೆಗಡೆ ಅವರು ಯಕ್ಷಗಾನದ ಬಗ್ಗೆ ವಿಶೇಷ ಒಲವು ಹೊಂದಿದ್ದರು.
ಸ್ವತಃ ಪಾತ್ರಧಾರಿಯು ಆಗಿದ್ದ ಹೆಗಡೆಯವರು 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಸೀತ ವಿಯೋಗ ,ತ್ರಿಶಂಕು ಚರಿತೆ ,ರಾಜಾ ಕಂದಾಮ ಮುಂತಾದವು ಅವರ ಜನಪ್ರಿಯ ಪ್ರಸಂಗಗಳು. ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪರಿಚಯ, ಬ್ರಹ್ಮಸೂತ್ರ ಚತು; ಸೂತ್ರಿ, ಮತ್ತು ಸಿದ್ಧಾಂತ ಬಿಂದು ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ಹೆಗಡೆಯವರ ನಿಧನ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.