ಶಿವಮೊಗ್ಗದಲ್ಲಿ ರಾಜ್ಯದಲ್ಲಿಯೇ ದೊಡ್ಡ ಮೀನುಮರಿ ಉತ್ಪಾದನೆ ಘಟಕ
ಶಿವಮೊಗ್ಗ, ಸೆ 7: ಶಿವಮೊಗ್ಗ ಜಿಲ್ಲೆಯ ಭದ್ರಾ ಪ್ರಾಜೆಕ್ಟ್ ಮೆಣಸಿನ ಹಳ್ಳಿಯಲ್ಲಿರುವ 130 ಎಕರೆ ಪ್ರದೇಶದಲ್ಲಿಯ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ, ಹಿಂದೂ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿ ಪರಿಶೀಲಿಸಿದರು.
ಮೀನು ಮರಿಗಳ ಉತ್ಪಾದನೆ ಮತ್ತು ಸಾಕಾಣಿಕೆ ಕೆರೆಗಳ ನಿರ್ಮಾಣದಲ್ಲಿ ಆಗಿರುವ ಲೋಪದೋಷ, ಕೆ.ಆರ್.ಐ.ಡಿ.ಎಲ್ ಮೂಲಕ ನಡೆಯುತ್ತಿರುವ ಕಾಮಗಾರಿ ವಿಳಂಬದಿಂದಾಗಿ ಮರಿಗಳ ಉತ್ಪಾದನೆಯಲ್ಲಿ ಕುಂಠಿತ, ಸಿಬ್ಬಂದಿಗಳ ಸಮಸ್ಯೆಗಳ ಸಹಿತ ಇನ್ನಿತರ ವಿಚಾರಗಳ ಕುರಿತಾಗಿ ಸಮಗ್ರವಾಗಿ ಸಚಿವರು ಪರಿಶೀಲನೆ ನಡೆಸಿದರು.
ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಲು ಸಚಿವ ಕೋಟ ಪೂಜಾರಿ ಸೂಚಿಸಿದರು. ಸ್ವಯಂ ಉದ್ಯೋಗಕ್ಕಾಗಿ, ಮೀನುಗಾರಿಕೆ ತರಬೇತಿ ಪಡೆಯಲು ನಿರ್ಮಾಣವಾಗುತ್ತಿರುವ ಮೀನುಗಾರಿಕೆ ತರಬೇತಿ ಸಂಸ್ಥೆಯನ್ನು ಸಚಿವರು ಈ ಸಂದರ್ಭದಲ್ಲಿ ಪರಿಶೀಲಿಸಿದರು.

ಸಂಸ್ಥೆಯ ನೂತನ ಕಟ್ಟಡವನ್ನು ಇನ್ನೆರಡು ವಾರದಲ್ಲಿ ಲೋಕಾರ್ಪಣೆ ಮಾಡಲು ಸೂಚಿಸಿದ ಸಚಿವರಿಗೆ, ಮೀನುಮರಿಗಳ ಉತ್ಪಾದನೆ ಕುರಿತು ಮಾಹಿತಿ ನೀಡಿದ ಹಿರಿಯ ಅಧಿಕಾರಿಗಳು, ಉತ್ಪಾದನಾ ಘಟಕಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳಿಗೆ ಅನುದಾನದ ಬಗ್ಗೆ ಮಾಹಿತಿ ಒದಗಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ, ಒಳನಾಡು ಮೀನುಗಾರಿಕೆಯಲ್ಲಿ ಭಾರತದಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದ್ದು, ಗುಣಮಟ್ಟದ ಮೀನುಮರಿಗಳ ಸರಬರಾಜಿನಲ್ಲಿ ಆಗುತ್ತಿರುವ ಕೊರತೆ, ಮೀನು ಉತ್ಪಾದನೆಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಬಹುದೊಡ್ಡ ಮೀನುಮರಿ ಉತ್ಪಾದನೆ ಘಟಕವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವ ಮೂಲಕ ಎರಡು ಪಟ್ಟು ಹೆಚ್ಚಿನ ಬೇಡಿಕೆ ಇರುವ ಮೀನುಮರಿಗಳ ಉತ್ಪಾದನೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ಸದ್ಯದಲ್ಲಿ ಅಭಿವೃದ್ಧಿಯ ಪೂರ್ಣಪ್ರಮಾಣದ ಯೋಜನಾ ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಮಂಡಿಸಲು ಸೂಚಿಸಿದರು.

ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದರು. ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ದಿನೇಶ್ ಕುಮಾರ್, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications