ತುಂಬಿ ಹರಿಯುವ ತುಂಗಾನದಿಯಲ್ಲಿ ಶಿವಮೊಗ್ಗ ಎಸ್ಪಿ ಸಾಹಸ
ಶಿವಮೊಗ್ಗ, ಜುಲೈ, 05: ತಮ್ಮ ನೇರ-ನಿರ್ಭಿತ ಕಾರ್ಯವೈಖರಿಯ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ರವರು ಮಂಗಳವಾರ ಮತ್ತೊಂದು ಸಾಹಸ ಮಾಡಿದ್ದಾರೆ..!
ಮೈದುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ 'ರಿವರ್ ರಾಫ್ಟಿಂಗ್' ನಡೆಸುವ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ವಿಭಿನ್ನ ಸಾಹಸ ಕಾರ್ಯ ಮಾಡಿದ್ದಾರೆ.[ರಾಜ್ಯಾದ್ಯಂತ ಅಬ್ಬರಿಸಿದ ಮಳೆರಾಯ, ಭರ್ತಿಯಾದ ಜಲಾಶಯ]

ಶಿವಮೊಗ್ಗ ಹೊರವಲಯ ಮತ್ತೂರು ಗ್ರಾಮದಿಂದ ಆರಂಭವಾದ 'ರಾಫ್ಟಿಂಗ್' ಸಾಹಸವು ನಗರದ ಕೋಟೆ ರಸ್ತೆ ಸಮೀಪದ ಕೋರ್ಪಳಯ್ಯನ ಛತ್ರದ ಬಳಿ ಅಂತ್ಯಗೊಂಡಿತು. ಈ ವೇಳೆ ಸಾರ್ವಜನಿಕರು ಎಸ್.ಪಿ. ಸೇರಿದಂತೆ 'ರಾಫ್ಟಿಂಗ್' ಸಾಹಸದಲ್ಲಿ ಭಾಗಿಯಾಗಿದ್ದವರನ್ನು ಆತ್ಮೀಯವಾಗಿ ಅಭಿನಂದಿಸಿದರು.
ಸಂಚಾರಿ ನಿಯಮಗಳ ಬಗ್ಗೆ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾಹಸ ಅಕಾಡೆಮಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ 'ರಾಫ್ಟಿಂಗ್' ಸಾಹಸ ಆಯೋಜಿಸಲಾಗಿತ್ತು . ಸರಿಸುಮಾರು 10 ಜನರಿದ್ದ ತಂಡವು 7 ಕಿ.ಮೀ.ವರೆಗೆ ನದಿಯಲ್ಲಿ ರಾಫ್ಟಿಂಗ್ ನಡೆಸಿ, ನಾಗರಿಕರ ಗಮನ ಸೆಳೆಯುವ ಕೆಲಸ ಮಾಡಿತು.

'ರಾಫ್ಟಿಂಗ್' ಸಾಹಸ ಮುಕ್ತಾಯಗೊಂಡ ನಂತರ ಎಸ್.ಪಿ. ರವಿ ಡಿ. ಚೆನ್ನಣ್ಣರವರು ಮಾತನಾಡಿ, 'ಸಂಚಾರಿ ನಿಯಮಗಳ ಬಗ್ಗೆ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ರಾಫ್ಟಿಂಗ್ ಸಾಹಸ ನಡೆಸಲಾಯಿತು. ನಿಜಕ್ಕೂ ಇದೊಂದು ವಿಭಿನ್ನ ಅನುಭವ ನೀಡಿತು' ಎಂದು ಹೇಳಿದರು.[ಮೈದುಂಬಿದ ಜೋಗ ನೋಡಿಕೊಂಡು ಬನ್ನಿ]
'ಈ ಹಿಂದೆ ನಾನು ನರ್ಮದಾ ಹಾಗೂ ಗಂಗಾ ನದಿಗಳಲ್ಲಿಯೂ ರಾಫ್ಟಿಂಗ್ ನಡೆಸಿದ್ದೆ. ಇದರಿಂದ ತುಂಗಾ ನದಿಯಲ್ಲಿ 'ರಾಫ್ಟಿಂಗ್ ನಡೆಸುವುದು ಸುಲಭವಾಯಿತು. ಈ ಸಾಹಸಕ್ಕೆ ಕೈಜೋಡಿಸಿದ ಪ್ರತಿಯೋರ್ವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
'ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾವು-ನೋವುಗಳು ಸಂಭವಿಸುತ್ತಿವೆ. ಪ್ರತಿಯೋರ್ವ ನಾಗರೀಕರು ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು. ವಾಹನ ಸಂಚಾರದ ವೇಳೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಬಾರದು' ಎಂದು ಮನವಿ ಮಾಡಿದರು.[ಆಮದು ನಿಷೇಧ ಅಡಿಕೆ ಬೆಳೆಗಾರರ ಹಿತ ಕಾಯುವುದೆ?]
'ರಾಫ್ಟಿಂಗ್' ಸಾಹಸದಲ್ಲಿ ಭಾಗಿಯಾಗಿದ್ದ ಜಿಲ್ಲಾ ಜಿಲ್ಲಾ ವಾರ್ತಾಧಿಕಾರಿ ಹೀಮಂತರಾಜು ಮಾತನಾಡಿ, 'ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ರಾಫ್ಟಿಂಗ್ ನಡೆಸಿದ್ದು ನಿಜಕ್ಕೂ ತಮ್ಮ ಜೀವನದಲ್ಲಿ ಮರೆಯಲಾಗದ ರೋಚಕ ಅನುಭವಗಳಲ್ಲೊಂದಾಗಿದೆ. ಈ ರೀತಿಯ ಸಾಹಸ ಕಾರ್ಯಗಳು ನಮ್ಮಲ್ಲಿ ಹೊಸ ರೀತಿಯ ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ಹೇಳಿದರು.
ಏನಿದು 'ರಿವರ್ ರಾಫ್ಟಿಂಗ್' ಸಾಹಸ...?
ಜಲ ಕ್ರೀಡೆಗಳಲ್ಲಿ 'ರೀವರ್ ರಾಫ್ಟಿಂಗ್' ಅತ್ಯಂತ ರೋಚಕಭರಿತವಾದುದಾಗಿದೆ. ರಬ್ಬರ್ ಟ್ಯೂಬ್ ಗಳಿಂದ ತಯಾರಿಸಿದ ಬೋಟ್ ಮಾದರಿಯ ವಸ್ತುವಿಗೆ ರಾಫ್ಟಿಂಗ್ ಎಂದು ಕರೆಯಲಾಗುತ್ತದೆ. ಹಳ್ಳಿಗರು ಬಳಸುವ ತೆಪ್ಪದಲ್ಲಿ ಮಾದರಿಯಲ್ಲಿ ಇದು ಇರುತ್ತದೆ. ಮಳೆಗಾಲದ ವೇಳೆ ಮೈದುಂಬಿ ಹರಿಯುವ ನದಿ, ಹೊಳೆಗಳಲ್ಲಿ ಜಲ ಸಾಹಸಿಗರು ರಾಫ್ಟಿಂಗ್ ನಡೆಸುತ್ತಾರೆ. ನೆನಪಿರಲಿ ಕೊಂಚ ಹೆಚ್ಚುಕಡಿಮೆಯಾದರೂ ಅಪಾಯ ಕಟ್ಟಿಟ್ಟಬುತ್ತಿ!.












Click it and Unblock the Notifications