ಮಲೆನಾಡು ಅಡಿಕೆಗೆ ಎಲೆ ಚುಕ್ಕೆ ರೋಗ; ಪರಿಹಾರಕ್ಕೆ ಆಗ್ರಹಿಸಿ ಅ. 3ಕ್ಕೆ ರೈತರ ಸಮಾವೇಶ
ಶಿವಮೊಗ್ಗ, ಸೆ. 27: ಶಿವಮೊಗ್ಗ ಜಿಲ್ಲೆಯ ಹಲವು ಜಿಲ್ಲೆಗಳಲ್ಲಿ ಅಡಿಕೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದ್ದು, ಈಗಾಗಲೇ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಅಡಿಕೆ ಬೆಳೆಗಾರರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈಗ ಸರ್ಕಾರದ ಮೇಲೆ ಒತ್ತಡ ಹಾಕಲು ಅಕ್ಟೋಬರ್ 3 ರಂದು ರೈತರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಅಡಿಕೆಗೆ ವ್ಯಾಪಿಸುತ್ತಿರುವ ಮಾರಣಾಂತಿಕ ಎಲೆ ಚುಕ್ಕೆ ರೋಗ ರೈತರ ನಿದ್ದೆಗೆಡಿಸಿದ್ದು, ಮಲೆನಾಡಿನ ರೈತರು ಅನೇಕ ಸಮಸ್ಯೆಗಳಿಂದ ನಲುಗಿದ್ದು, ಸರ್ಕಾರವನ್ನು ಎಚ್ಚರಿಸಲು ಅಕ್ಟೋಬರ್ 3 ರಂದು ರೈತರ ಸಮಾವೇಶಕ್ಕೆ ಕೃಷಿಕ ಸಮಾಜ ಸಜ್ಜುಗೊಂಡಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಳೇಹಳ್ಳಿ ಪ್ರಭಾಕರ್, "ಮಲೆನಾಡಿನ ಅತೀ ಹೆಚ್ಚು ಮಳೆ ಬೀಳುವ ಗುಡ್ಡಗಾಡಿನ ಪ್ರದೇಶದಲ್ಲಿ ಈಗ ಅಡಿಕೆಗೆ ಎಲೆ ಚುಕ್ಕೆ ರೋಗ ಬಾಧಿಸುತ್ತಿದೆ. ಬೆಳೆ ಕಳೆದುಕೊಳ್ಳುವ ಜೊತೆಗೆ ಅಡಿಕೆ ತೋಟಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ರೈತರಿದ್ದಾರೆ. ರೋಗ ಈಗ ಇಡೀ ತಾಲ್ಲೂಕನ್ನೇ ವ್ಯಾಪಿಸುತ್ತಿದ್ದು ರೋಗ ನಿಯಂತ್ರಣ ಸಾಧ್ಯವಾಗದ ಪರಿಸ್ಥಿತಿ ತಲುಪಿದೆ. ಅಡಿಕೆ ಬೆಳೆಯನ್ನು ನಂಬಿದ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮೇಲೆ ಒತ್ತಡ ಹಾಕಲು ಅ.03 ರಂದು ರೈತ ಸಮಾವೇಶ
"ಸರ್ಕಾರ ಎಚ್ಚೆತ್ತು ರೈತರ ಸಮಸ್ಯೆಗೆ ಸೂಕ್ತ ಪರಿಹಾವನ್ನು ನೀಡುವಂತೆ ಒತ್ತಾಯಿಸಲು ಅಕ್ಟೋಬರ್ 03 ರಂದು ತೀರ್ಥಹಳ್ಳಿ ಪಟ್ಟಣದ ಕೆಟಿಕೆ ಸಭಾಂಗಣದಲ್ಲಿ ರೈತರನ್ನು ಒಗ್ಗೂಡಿಸಿ ಚರ್ಚಿಸಲಾಗುತ್ತದೆ. ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ರೈತರ ಹಕ್ಕೊತ್ತಾಯದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು" ಎಂದು ಬಾಳೇಹಳ್ಳಿ ಪ್ರಭಾಕರ್ ಹೇಳಿದರು.
'ಕೃಷಿ ಹಾಗೂ ತೋಟಗಾರಿಕೆ ಜಮೀನಿನಲ್ಲಿ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗಿ ಜೀವಹಾನಿಯಾಗುತ್ತಿದೆ. ಕೆಲವು ರೈತರು ಕಾಡುಪ್ರಾಣಿಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಅವರಿಗೆ ವೈದ್ಯಕೀಯ ವೆಚ್ಚ ಹಾಗೂ ಪರಿಹಾರವನ್ನು ನೀಡುವಂತೆ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು" ಎಂದು ಹೇಳಿದರು.

ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸ
ಸರ್ಕಾರ ಈ ಹಿಂದೆ ರೈತರಿಗೆ ನೀಡುತ್ತಿದ್ದ ಕೃಷಿ ಯಂತ್ರೋಪಕರಣಗಳ ಮೇಲಿನ ಸಹಾಯಧನವನ್ನು ಸ್ಥಗಿತಗೊಳಿಸಿದೆ. ರಸಗೊಬ್ಬರ, ಕ್ರಮಿನಾಶಕಗಳ ಬೆಲೆ ಹೆಚ್ಚಿದ್ದು ಜಿಲ್ಲಾವಾರು ಬೆಲೆಯಲ್ಲಿ ಬಾರೀ ವ್ಯತ್ಯಾಸ ಕಂಡುಬಂದಿದೆ. ಎಂಆರ್ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
"ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ವಾರಸುದಾರರಿಗೆ ಪರಿಹಾರ ಧನ ವಿಳಂಬವಾಗುತ್ತಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ಶಿಕ್ಷಣ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ನೀಡಬೇಕಿದ್ದ ಮಾಸಾಶನ ಈಗ ವಿತರಣೆಯಾಗುತ್ತಿಲ್ಲ" ಎಂದು ಬಾಳೇಹಳ್ಳಿ ಪ್ರಭಾಕರ್ ಮಾಹಿತಿ ನೀಡಿದರು.

ತೀರ್ಥಹಳ್ಳಿ, ಹೊಸನಗರ ವ್ಯಾಪ್ತಿಗೆ ವಿಶೇಷ ಪ್ಯಾಕೇಜ್ಗೆ ಬೇಡಿಕೆ
ರೈತ ಪ್ರತಿನಿಧಿಗಳನ್ನು ಒಳಗೊಂಡಂತ ಅಡಿಕ ಮಂಡಳಿಯನ್ನು ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸಲಾಗುವುದು. ಅಡಿಕೆ ಮರದ ಬೇಸಾಯಕ್ಕೆ ಬಳಸುವ ಲಘು ಪೋಷಕಂಶಗಳ ದರ ಇಳಿಕೆ, ಸರ್ಕಾರದ ಸಹಾಯಧನ, ಪ್ರೋತ್ಸಾಹಧನವನ್ನು ಬ್ಯಾಂಕುಗಳಲ್ಲಿ ರೈತರ ಸಾಲಕ್ಕೆ ವಜಾ ಮಾಡದಂತೆ ಆಗ್ರಹಿಸಲಾಗುವುದು. ಸಾಗುವಳಿ ಜಮೀನು ಆಧರಿಸಿ ರೈತರಿಗೆ ಗೃಹ ನಿರ್ಮಾಣ ಸಾಲ ವಿತರಣೆಗೆ ಸರಳ ದಾಖಲೆಗಳನ್ನು ನೀಡುವಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.
ಅತ್ಯಧಿಕ ಮಳೆ ಸುರಿಯುವ ತೀರ್ಥಹಳ್ಳಿ, ಹೊಸನಗರ ತಾಲ್ಲೂಕು ವ್ಯಾಪ್ತಿಯನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ಸಹಾಯಧನವನ್ನು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಮಲೆನಾಡಿಗರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಒತ್ತಾಯಿಸಲು ಆಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಕಾಲದಲ್ಲಿ ಸರ್ವೆ ನಡೆಸುವಂತೆ ಒತ್ತಾಯಿಸಲು ನಿರ್ಧಾರ
ಇನ್ನು, ಭತ್ತ ಬೆಳೆವ ರೈತರಿಗೆ ಕನಿಷ್ಠ ಕ್ವಿಂಟಾಲಿಗೆ ರೂ. 2,500 ನಿಗದಿಗೊಳಿಸಬೇಕು. ಸಾಗುವಳಿ ಜಮೀನು ದಾಖಲಾತಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಬೇಕು. ದಾಖಲೆಗಳಲ್ಲಿ ದೋಷವಿದ್ದರೆ ಸರ್ಕಾರವೇ ಸರಿಪಡಿಸಬೇಕು ಎಂದರು.
ಸೊಪ್ಪಿನಬೆಟ್ಟ ಕಾನು ಜಮೀನುಗಳಲ್ಲಿ ಬಗರ್ ಹುಕುಂ ಮಾಡಿದ ರೈತರಿಗೆ ಜಮೀನು ಮಂಜೂರು ಮಾಡುವುದು ಹಾಗೂ 94ಸಿ ಅಡಿಯಲ್ಲಿ ಮನೆ ಮಂಜೂರಾತಿ ಮಾಡುವುದು. ರೈತರ ಜಮೀನನ್ನು ಪೋಡಿ ದುರಸ್ತಿಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಕ್ರಮವಹಿಸುವುದು. ಸರ್ವೆ ಕಾರ್ಯದಲ್ಲಿ ವಿಳಂಬವಾಗುತ್ತಿದ್ದು ಸಕಾಲದಲ್ಲಿ ಸರ್ವೆ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಬಾಳೇಹಳ್ಳಿ ಪ್ರಭಾಕರ್ ಹೇಳಿದರು.
ಕೃಷಿಕ ಸಮಾಜದ ನಿರ್ದೇಶಕ ಸಿ.ಬಿ. ಈಶ್ವರ್ ಮಾತನಾಡಿ, ರೈತರು ಇಂದು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸದೇ ಇದ್ದರೆ ರೈತರ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ರೋಗ ರುಜಿನಗಳನ್ನು ನಿಯಂತ್ರಿಸದೇ ಹೋದರೆ ಅಡಿಕೆ ಬೆಳೆಯ ಭವಿಷ್ಯ ಮಂಕಾಗಲಿದೆ ಎಂದರು.












Click it and Unblock the Notifications