ಶಿವಮೊಗ್ಗ ಉಪ ಚುನಾವಣೆ : ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ!
Recommended Video

ಶಿವಮೊಗ್ಗ, ಅಕ್ಟೋಬರ್ 29 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಅಷ್ಟು ಸುಲಭವಲ್ಲ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನ.6ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಯಡಿಯೂರಪ್ಪ ಪುತ್ರನ ಗೆಲುವು ಕಷ್ಟವೇ?. ಹೌದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಕಣಕ್ಕಿಳಿದ ಬಳಿಕ ಚುನಾವಣಾ ಚಿತ್ರಣ ಬದಲಾಗಿದೆ.
ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿದ್ದಾರೆ. ಮಾಜಿ ಸಿಎಂ ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ ಜೆಡಿಯುನಿಂದ ಅಭ್ಯರ್ಥಿಯಾಗಿದ್ದಾರೆ.
ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅವರ ನಡುವೆ ಪ್ರಬಲ ಪೈಪೋಟಿ ಇದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಮೊದಲೇ ಬಿಜೆಪಿ ಅಭ್ಯರ್ಥಿ ಘೋಷಣೆ
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದೇ?, ಇಲ್ಲವೇ? ಎಂಬುದು ಇನ್ನೂ ಖಚಿತವಾಗಿರಲಿಲ್ಲ. ಆಗಲೇ ಬಿ.ಎಸ್.ಯಡಿಯೂರಪ್ಪ ಅವರು ಬಿ.ವೈ.ರಾಘವೇಂದ್ರ ಅವರು ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು.
ಯಡಿಯೂರಪ್ಪ ಪ್ರಭಾವ, ಬಿಜೆಪಿ ಶಾಸಕರ ಶಕ್ತಿ, ಕೇಂದ್ರ ಸರ್ಕಾರದ ಸಾಧನೆಯಿಂದಾಗಿ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಗೆದ್ದು ಬರುತ್ತಾರೆ ಎಂಬ ಮಾತುಗಳು ಆರಂಭಗೊಂಡವು. ಆದರೆ, ಮಧು ಬಂಗಾರಪ್ಪ ಅಭ್ಯರ್ಥಿಯಾದ ಮೇಲೆ ಚಿತ್ರಣ ಬದಲಾಗಿದೆ.

ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ
ಶಿವಮೊಗ್ಗ ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಕೊನೆ ಕ್ಷಣದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿತು.
ನಾಮಪತ್ರ ಸಲ್ಲಿಸಲು 2 ದಿನಗಳು ಬಾಕಿ ಇರುವಾಗ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ಘೋಷಣೆ ಮಾಡಿತು. ವಿದೇಶದಲ್ಲಿದ್ದ ಮಧು ಬಂಗಾರಪ್ಪ ಅವರು ತಕ್ಷಣ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದ್ದರು.

ಬದಲಾದ ಚುನಾವಣಾ ಚಿತ್ರಣ
ಮಧು ಬಂಗಾರಪ್ಪ ಅವರು ಅಭ್ಯರ್ಥಿ ಎಂದು ಘೋಷಣೆಯಾದ ತಕ್ಷಣ ಕ್ಷೇತ್ರದ ಚುನಾವಣಾ ಚಿತ್ರಣ ಬದಲಾಯಿತು. ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿತು. ಕಾಂಗ್ರೆಸ್ ಸಹ ಬೆಂಬಲ ಘೋಷಣೆ ಮಾಡಿದ್ದರಿಂದ ಕ್ಷೇತ್ರದ ಚುನಾವಣೆ ಕುತೂಹಲ ಮೂಡಿಸಿತು.
ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಚಾರದಿಂದಾಗಿ ಚಿತ್ರಣ ಬದಲಾಗಿದೆ. ಬಿ.ವೈ.ರಾಘವೇಂದ್ರ ಗೆಲುವು ಸುಲಭ ಎನ್ನುತ್ತಿದ್ದ ನಾಯಕರು ಈಗ ಗೆಲುವಿಗೆ ಸಾಕಷ್ಟು ಶ್ರಮ ಪಡಬೇಕು ಎಂದು ಹೇಳುತ್ತಿದ್ದಾರೆ.

ಬಂಗಾರಪ್ಪ ಪ್ರಭಾವ
ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಈಡಿಗ ಮತಗಳಿವೆ, ಕಳೆದ ಚುನಾವಣೆಯಲ್ಲಿ ಈಡಿಗ ಮತಗಳು ಯಡಿಯೂರಪ್ಪ ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಈ ಉಪ ಚುನಾವಣೆಯಲ್ಲಿಯೂ ಈಡಿಗ ಸಮುದಾಯ ಬೆಂಬಲಕ್ಕೆ ನಿಲ್ಲಬಹುದು ಎಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿತ್ತು.
ಆದರೆ, ಮಧು ಬಂಗಾರಪ್ಪ ಅವರು ಅಭ್ಯರ್ಥಿಯಾದ ಬಳಿಕ ಈಡಿಗ ಸಮುದಾಯ ಬದಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಭಿಮಾನಿಗಳು ಈ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಸಾಧ್ಯತೆ ಕಡಿಮೆ. ಆದ್ದರಿಂದ, ಬಿಜೆಪಿಯ ಹಾದಿ ಕಠಿಣವಾಗಿದೆ.

ಜಾತಿ ಲೆಕ್ಕಾಚಾರ ಹೇಗಿದೆ?
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯ ಬೈಂದೂರು ಸಹ ಸೇರುತ್ತದೆ. ಸುಮಾರು 2.70 ಲಕ್ಷ ಲಿಂಗಾಯತರು, 2.5 ಲಕ್ಷ ದಲಿತರು, 2 ಲಕ್ಷ ಈಡಿಗರು, 1.5 ಲಕ್ಷ ಬ್ರಾಹ್ಮಣ, 1.30 ಲಕ್ಷ ಮುಸ್ಲಿಂ, 60 ಸಾವಿರ ಕುರುಬ ಮತಗಳು ಜಿಲ್ಲೆಯಲ್ಲಿವೆ.
ಬಿಜೆಪಿ ಲಿಂಗಾಯತ, ಬ್ರಾಹ್ಮಣ, ಬಂಟರ ಮತಗಳನ್ನು ನೆಚ್ಚಿಕೊಂಡಿದೆ. ಈಡಿಗರು, ಮುಸ್ಲಿಂಮರು, ಒಕ್ಕಲಿಗರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬೆಂಬಲಿಸಬಹುದು ಎಂಬ ನಿರೀಕ್ಷೆ ಇದೆ. ಯಾವ ಸಮುದಾಯ ಯಾವ ನಾಯಕನಿಗೆ ಬೆಂಬಲ ನೀಡುತ್ತದೆ? ಎನ್ನುವುದು ಗೆಲುವಿನ ಹಾದಿಯನ್ನು ನಿರ್ಧಾರ ಮಾಡಲಿದೆ.

ಬಿಜೆಪಿ ಶಕ್ತಿ ಏನು?
ಬಿಜೆಪಿ ಪಕ್ಷಕ್ಕೆ ವರವಾಗುವ ಅಂಶಗಳು ಸಾಕಷ್ಟಿವೆ. ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಸೊರಬ, ಸಾಗರ, ಶಿಕಾರಿಪುರ ಮತ್ತು ಬೈಂದೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ.
ಯಡಿಯೂರಪ್ಪ ಅವರ ಪ್ರಭಾವ, ಶಾಸಕರು ಬಲ, ನರೇಂದ್ರ ಮೋದಿ ಅವರ ಸಾಧನೆ ಬಿಜೆಪಿಗೆ ಬೆಂಬಲವಾಗಿ ನಿಂತಿದೆ. ಚುನಾವಣೆಯಲ್ಲಿ ಯಾವ ಪ್ರಭಾವ ಕೆಲಸ ಮಾಡಲಿದೆ? ಎಂದು ಕಾದು ನೋಡಬೇಕು.












Click it and Unblock the Notifications