ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ
ಶಿವಮೊಗ್ಗ, ಜನವರಿ 03: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಕುರಿತು ವ್ಯಾಪಕ ಪ್ರಚಾರ ಮಾಡುತ್ತಿದೆಯೇ ಹೊರತು ನ್ಯಾಷನಲೈಸ್ ಬ್ಯಾಂಕ್ ಸಾಲ ಮನ್ನಾ ಮಾಡುವಲ್ಲಿ ಎಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಗುಡುಗಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಎರಡು ಮೂರು ಜಿಲ್ಲೆಗಳಲ್ಲಿ ಅಲ್ಲೊಂದು ಇಲ್ಲೊಂದು ನೂರು ರೈತರ ಸಾಲ ಮನ್ನಾವಾಗಿದೆ ಅಷ್ಟೆ.
ಹೊಸ ವರ್ಷಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ವಿದೇಶ ಪ್ರವಾಸದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಬರವಿದೆ. ಬರದ ಬಗ್ಗೆ ಕಾಳಜಿ ತೋರದೆ ಮೋಜು ಮಸ್ತಿಯಲ್ಲಿ ಪಾಲ್ಗೊಂಡಿರುವುದು ದುರಂತವೆಂದರು.

ಜಿಲ್ಲೆಯಲ್ಲಿ 156 ತಾಲೂಕಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದೆ. ಆದರೆ ಬರದ ಹಿನ್ನಲೆಯಲ್ಲಿ ಗುಳೆ ಹೋಗುವುದನ್ನು ತಡೆಯುವ, ಕುಡಿಯುವ ನೀರು ಯೋಜನೆ ಮೊದಲಾದ ಯೋಜನೆಗಳನ್ನ ಕೈಗೊಳ್ಳಬೇಕಿತ್ತು. ಅಂತಹ ಕೆಲಸಗಳು ನಡೆಯುತ್ತಿಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು, ಅವರಿಗೆ ಸಚಿವ ಸ್ಥಾನ ಹೋಗಿರುವುದಕ್ಕೆ ಬೇಸರಗೊಂಡು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇದು ಎಲ್ಲರಿಗೂ ತಿಳಿದ ಸತ್ಯ ಎಂದು ಬಿಎಸ್ ವೈ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯನವರು ಬಿಜೆಪಿಯವರು ಆಪರೇಷನ್ ಕಮಲ ಮೂಲಕ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿಎಸ್ ವೈ, ಸಿದ್ದರಾಮಯ್ಯನವರೇ ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೇ ನಮ್ಮ ಪಕ್ಷವನ್ನ ಅಸ್ಥಿರಗೊಳಿಸುತ್ತಿದ್ದಾರೆ ಎಂದರು.












Click it and Unblock the Notifications