ಶಿವಮೊಗ್ಗ : ಮಳೆಗಾಗಿ ಶಿವನಿಗೆ 1008 ಎಳನೀರ ಅಭಿಷೇಕ
ಶಿವಮೊಗ್ಗ, ಜೂನ್ 10 : ಮಲೆನಾಡು ಭಾಗಕ್ಕೆ ಈ ಬಾರಿ ಬರದ ಬಿಸಿ ತಟ್ಟಿದೆ. ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಜಿಲ್ಲೆಯ ಜೀವನದಿ ತುಂಗೆ ಬತ್ತಿ ಹೋಗಿದ್ದು, ಮರಳುಗಾಡಾಗಿದೆ. ಆದ್ದರಿಂದ, ಶಿವನನ್ನು ಜನರು ಬೇಡಿಕೊಳ್ಳುತ್ತಿದ್ದಾರೆ.
ಸೋಮವಾರ ಶಿವಮೊಗ್ಗ ನಗರದ ಹೊರವಲಯದ ಹರಕೆರೆಯ ಶಂಕರ ದೇವಾಲಯದಲ್ಲಿ ಶಿವನಿಗೆ 1008 ಎಳನೀರಿನ ಅಭಿಷೇಕ ಮಾಡಲಾಯಿತು. ರಾಜ್ಯದಲ್ಲಿ ಬೇಗ ಮಳೆ ಬರಲಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿ ಎಂದು ಪ್ರಾರ್ಥಿಸಲಾಯಿತು.
ಸೌರಭ ಸಂಸ್ಥೆ ವತಿಯಿಂದ ಎಳನೀರ ಅಭಿಷೇಕ ಆಯೋಜಿಸಲಾಗಿತ್ತು. ಅಭಿಷೇಕದ ಜೊತೆ ಜೊತೆಗೆ ರುದ್ರಪಠಣ ಹಾಗೂ ವಿವಿಧ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ ಪ್ರಸಾದ ವಿನಿಯೋಗವನ್ನು ಸಹ ಏರ್ಪಡಿಸಲಾಗಿತ್ತು.

ಸೌರಭ ಸಂಸ್ಥೆ ಅಧ್ಯಕ್ಷರಾದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, 'ಜಿಲ್ಲೆಯಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ನೀರಿನ ಕೊರತೆ ಉಂಟಾಗಿದೆ. ಹೀಗಾಗಿ ದೇವರನ್ನು ಸಾಮೂಹಿಕವಾಗಿ ಪ್ರಾರ್ಥಿಸುವ ಕಾಲ ಬಂದಿದೆ' ಎಂದು ಹೇಳಿದರು.
ತುಂಗಾ ನದಿ ಬತ್ತಿ ಹೋಗಿರುವ ಕಾರಣ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜೂನ್ 10ರಿಂದ ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತೇವೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಘೋಷಣೆ ಮಾಡಿದೆ.
ಶಿವಮೊಗ್ಗ ಜಿಲ್ಲೆಗೆ ಬರದ ಬಿಸಿ ತಟ್ಟಿದೆ 93 ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಶಿಕಾರಿಪುರ ತಾಲೂಕಿನಲ್ಲಿ 22, ಹೊಸನಗರ ತಾಲೂಕಿನಲ್ಲಿ 24 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ.












Click it and Unblock the Notifications