ಮೋದಿ ಮಿತ ಬಳಕೆ ಮನವಿಗೆ ಪರ-ವಿರೋಧ ಚರ್ಚೆ: ಮೊದಲು ಜನಪ್ರತಿನಿಧಿಗಳು ದುಂದು ವೆಚ್ಚ ಕಡಿಮೆ ಮಾಡಲಿ..
ಚಿನ್ನ ಖರೀದಿ, ವಿದೇಶಿ ಪ್ರವಾಸ ಮತ್ತು ವಿದೇಶ ವಸ್ತುಗಳ ಬಳಕೆ ಕಡಿಮೆ, ಇಂಧನ ಮಿತ ಬಳಕೆ, ಇವಿ- ಸಾರ್ವಜನಿಕ ಸಾರಿಗೆ ಅಧಿಕ ಬಳಕೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದೇ ತಡ ಪರ ವಿರೋಧ ಚರ್ಚೆಗಳು ಜೋರಾಗಿವೆ. ಜನರ ತೆರಿಗೆ ಹಣ ಬಳಸುವ ಜನನಾಯಕರೇ ದುಂದು ವೆಚ್ಚ ಕಡಿಮೆ ಮಾಡಿ ಪ್ರಜೆಗಳಿಗೆ ಮಾದರಿಯಾಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ತರಕಾರಿ ಬೆಲೆ ಏರಿಕೆ ಆಗುತ್ತಿದ್ದಂತೆ ಮಿತವಾಗಿ ಬಳಸುವ ನಮಗೆ 'ನಮೋ' ಮನವಿ ಅರ್ಥವಾಗದಿರುವುದು ವಿಪರ್ಯಾಸವೇ ಸರಿ ಎಂದು ವಿಶ್ಲೇಷಿಸಲಾಗುತ್ತಿದೆ.
ಯಾವುದೇ ಒಂದು ವಿಷಯ ಗಂಭೀರ ಸ್ವರೂಪ ಪಡೆಯಲು ಇಂದು ಸಾಮಾಜಿಕ ಜಾಲತಾಣಗಳ ಪಾತ್ರ ದೊಡ್ಡದಿದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳ ಯುದ್ಧದಿಂದಾಗಿ ಭಾರತದ ಸ್ಥಿತಿ ಒಂದು ವರ್ಷ ಕಷ್ಟಕರವಾಗಲಿದ್ದು, ಈ ವೇಳೆ ಜನರು ಹೇಗೆ ವರ್ತಿಸಬೇಕೆಂದು ಪ್ರಧಾನಿ ಸಲಹೆ ನೀಡಿದ್ದಾರೆ. ಇತ್ತ ಪ್ರಧಾನಿ ಹೇಳಿಕೆಯೇ ಕೇಂದ್ರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದೆಲ್ಲ ವಿಪಕ್ಷ ನಾಯಕರು ದೂರಿದ್ದಾರೆ. ಈ ನಡುವೆ ಸಾರ್ವಜನಿಕರೇ ಪಕ್ಷಾತೀತವಾಗಿ ಜನರ ತೆರಿಗೆ ಹಣ ಮಿತ ಬಳಕೆ ಮಾಡುವಂತೆ ಜನಪ್ರತಿನಿಧಿಗಳಿಗೆ ಬುದ್ಧಿ ಹೇಳುತ್ತಿದ್ದಾರೆ.

ಮಿತ ಬಳಕೆ, ದುಂದು ವೆಚ್ಚಗಳ ಕುರಿತು ಹೇಳಿರುವ ಮಾತುಗಳು ಜನನಾಯಕರಿಗೇ ಜನರು ಹೇಳಬೇಕಾಗಿದ ಮಾತುಗಳು. ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ ನಡೆಸಲಾಗುತ್ತದೆ. ಜನಪ್ರತಿನಿಧಿಗಳ ಸಂಬಳ, ಊಟ, ವಸತಿ, ಆರೋಗ್ಯ ಮುಂತಾದ ಎಲ್ಲ ಖರ್ಚುಗಳೂ ನಿರ್ವಹಿಸಲ್ಪಡುತ್ತಿವೆ. ಸಭೆ, ಕಾರ್ಯಕ್ರಮಗಳಿಗೆ ಜನಪ್ರಿತನಿಧಿಗಳೇ ಅಪಾರ ದುಂದು ವೆಚ್ಚ ಮಾಡುತ್ತಾರೆ. ಮೊದಲು ಅದಕ್ಕೆ ಕಡಿವಾಣ ಹಾಕಿದರೆ ಅಪಾರ ಪ್ರಮಾಣದ ಹಣ ಉಳಿತಾಯವಾಗುತ್ತದೆ.
ಜನರಿಗೆ ನೀವು ಹೇಳಿದ್ದೀರಿ ನಮ್ಮಿಂದಾದಷ್ಟು ಪಾಲಿಸುತ್ತೇವೆ. ನಮ್ಮಿಂದ ಆಯ್ಕೆಯಾದವರು ನೀವು ಭ್ರಷ್ಟಾಚಾರ ಮಾಡಬೇಡಿ. ಜನರ ಹಣ ಪೋಲು ಮಾಡದೇ ಉತ್ತಮ ಆಡಳಿತ ನೀಡಿ. ನಿಮ್ಮ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿ ನೀವು ಮೊದಲು ಮಾದರಿಯಾಗಿ. ನಾಯಕರ ಹಿಂದೆ ಮುಂದೆ ಓಡಾಡುವ ವಾಹನಗಳು ಕಡಿಮೆಯಾದರೆ ಅಪಾರ ಇಂಧನ ಉಳಿಯುತ್ತದೆ. ನೀವು ಸಹ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ, ಸಮಾರಂಭ ಮಾಡಿ. ರಸ್ತೆ ಉದ್ಘಾಟನೆ ಹೆಸರಿನಲ್ಲಿ ಕೊಟಿ ಕೋಟಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವಂತೆ ಎಂದು ಪ್ರಧಾನಿ ಸೇರಿ ಜನನಾಯಕರಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹೇಳಿಕೆ ಪ್ರಸ್ತಾಪ, ಬಿಸಿ ಬಿಸಿ ಚರ್ಚೆ
ಬಟ್ಟೆ ಉದ್ಯಮ ಬ್ರಿಟಿಷರ ಕೈಯಲ್ಲಿತ್ತು ಎಂಬ ಕಾರಣಕ್ಕೆ ಮಹಾತ್ಮ ಗಾಂಧೀಜಿ ಧೋತಿ ಬಿಟ್ಟರೆ ಮೈಮೇಲೆ ಬಟ್ಟೆ ಧರಿಸುತ್ತಿರಲಿಲ್ಲ. ಬಟ್ಟೆ ಹಾಕಿದರೆ ಬ್ರಿಟಿಷರಿಗೆ ವ್ಯಾಪಾರ ಕೊಟ್ಟಂತಾಗುತ್ತದೆ ಎಂಬುದು ಅವರ ನಿಲುವು. ಈ ಕಾರಣದಿಂದಲೇ ಅವರು ಸ್ವದೇಶಿ ಖಾದಿ ಉದ್ಯಮ ಬೆಂಬಲಿಸಿದರು. ಅಂದು ಅವರು ಸಹ ದೇಶದ ಮೇಲಿನ ಕಾಳಜಿಯಿಂದಲೇ ಹೇಳಿದ್ದರು. ಇಂದು ಪ್ರಧಾನಿ ಮೋದಿ ಸಹ ಅದನ್ನೆ ಮಾಡಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ವಿದೇಶಿ ವಿನಿಮಯ ಕಡಿಮೆ ಮಾಡಬೇಕು. ಅಲ್ಲಿಂದ ಪೂರೈಕೆ ಆಗುವ ಚಿನ್ನ, ಇಂಧನ, ವಸ್ತುಗಳ ಬಳಕೆ ಕಡಿಮೆ ಮಾಡಿ ಎಂದು ಹೇಳುವುದು ತಪ್ಪಲ್ಲ. ಟೊಮೆಟೋ ದರ 50 ರೂಪಾಯಿ ಆದರೆ ಸ್ವಯಂ ಮಿತಿ ಹೇರಿಕೊಳ್ಳುವ ನಮಗೆ ಪ್ರಧಾನಿ ಮಾತಿನ ಹಿಂದಿನ ಉದ್ದೇಶ ತಿಳಿಯುತಿಲ್ಲ ಎಂದು ನಮೋ ನಿರ್ಧಾರವನ್ನು ನೆಟ್ಟಿಗರು ಬೆಂಬಲಿಸಿದ್ದಾರೆ.
ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಒಂದು ದಿನದ ಊಟ ಬಿಡಲು ತಿಳಿಸಿದ್ದರು. ದೇಶದ ಆರ್ಥಿಕ ಶಿಸ್ತು ಬರಲು ಚಿನ್ನ ಖರೀದಿಸದಂತೆ ಅಂದು ಇಂದಿರಾಗಾಂಧಿ ಅವರು ಕರೆ ಕೊಟ್ಟಿದ್ದರು. ಪ್ರಧಾನಿ ಮೋದಿಯವರ ಹೇಳಿಕೆ ಖಂಡಿಸುವುದಾದರೆ ಮಹತ್ಮಾ ಗಾಂಧಿ, ಶಾಸ್ತ್ರಿ, ಇಂದಿರಾ ಗಾಂಧಿಯವರ ಕಾಳಜಿಯನ್ನು ಖಂಡಿಸಬೇಕಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ದ್ವೇಷ ಬಿಡಿ, ದೇಶ ಮೊದಲು ಅನ್ನಿ
ಪಿಎಂ ಮೋದಿ ಮೇಲಿನ ದ್ವೇಷ ದೇಶದ ಮೇಲಿನ ದ್ವೇಷವಾಗಿ ಬದಲಾಗದಿರಲಿ. ದೇಶದ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡದೆ ಕೇವಲ ವೈಯಕ್ತಿಕ ದ್ವೇಷವನ್ನು ಸಾಧಿಸುವ ಕೊಳಕರನ್ನು ನಮ್ಮವರೇ ಆಗಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ದೇಶದ ವಿರುದ್ಧ ಮಾತಾಡುವವರು ಮುಂದೆ ಶತ್ರುಗಳ ಜೊತೆಗೂಡಿ ನಮ್ಮ ವಿರುದ್ಧ ನಿಲ್ಲಲಾರರು! ಎಂದು ಪ್ರಧಾನಿ ಹೇಳಿಕೆಗೆ ಆಕ್ಷೇಪಿಸಿದವರಿಗೆ ತಿರುಗೇಟು ನೀಡಲಾಗಿದೆ.
ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್ ಈ ಪಕ್ಷಗಳೆಲ್ಲ ದೇಶ ಉಳಿದರೆ ಮಾತ್ರ ಉಳಿಯುತ್ತವೆ. ಗಾಂಧಿ ಹೇಳಿದರೆಂದ ಎಲ್ಲರೂ ಬಟ್ಟೆಯನ್ನು ಕಿತ್ತು ಹಾಕಿಲ್ಲ, ಶಾಸ್ತ್ರಿಯವರು ಹೇಳಿದರೆಂದು ಎಲ್ಲರೂ ಊಟ ಬಿಟ್ಟಿಲ್ಲ. ಇಂದಿರಾಗಾಂಧಿ ಮತ್ತು ಪ್ರಧಾನಿ ಮೋದಿ ಹೇಳಿದ್ದಾರೆಂದು ಜನ ಚಿನ್ನ ಖರೀದಿಸುವುದನ್ನು ನಿಲ್ಲಿಸಲ್ಲ. ಸಾಧ್ಯವಾದರೆ ದೇಶದ ಹಿತಾಸಕ್ತಿಗಾಗಿ ನಮ್ಮಿಂದಾದ ಕೆಲಸ ಮಾಡಬೇಕು ಎಂದು ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಎಕ್ಸ್, ಫೇಸ್ಬುಕ್ ಸೇರಿ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಮುಂದುವರಿದಿವೆ.














Click it and Unblock the Notifications