ದೇಶದ ಹಿತಕ್ಕಾಗಿ ಷರತ್ತಿಲ್ಲದೆ ಮರಳುತ್ತಿದ್ದೇನೆ: BSY
ಶಿವಮೊಗ್ಗ, ಡಿ.30: ಗೊಂದಲದ ಗೂಡಾಗಿದ್ದ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಮರಳಿ ಬಿಜೆಪಿ ಗೂಡು ಸೇರಿಕೊಳ್ಳುವ ವಿಷಯದಲ್ಲಿ ತಿಳಿಯಾಗಿದ್ದಾರೆ. ಸುಮಾರು ವರ್ಷದ ಹಿಂದೆ ಬಿಜೆಪಿಯಿಂದ ಸಿಡಿದೆದ್ದು ಕೆಜೆಪಿ ಸ್ಥಾಪಿಸಿದ್ದ ಯಡಿಯೂರಪ್ಪ ಅವರು ಕೆಜೆಪಿಯನ್ನು ವಿಸರ್ಜಿಸಿ, ಬಿಜೆಪಿ ಸೇರಿಕೊಳ್ಳುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ನಿನ್ನೆಯಷ್ಟೇ ಶಿಕಾರಿಪುರದಲ್ಲಿ ಈ ಘೋಷಣೆ ಮಾಡಿದ್ದ ಯಡಿಯೂರಪ್ಪ ಇಂದು ಬೆಂಗಳೂರುಇಗೆ ವಾಪಸಾಗುವ ದಾರಿಯಲ್ಲಿ ಶಿವಮೊಗ್ಗದಲ್ಲಿ ತಾವು ಬಿಜೆಪಿಗೆ ಮರಳುತ್ತಿರುವುದನ್ನು ಮತ್ತೊಮ್ಮೆ ಪ್ರಕಟಿಸಿದ್ದಾರೆ. ಇನ್ನು ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದೂ ಬಿಎಸ್ವೈ ಪ್ರಶ್ನೆಯೊಂದಕ್ಕೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಮೊನ್ನೆ ಸಾಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದಾಗಲೇ ತಾವು ಬಿಜೆಪಿಗೆ ಮರಳುವುದು ನಿಕ್ಕಿಯಾಗಿತ್ತು. ದೇಶದ ಅಭಿವೃದ್ಧಿ/ ಹಿತಕ್ಕಾಗಿ ಬಿಜೆಪಿಗೆ ಮರಳುತ್ತಿದ್ದೇನೆ. ದೇಶಕ್ಕೆ ನರೇಂದ್ರ ಮೋದಿ ನಾಯಕತ್ವವೇ ಯೋಗ್ಯ ಎಂದು ಜನರು ಹೇಳುತ್ತಿರುವ ಹಿನ್ನೆಲೆಯಲ್ಲಿ ನಾನು ಕೂಡ ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಯಾವುದೇ ಷರತ್ತು ಹಾಕದೆ ಬಿಜೆಪಿಗೆ ವಾಪಸ್
ಸುದ್ದಿಗಾರರೊಂದಿಗೆ ಶಿವಮೊಗ್ಗ ಸೋಮವಾರ ಮಾತನಾಡಿದ ಅವರು, ನನ್ನ ನಿರ್ಗಮನದ ನಂತರ ಬಿಜೆಪಿ ಶೋಚನೀಯ ಪರಿಸ್ಥಿತಿಗೆ ಬಂದಿದೆ. ಈಗ ಹಳೆಯದನ್ನೆಲ್ಲ ಕೆದಕಿ ಮಾತನಾಡುವ ಕಾಲ ಅಲ್ಲ. ಕಳೆದ ಬಾರಿ ಬಿಜೆಪಿ 19 ಲೋಕಸಭಾ ಸ್ಥಾನಗಳಲ್ಲಿ ಜಯ ಗಳಿಸಿತ್ತು. ನಾನು ಈ ಬಾರಿ ಬಿಜೆಪಿಗೆ ಸೇರ್ಪಡೆಯಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇನೆ. ನನ್ನ ಶಕ್ತಿ-ಸಾಮರ್ಥ್ಯ ತೋರಿಸುತ್ತೇನೆ. ಕಡೆ ಪಕ್ಷ ಮುಂದಿನ ಲೋಕಸಭೆಯಲ್ಲಿ 20-22 ಸ್ಥಾನಗಳನ್ನು ಗೆಲ್ಲಿಸಿಕೊಡುತ್ತೇನೆ. ಈ ಕಾರಣದಿಂದಲೇ ಯಾವುದೇ ಷರತ್ತು ಹಾಕದೆ ಬಿಜೆಪಿಗೆ ಸೇರಿಕೊಳ್ಳಲು ನಿರ್ಧಾರ ಮಾಡಿದ್ದೇನೆ. ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತ ಮುಖ್ಯ ಎಂಬುದೇ ನನ್ನ ನಿರ್ಧಾರದ ಹಿಂದೆ ಇರುವ ಗುಟ್ಟು. ಇದನ್ನು ದುರ್ಬಲ ಎಂದು ಭಾವಿಸಿಕೊಳ್ಳಬಾರದು ಎಂದರು.

ಯಡಿಯೂರಪ್ಪ ವಾಪಸಾತಿ: ಮುಂದಿನ ಪ್ರಕ್ರಿಯೆಯೇನು?
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಜನವರಿ 2 ರಂದು ಬಿಜೆಪಿ ಸೇರ್ಪಡೆಗೆ ಅಧಿಕೃತವಾಗಿ ಆಹ್ವಾನ ಬರಲಿದೆ. ಗುರುವಾರದಂದು ಯಡಿಯೂರಪ್ಪನವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ರಾಜ್ಯ ಘಟಕದ ನಾಯಕರು ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಗಳಾದ ಕೆಎಸ್ ಈಶ್ವರಪ್ಪ, ಆರ್ ಅಶೋಕ್ ಸೇರಿದಂತೆ ಮತ್ತಿತರರು ಡಾಲರ್ಸ್ ಕಾಲೋನಿಯಲ್ಲಿರುವ ಮೈತ್ರಾದೇವಿ ನಿವಾಸಕ್ಕೆ ಆಗಮಿಸಿ ಪಕ್ಷಕ್ಕೆ ಆಹ್ವಾನ ನೀಡುವರು.

ಮೊದಲ ಹಂತದಲ್ಲಿ ಯಡಿಯೂರಪ್ಪಗೆ ಮಾತ್ರ ಆಹ್ವಾನ
ಮೊದಲ ಹಂತದಲ್ಲಿ ಯಡಿಯೂರಪ್ಪನವರಿಗೆ ಮಾತ್ರ ಆಹ್ವಾನ ದೊರಕಲಿದೆ. ಮುಂದಿನ ದಿನಗಳಲ್ಲಿ ಎರಡನೆ ಹಂತದ ನಾಯಕರು ವಿಧ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗುವರು. ನಿನ್ನೆ ಶಿಕಾರಿಪುರದಲ್ಲಿ ಯಡಿಯೂರಪ್ಪನವರೇ ಇದು ನನ್ನ ಕೆಜೆಪಿಯ ಕೊನೆಯ ಸಭೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಕೆಜೆಪಿಯಲ್ಲಿನ ಅಸಮಾಧಾನ/ ಭಿನ್ನಮತ ಶಮನಗೊಂಡಿದೆ
ಪಕ್ಷದ ನಾಯಕರೊಳಗಿದ್ದ ಭಿನ್ನಮತ ಮತ್ತು ಅಸಮಾಧಾನ ಶಮನಗೊಂಡಿದ್ದು, ಸ್ಥಾನಮಾನದ ವಿಷಯ ರಾಷ್ಟ್ರೀಯ ನಾಯಕರು ತೀರ್ಮಾನಿಸಲಿದ್ದಾರೆ. ನಂತರ ಸಂಕ್ರಾಂತಿ ಮುಗಿದ ಬಳಿಕ ಕರ್ನಾಟಕದ ಮ್ಯಾಂಚೆಸ್ಟರ್ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಿ ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯಲಿದ್ದಾರೆ.

ದಾವಣಗೆರೆ ಸಮಾವೇಶದಲ್ಲಿ ಸೇರ್ಪಡೆ
ದಾವಣಗೆರೆ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಮುಖ ನಾಯಕರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಹಿಂಬಾಲಿಸಿದ್ದ ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ಎಂಡಿ ಲಕ್ಷ್ಮೀನಾರಾಯಣ, ಎಂಪಿ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ನೆಹರು ಓಲೇಕರ್, ಧನಂಜಯಕುಮಾರ್, ಸಂಸದರಾದ ಬಿವೈ ರಾಘವೇಂದ್ರ, ಶಿವಕುಮಾರ್ ಉದಾಸಿ, ಶಿವರಾಜ ಸಜ್ಜನವರ್ ಸೇರಿದಂತೆ ಎಲ್ಲಾ ನಾಯಕರು ಒಂದಾಗುವುದರ ಮೂಲಕ ಪರಸ್ಪರ ಹಸ್ತಲಾಘವ ಮಾಡಲಿದ್ದಾರೆ.












Click it and Unblock the Notifications