Shivamogga Airport: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕನಸಿನ ವಿಮಾನ ನಿಲ್ದಾಣಕ್ಕೆ ವಿಘ್ನ
ಶಿವಮೊಗ್ಗ ಸೆಪ್ಟೆಂಬರ್ 8: ಅದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಕನಸಿನ ವಿಮಾನ ನಿಲ್ದಾಣ, ಉದ್ಘಾಟನಗೊಂಡು ಎರಡು ವರ್ಷ ಕಳೆದಿದ್ದು ಉತ್ತಮವಾಗಿ ನಡೆಯುತ್ತಿದೆ. ಆದರೆ ಕೆಲವು ಸಮಸ್ಯೆಗಳು ಎದುರಾಗಿದ್ದು ಈಗ ವಿಮಾನ ಹಾರಾಟಕ್ಕೆ ಬ್ರೇಕ್ ಬಿಳುವ ಲಕ್ಷಣಗಳು ಸಹ ಕಾಣ್ತಿವೆ.
ಹೌದು ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿರುವ ಏಕೈಕ ವಿಮಾನ ನಿಲ್ದಾಣವಾಗಿರುವ ಶಿವಮೊಗ್ಗ ನಿಲ್ದಾಣಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಒಂದು ವರ್ಷದ ಅವಧಿಗೆ ಲೈಸೆನ್ಸ್ ಪಡೆದು ವಿಮಾನಗಳ ಹಾರಾಟ ಆರಂಭ ಮಾಡಲಾಗಿತ್ತು. ಆದರೆ ನಿಗದಿತ ಮಾನದಂಡ ಪೂರ್ಣಗೊಳಿಸದ ಹಿನ್ನೆಲೆ ಲೈಸೆನ್ಸ್ ರಿನಿವಲ್ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

ಕಳೆದ ವರ್ಷ 2023ರ ಆಗಸ್ಟ್ ನಲ್ಲಿ ವಾಣಿಜ್ಯ ಚಟುವಟಿಕೆಯನ್ನ ಆರಂಭಿಸಿದ್ದ ಶಿವಮೊಗ್ಗ ವಿಮಾನ ನಿಲ್ದಾಣದ ಪರವಾನಿಗೆಯ ಗಡುವು ಈ ವರ್ಷ ಆಗಸ್ಟ್ 23 ವರೆಗೆ ಮಾತ್ರವಿತ್ತು. ಅದನ್ನು ಒಂದು ತಿಂಗಳ ಅವಧಿಗೆ ಡಿಜಿಸಿಎ ವಿಸ್ತರಿಸಿದೆ. ಸೆ.23ಕ್ಕೆ ಲೈಸೆನ್ಸ್ ಅವಧಿ ಮುಗಿಯಲಿದ್ದು ಅಷ್ಟರಲ್ಲಿ ನಿಗದಿತ ಮಾನದಂಡ ಪೂರೈಸಿದ್ರೆ ರಿನಿವಲ್ ಆಗುವ ಸಾಧ್ಯತೆ ಇದೆ.
ಇದರ ನಡುವೆ ಲೈಸೆನ್ಸ್ ನವೀಕರಣಕ್ಕೆ ಕೆಎಸ್ಐಐಡಿಸಿ ಪ್ರಯತ್ನ ನಡೆಸಿದೆ. ಆದರೆ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ ಸುರಕ್ಷತಾ ಪ್ರದೇಶಕ್ಕೆ ಸಂಬಂಧಿಸಿದಂತೆ ನಿಗದಿತ ಮಾನದಂಡವನ್ನು ಅನುಸರಿಸಿಲ್ಲ ಹಾಗೂ ಫೈರ್ ಸೇಫ್ಟಿ ವಿಚಾರದಲ್ಲಿ ಅಗತ್ಯ ಸಿಬ್ಬಂದಿ ಹೊಂದಿಲ್ಲ. ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನ ಇದುವರೆಗೂ ಹೊಂದಿಲ್ಲ.
ಕ್ವಿಕ್ ರಿಯಾಕ್ಷನ್ ಟೀಂ ಇಲ್ಲ, ಭದ್ರತಾ ಸಿಬ್ಬಂದಿ ಕೊರತೆಯಿದೆ ಎಂಬ ಕಾರಣಗಳನ್ನ ನೀಡಿ ಕೇವಲ ಒಂದು ತಿಂಗಳ ಮಟ್ಟಿಗೆ ಮಾತ್ರ ಪರವಾನಿಗೆಯನ್ನ ವಿಸ್ತರಿಸಿದೆ. ಈ ಮಧ್ಯೆ ಸಂಸದ ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ನಡುವೆ ವಿಮಾನ ನಿಲ್ದಾಣ ವಿಚಾರದಲ್ಲಿ ಟಾಕ್ ವಾರ್ ಸಹ ಶುರುವಾಗಿದೆ.
ಇನ್ನೂ ಈ ವಿಮಾನ ನಿಲ್ದಾಣಕ್ಕೆ 2023ರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಅದಾದ ಆರು ತಿಂಗಳ ಬಳಿಕ ಶಿವಮೊಗ್ಗ - ಬೆಂಗಳೂರು ನಡುವೆ ಕಾರ್ಯಾಚರಣೆ ಆರಂಭವಾಗಿತ್ತು. ಕಡಿಮೆ ಅವಧಿಯಲ್ಲಿ ಲೈಸೆನ್ಸ್ ಪಡೆದ ಹೆಗ್ಗಳಿಕೆ ಸಹ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇತ್ತು. ಆದರೆ ಮಾನದಂಡಗಳನ್ನು ಪೂರ್ಣಗೊಳಿಸಲು ವಿಫಲವಾಗಿದೆ.
ಈಗಾಗಲೇ ಮಂಜಿನ ವಾತಾವರಣ ಇದ್ದಾಗ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆ ಇದ್ದು ಹಲವು ವಿಮಾನಗಳು ವಾಪಸ್ ಹೋಗಿವೆ. ಕೆಲ ವಿಮಾನಗಳು ರದ್ದಾಗಿವೆ. ನೈಟ್ ಲ್ಯಾಂಡಿಂಗ್ ಕಾಮಗಾರಿ ಅಗತ್ಯತೆ ಇದ್ದರೂ ಅದು ನಿಗದಿತ ಅವಧಿಯಲ್ಲಿ ಮುಗಿಯುತ್ತಿಲ್ಲ. ಒಟ್ಟಾರೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಸಮಸ್ಯೆಗಳನ್ನು ರಾಜ್ಯ ಸರಕಾರ ತಕ್ಷಣ ಬಗೆಹರಿಸಬೇಕಿದೆ.
ಮೂರು ವಿಚಾರಗಳನ್ನು ಡಿಜಿಸಿಎ ಪ್ರಸ್ತಾಪಿಸಿದೆ. ಸಿವಿಲ್ ಕಾಮಗಾರಿ ಸಂಬಂಧ ಬಾಕಿ ಇದ್ದ ಕೆಲಸಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಫೈರ್ ಸೇಫ್ಟಿ ಸಿಬ್ಬಂದಿ ಮತ್ತೆ ವಾಪಾಸ್ ಕರೆಸಲಾಗಿದೆ. ಫೈರ್ ಸೇಫ್ಟಿ ಸಂಬಂಧಿಸಿದ ಕೆಲ ಸಾಮಗ್ರಿಗಳ ಖರೀದಿ ಬಾಕಿ ಇತ್ತು. ಅದನ್ನು ಸಹ ಪೂರೈಸಲಾಗುತ್ತಿದೆ. ಲೈಸೆನ್ಸ್ ರಿನೀವಲ್ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಕೆಎಸ್ಐಐಡಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಿನಿವಲ್ ಸಂಬಂಧಿಸಿದಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಹ ಡಿಜಿಸಿಎ ಜತೆ ಮಾತುಕತೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮಯ ಕೊಟ್ಟ ಹಿನ್ನೆಲೆ ತರಾತುರಿಯಲ್ಲಿ ಉದ್ಘಾಟನೆ ಫಿಕ್ಸ್ ಆಗಿತ್ತು. ಆಗ ಒಂದಷ್ಟು ಸಿವಿಲ್ ಕಾಮಗಾರಿಗಳು ಬಾಕಿ ಇದ್ದವು. ಉದ್ಘಾಟನೆ ನಂತರ ಅದು ಪೂರ್ಣಗೊಳ್ಳಲಿಲ್ಲ.
ಗುತ್ತಿಗೆದಾರನಿಗೆ 160 ಕೋಟಿ ರೂ. ಕೊಡುವುದು ಬಾಕಿ ಇದೆ. ಅವರು ಸಹ ಬಾಕಿ ಕೆಲಸ ಮುಗಿಸಿಲ್ಲ. ವಿಮಾನ ನಿಲ್ದಾಣ ನಿರ್ವಹಣೆ ರಾಜ್ಯ ಸರಕಾರಕ್ಕೆ ಮೊದಲ ಅನುಭವವಾಗಿದ್ದು ನುರಿತ ಸಿಬ್ಬಂದಿ, ಅಧಿಕಾರಿಗಳು ಇಲ್ಲ, ಇದು ಸಹ ತೊಡಕಾಗಿದೆ.
ಒಟ್ಟಾರೆ ಮಲೆನಾಡಿನ ಹೆಮ್ಮೆಯ ವಿಮಾನ ನಿಲ್ದಾಣಕ್ಕೆ ವಿಘ್ನಗಳು ಎದುರಾಗಿದ್ದು ಸರ್ಕಾರ ಕೂಡಲೇ ಗಮನ ಹರಿಸಿ ಕೆಲವೊಂದು ಇರುವ ಸಮಸ್ಯೆಗಳನ್ನು ಸೆ.23 ರ ಒಳಗೆ ಬಗೆಹರಿಸಿ ಲೈಸನ್ಸ್ ರಿನಿವಲ್ ಮಾಡಿಸಬೇಕಿದೆ. ಇಲ್ಲವಾದರೆ ವಿಮಾನ ಹಾರಾಟ ಸ್ಥಗೀತಗೊಳ್ಳಲಿದ್ದು ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗಲಿದೆ.












Click it and Unblock the Notifications