ಶಿವಮೊಗ್ಗ ರಾಜಕೀಯ : ಸೊರಬದಲ್ಲಿ ಬಿಜೆಪಿ ಬಲ ಕುಸಿತ!
ಶಿವಮೊಗ್ಗ, ಡಿಸೆಂಬರ್ 04 : ವಿಧಾನಸಭೆ ಚುನಾವಣೆ ಎದುರಾಗುತ್ತಿರುವಾಗ ಸೊರಬ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ನಾಲ್ವರು ತಾಲೂಕು ಪಂಚಾಯಿತಿ ಸದಸ್ಯರು ಜೆಡಿಎಸ್ ಸೇರಿದ್ದು, ಶಾಸಕ ಮಧು ಬಂಗಾರಪ್ಪ ಅವರ ಬಲ ಹೆಚ್ಚಿದೆ.
ಶಿವಮೊಗ್ಗ ರಾಜಕಾರಣ : ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ಗೆ?
ವಿಜಯ ಕುಮಾರ್, ಬಂಗಾರ ಗೌಡ, ಮೀನಾಕ್ಷಿ ನಿರಂಜನಮೂರ್ತಿ, ಕಮಲಾ ಕುಮಾರ್ ಬಿಜೆಪಿ ತೊರೆದು ಮಧು ಬಂಗಾರಪ್ಪ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದಾರೆ. ಸೊರಬ ತಾಲೂಕು ಪಂಚಾಯಿತಿಯಲ್ಲಿ ಸದ್ಯ ಬಿಜೆಪಿ ಸದಸ್ಯರ ಸಂಖ್ಯೆ ಕೇವಲ 1.
ಸೊರಬ ತಾಲೂಕು ಪಂಚಾಯಿತಿ ಸದಸ್ಯ ಬಲ 19. 2016ರಲ್ಲಿ ಚುನಾವಣೆ ನಡೆದಾಗ ಜೆಡಿಎಸ್ 11, ಬಿಜೆಪಿ 5, ಕಾಂಗ್ರೆಸ್ 3ಸ್ಥಾನ ಪಡೆದುಕೊಂಡಿದ್ದವು. ಈಗ ಬಿಜೆಪಿಯ ನಾಲ್ವರು ಸದಸ್ಯರು ಜೆಡಿಎಸ್ ಸೇರಿದ್ದು, ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.
ಸೊರಬ ಕ್ಷೇತ್ರದ ಈ ಬಾರಿ ಚುನಾವಣೆ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿದ್ದಾರೆ. ಮಾಜಿ ಸಚಿವ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಅವರಲ್ಲಿ ಯಾರಿಗೆ ಟಿಕೆಟ್? ಎಂಬುದು ಇನ್ನೂ ಅಂತಿಮವಾಗಿಲ್ಲ.
ಶಿಕಾರಿಪುರದಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಯಡಿಯೂರಪ್ಪ
ಸದ್ಯ, ಸೊರಬ ಕ್ಷೇತ್ರ ಜೆಡಿಎಸ್ ವಶದಲ್ಲಿದೆ. ಮಧು ಬಂಗಾರಪ್ಪ ಕ್ಷೇತ್ರದ ಶಾಸಕರು. ಜಿಲ್ಲೆಯ ತುಂಬಾ ಸಂಚಾರ ನಡೆಸುತ್ತಿರುವ ಅವರು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಜಯಗಳಿಸಬೇಕು ಎಂದು ಶ್ರಮಿಸುತ್ತಿದ್ದಾರೆ.