ಶಿವಮೊಗ್ಗದಲ್ಲಿ ಝೀಕಾ ವೈರಸ್ಗೆ ವ್ಯಕ್ತಿ ಬಲಿ, ಡಿಹೆಚ್ಒ ಸ್ಪಷ್ಟನೆ
ಶಿವಮೊಗ್ಗ, ಜುಲೈ 06: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ಇಂತಹ ಸಮಯದಲ್ಲಿಯೇ ಶಿವಮೊಗ್ಗದಲ್ಲಿ ಝೀಕಾ ವೈರಸ್ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದು, ಝೀಕಾ ವೈರಸ್ನ ಆತಂಕವನ್ನು ಹೆಚ್ಚಿಸಿದೆ.
ಝೀಕಾ ವೈರಸ್ ಸೋಂಕು ತಗುಲಿದ್ದ 74 ವರ್ಷದ ವ್ಯಕ್ತಿ ಶಿವಮೊಗ್ಗದಲ್ಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಝೀಕಾ ವೈರಸ್ ಹೆಚ್ಚಾಗುತ್ತಿದೆಯೇ? ಎಂಬ ಆತಂಕ ಉಂಟಾಗಿದೆ. ಆದರೆ ಈ ಕುರಿತು ಆರೋಗ್ಯ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.

ಶಿವಮೊಗ್ಗದಲ್ಲಿ ಮೃತಪಟ್ಟ ವ್ಯಕ್ತಿಗೆ ಝೀಕಾ ವೈರಸ್ ಸೋಂಕು ತಗುಲಿತ್ತು. ಅಲ್ಲದೇ ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಈ ಕುರಿತು ಡಿಹೆಚ್ಒ ಡಾ. ನಟರಾಜ್ ಸ್ಪಷ್ಟನೆ ನೀಡಿದ್ದಾರೆ. "ಕೇವಲ ಝೀಕಾ ವೈರಸ್ನಿಂದ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು" ಎಂದು ಹೇಳಿದ್ದಾರೆ.
ಝೀಕಾ ವೈರಸ್ ಅಲರ್ಟ್: ಮಹಾರಾಷ್ಟ್ರ ರಾಜ್ಯದ ಕೆಲವು ಭಾಗಗಳಲ್ಲಿ ಝೀಕಾ ವೈರಸ್ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನಲೆಯಲ್ಲಿ ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯ ಪರಿಸ್ಥಿತಿಯ ಮೇಲೆ ನಿಗಾವಹಿಸಿ ಎಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.
ಮಂಗಳವಾರ ಪುಣೆ 6, ಕೊಲ್ಹಾಪುರ 1, ಸಂಗಮ್ನರ್ 1 ಝೀಕಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಸಚಿವಾಲಯ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಝೀಕಾ ವೈರಸ್ ನಿಯಂತ್ರಣಕ್ಕೆ ಮಾರ್ಗಸೂಚಿಯನ್ನು ಪ್ರಕಟಿಸಿತ್ತು.
ಗರ್ಭಿಣಿಯರು ಹೆಚ್ಚಿನ ನಿಗಾವಹಿಸುವ ಅಗತ್ಯವಿದೆ. ಈಡಿಸ್ ಸೊಳ್ಳೆಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕು ದೃಢಪಟ್ಟ ಗರ್ಭಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಲಾಗಿತ್ತು.
ಈಡಿಸ್ ಸೊಳ್ಳೆಯಿಂದ ಡೆಂಗ್ಯು, ಚಿಕನ್ ಗುನ್ಯಾ ಮತ್ತು ಝೀಕಾ ವೈರಸ್ ಸೋಂಕು ಹರಡುತ್ತದೆ. ಝೀಕಾ ವೈರಸ್ ಸೋಂಕು ಮಾರಣಾಂತಿಕವಲ್ಲ. ಆದರೆ ಸೋಂಕು ಗರ್ಭಿಯರಲ್ಲಿ ಕಾಣಿಸಿಕೊಂಡರೆ ಹುಟ್ಟುವ ಮಕ್ಕಳಿಗೆ ಹಲವು ತೊಂದರೆ ಉಂಟು ಮಾಡಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿತ್ತು.
ಸೊಳ್ಳೆಗಳ ನಿಯಂತ್ರಣಕ್ಕಾಗಿ ವಸತಿ ಪ್ರದೇಶಗಳು, ಕೆಲಸದ ಸ್ಥಳಗಳು, ಶಾಲೆಗಳು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.ಝೀಕಾ ವೈರಸ್ ಪ್ರಕರಣ ಪತ್ತೆಯಾದ ತಕ್ಷಣ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಅನ್ವಯ ವರದಿ ಮಾಡಬೇಕು ಎಂದು ಕೇಂದ್ರ ಸೂಚನೆ ನೀಡಿತ್ತು.
ಮಂಗಳವಾರದ ಮಾಹಿತಿಯಂತೆ ಪುಣೆಯಲ್ಲಿ ಒಟ್ಟು 7 ಝೀಕಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈಡಿಸ್ ಸೊಳ್ಳೆಗಳು ಝೀಕಾ ವೈರಸ್ ಹರಡಲು ವಾಹಕದಂತೆ ಕೆಲಸ ಮಾಡುತ್ತವೆ. ಸೋಂಕು ಇರುವ ವ್ಯಕ್ತಿಗೆ ಕಚ್ಚಿರುವ ಸೊಳ್ಳೆ ಆರೋಗ್ಯವಂತ ವ್ಯಕ್ತಿಗೆ ಕಚ್ಚಿದರೆ ಅವರಿಗೂ ಸಹ ಸೋಂಕು ಹರಡುತ್ತದೆ. ಡೆಂಗ್ಯೂ, ಚಿಕನ್ ಗುನ್ಯಾದಂತೆ ಒಬ್ಬರಿಂದ ಇನ್ನೊಬ್ಬರಿಗೆ ಇದು ಹರಡುತ್ತದೆ.
ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದರು. ಡೆಂಗ್ಯೂ, ಝೀಕಾ ವೈರಸ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆಯನ್ನು ನೀಡಿದ್ದಾರೆ.
ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿರುವಲ್ಲಿ ಫೀವರ್ ಕ್ಲಿನಿಕ್ಗಳನ್ನು ತೆರಯಬೇಕು. ಇಂತಹ ಪ್ರದೇಶದಲ್ಲಿ ಯಾವುದೇ ವ್ಯಕ್ತಿಗೆ ಜ್ವರ ಬಂದರೆ ಡೆಂಗ್ಯು ಪರೀಕ್ಷೆ ಮಾಡಿಸಬೇಕು. ಸಾವುಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ನಿರ್ದೇಶನಗಳನ್ನು ಕೊಟ್ಟಿದ್ದಾರೆ.












Click it and Unblock the Notifications