ಹೊತ್ತಿ ಉರಿದ ಶಿರಸಿ : ಇಂದಿನ ಪ್ರಮುಖ ಬೆಳವಣಿಗೆಗಳು
ಉತ್ತರ ಕನ್ನಡ, ಡಿಸೆಂಬರ್. 12 : ಎರಡು ದಿನಗಳಿಂದ ಹೊತ್ತಿ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಮಂಗಳವಾರ ಸಂಜೆ ಸಹಜ ಸ್ಥಿತಿಗೆ ಬಂದಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ನಿಷೇಧಾಜ್ಞೆ ಮುಂದುವರಿಯಲಿದೆ.
ಹೊನ್ನಾವರದ ಯುವಕ ಪರೇಶ ಮೆಸ್ತ ಸಾವಿನ ಪ್ರಕರಣ ಈಗ ರಾಜಕೀಯ ದಾಳವಾಗಿ ಬದಲಾಗಿದೆ. ಪ್ರತಿಪಕ್ಷ ಬಿಜೆಪಿ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ.
ಶಿರಸಿ ಧಗಧಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ
ಶಿರಸಿ ಪಟ್ಟಣದಲ್ಲಿ ಮಂಗಳವಾರ ಬಂದ್ ಕರೆ ನೀಡಲಾಗಿತ್ತು. ಪ್ರತಿಭಟನಾ ಮೆರವಣಿಗೆ ವೇಳೆ ಹಿಂಚಾಚಾರ ನಡೆಸಿದೆ. ಬಸ್ಸುಗಳಿಗಳನ್ನು ಜಖಂಗೊಳಿಸಲಾಗಿದೆ. ಪೊಲೀಸರು, ಮಾಧ್ಯಮದವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಶಿರಸಿ ಗಲಭೆ: ಯಾರ್ಯಾರು ಏನೇನು ಹೇಳಿದರು
ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಪರೇಶ ಮೆಸ್ತ ಸಾವಿನ ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಹೊನ್ನಾವರದಲ್ಲಿ ಕಾಣೆಯಾಗಿದ್ದ ಅಬ್ದುಲ್ ಗಫೂರ್ ಮಂಗಳವಾರ ಪತ್ತೆಯಾಗಿದ್ದಾನೆ.
ಪರೇಶ್ ಸಾವು, ಶಿರಸಿ ಪಟ್ಟಣದೆಲ್ಲೆಡೆ ಬೆಂಕಿಯ ಜ್ವಾಲೆ
ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿಭಂಗ ಮಾಡುವಂತಹ ಬರಹ, ಪೋಸ್ಟ್ ಹಾಕಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ...
ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಉತ್ತರ ಕನ್ನಡ ಜಿಲ್ಲೆಯಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶಿರಸಿಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿದವು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಬಸ್ಸುಗಳಿಗೆ ಕಲ್ಲು ತೂರಲಾಯಿತು. ಪೊಲೀಸರ ಮೇಲೆ, ಮಾಧ್ಯಮದವರ ಮೇಲೆಯೂ ಕಲ್ಲು ತೂರಾಟ ನಡೆಯಿತು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಂಧನ
ಶಿರಸಿಯ ವಿಕಾಸ ಆಶ್ರಮ ಮೈದಾನದ ಮುಂದೆ ಶಾಸಕ ವಿಶ್ವೇಶರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಯಿತು. ಇದನ್ನು ತಡೆಯಲು ಪೊಲೀಸರು ಮುಂದಾದರು. ಈ ವೇಳೆ ಕಲ್ಲು ತೂರಾಟ ನಡೆಯಿತು. ಪೊಲೀಸರು ಶಾಸಕರನ್ನು ಬಂಧಿಸಿದರು.
ಬಸ್ಸಿಗೆ ಕಲ್ಲು, ಅಂಗಡಿಗೆ ಬೆಂಕಿ
ಪೊಲೀಸರು ಪ್ರತಿಭಟನಾ ಜಾಥಾ ತಡೆಯಲು ಮುಂದಾದಾಗ ಹಿಂಸಾಚಾರ ಆರಂಭವಾಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಸರ್ಕಾರಿ ಬಸ್ಸುಗಳಿಗೆ ಕಲ್ಲು ತೂರಲಾಯಿತು.
ಹರಿದಾಡುತ್ತಿರುವ ಸುದ್ದಿ ಸುಳ್ಳು
'ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ನೀಡಿದ್ದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು' ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವರು ಹೇಳಿದ್ದೇನು?
'ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಗಲಭೆ ರಾಜಕೀಯ ಪ್ರೇರಿತವಾದದ್ದು, ಬಿಜೆಪಿಯವರು ಕಾನೂನು ಸುವ್ಯಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಈ ಪ್ರಕರಣದಿಂದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಗಲಾಟೆ ನಡೆಸಲಾಗುತ್ತಿದೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಸಿದ್ದರಾಮಯ್ಯಗೆ ವರದಿ ಸಲ್ಲಿಕೆ
ಉತ್ತರ ಕನ್ನಡದ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಮಲಿಂಗಾ ರೆಡ್ಡಿ ವರದಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ರಾಜಕೀಯ ಲಾಭಕ್ಕಾಗಿ ಕರಾವಳಿಯಲ್ಲಿ ಶಾಂತಿ ಭಂಗ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯವರು ಮರಣೋತ್ತರ ಪರೀಕ್ಷೆ ವರದಿ ಬರುವ ಮೊದಲೇ ಕೊಲೆ ಎನ್ನುತ್ತಿದ್ದಾರೆ' ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಬಿಜೆಪಿ ದೂರು
ಹೊನ್ನಾವರದ ಯುವಕ ಪರೇಶ ಮೆಸ್ತ ಸೇರಿದಂತೆ ರಾಜ್ಯದಲ್ಲಿ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರರಕರಣದ ತನಿಖೆಯನ್ನು ಎನ್ಐಗೆ ವಹಿಸಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜಭವನ ಚಲೋ ನಡೆಸಿತು. ರಾಜ್ಯಪಾಲರಿಗೆ ಈ ಕುರಿತು ಮನವಿ ಸಲ್ಲಿಸಿತು.