ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣದ ಚಾವಣಿ ಕುಸಿತ
ಶಿವಮೊಗ್ಗ, ಜುಲೈ 27 : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕಚೇರಿಯ ಸಭಾಂಗಣದ ಚಾವಣಿ ಕುಸಿದು ಬಿದ್ದಿದೆ. ಹಳೆಯ ಕಟ್ಟಡವಾದ ಕಾರಣ ಈ ಘಟನೆ ನಡೆದಿದ್ದು, ಸಭಾಂಗಣದಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಸೋಮವಾರ ಮುಂಜಾನೆ ತಾಲೂಕು ಕಚೇರಿ ಸಭಾಂಗಣದ ಚಾವಣಿ ಕುಸಿದು ಬಿದ್ದಿದೆ. ಸಭಾಂಗಣದಿಂದಲೇ ಆಕಾಶ ಕಾಣುವಷ್ಟು ದೊಡ್ಡ ದೊಡ್ಡ ಮಟ್ಟಿಗೆ ಚಾವಣಿ ಕುಸಿದಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಸಭಾಂಗಣದಲ್ಲಿ ಯಾರೂ ಇರಲಿಲ್ಲ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಿತ್ಯ ಸಭೆಗಳು ನಡೆಯುತ್ತವೆ. ಶಾಸಕರು ಸಹ ತಾಲೂಕು ಅಭಿವೃದ್ಧಿ ಸಭೆಗಳನ್ನು ಇದೇ ಸಭಾಂಗಣದಲ್ಲಿ ನಡೆಸುತ್ತಿದ್ದರು. ಆದರೆ, ಇಂದು ಯಾವುದೇ ಸಭೆ ಇರದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.

ಸಭಾಂಗಣದ ಚಾವಣಿ ಕುಸಿದು ಬೀಳುವ ಹಂತದಲ್ಲಿದೆ ಎಂದು ಸ್ಥಳೀಯ ಪತ್ರಿಕೆಗಳು ಹಲವು ಬಾರಿ ವರದಿ ಮಾಡಿದ್ದವು. ಆದರೆ, ಅಧಿಕಾರಿಗಳು ಅದನ್ನು ಗಮನಿಸಿದೇ ಸಭಾಂಗಣದಲ್ಲಿ ಸಭೆಗಳನ್ನು ಮುಂದುವರೆಸಿದ್ದರು.
ಮಂಗಳವಾರ ಇದೇ ಸಭಾಂಗಣದಲ್ಲಿ ಸಭೆಯೊಂದು ನಿಗದಿಯಾಗಿತ್ತು. ಸಭಾಂಗಣದ ಹೆಂಚು, ರೀಪು, ಪಕಾಶಿಗಳು ಕೆಳಗೆ ಬಿದ್ದು ದೊಡ್ಡ ರಂಧ್ರ ನಿರ್ಮಾಣವಾಗಿದೆ. ಜೋರಾಗಿ ಮಳೆ ಸುರಿದರೆ ಸಭಾಂಗಣದ ತುಂಬಾ ನೀರು ತುಂಬಲಿದೆ.
ತಾಲೂಕಿನ ಜನರಿಗೆ ಸಿಹಿ ಸುದ್ದಿ : ತೀರ್ಥಹಳ್ಳಿ ತಾಲೂಕಿನ ಜನರಿಗೆ ಸೋಮವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಕ್ಷೇತ್ರದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಆರಗ ಜ್ಞಾನೇಂದ್ರ ಸಚಿವರಾಗಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಸಚಿವ ಸ್ಥಾನ ಕೈತಪ್ಪಿತ್ತು. ಈಗ ಅವರನ್ನು ಗೃಹ ಮಂಡಳಿಗೆ ಅಧ್ಯಕ್ಷರಾಗಿ ನೇಮಿಸಲಾಗಿದೆ.












Click it and Unblock the Notifications