ಶಿವಮೊಗ್ಗ : ತುಂಗಾ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಶಿವಮೊಗ್ಗ, ಜುಲೈ 01 : ಮಲೆನಾಡಿನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಗಾಜನೂರಿನ ತುಂಗಾ ಜಲಾಶಯದಿಂದ 5 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದ್ದು, ಶಿವಮೊಗ್ಗ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ.
ತುಂಗಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಎನ್.ಫಣಿರಾಜ್ ಅವರು ಸೋಮವಾರ ಸಂಜೆ ಮೊದಲನೇ ಗೇಟ್ ಮೇಲೆತ್ತುವ ಮೂಲಕ ನದಿಗೆ ನೀರನ್ನು ಹರಿಸಲು ಚಾಲನೆ ಕೊಟ್ಟರು. ಜಲಾಶಯದ 8, 9, 10 ಮತ್ತು 11ನೇ ಗೇಟ್ಗಳನ್ನು ಅರ್ಧಕ್ಕೆ ಮೇಲೆತ್ತಿ, 5 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ತುಂಗಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. 6,600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಅಡಿ. 3.25 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಜಲಾಶಯ ಹೊಂದಿದ್ದು ಸೋಮವಾರ 3 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.

ಕಳೆದ ವರ್ಷ ಜೂನ್ 9ರಂದು ಜಲಾಶಯದ ಗೇಟ್ಗಳನ್ನು ತೆರಯಲಾಗಿತ್ತು. ಈ ಬಾರಿ ಹಿಂಗಾರು ಮಳೆ ಕೈ ಕೊಟ್ಟಿತ್ತು. ಜೂನ್ ತಿಂಗಳಿನಲ್ಲಿ ಮಳೆ ಸುರಿಯದ ಕಾರಣ ತಡವಾಗಿ ಜಲಾಶಯದ ಗೇಟ್ ತೆರೆಯಲಾಗಿದೆ.
ಶಿವಮೊಗ್ಗ ನಗರಕ್ಕೆ ಕುಡಿಯುವ ನೀರನ್ನು ತುಂಗಾ ಜಲಾಶಯದ ಮೂಲಕ ಪೂರೈಕೆ ಮಾಡಲಾಗುತ್ತದೆ. ಈ ಬಾರಿ ಜಲಾಶಯ ಬರಿದಾದ ಕಾರಣ ಎರಡು ದಿನಕ್ಕೊಮ್ಮೆ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಮಹಾನಗರ ಪಾಲಿಕೆ ಆರಂಭಿಸಿತ್ತು.
ಕಳೆದ ಒಂದು ವಾರದಿಂದ ತೀರ್ಥಹಳ್ಳಿ, ಆಗುಂಬೆ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಇದರಿಂದಾಗಿ ತುಂಗಾ ನದಿಯ ಒಳಹರಿವು ಹೆಚ್ಚಾಗಿತ್ತು. ಇದರಿಂದಾಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.












Click it and Unblock the Notifications