ಸಾಗರ ಶಾಸಕ ಹರತಾಳು ಹಾಲಪ್ಪಗೆ ಕೋವಿಡ್ ಸೋಂಕು
ಶಿವಮೊಗ್ಗ, ಆಗಸ್ಟ್ 04 : ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪಗೆ ಕೋವಿಡ್ - 19 ಸೋಂಕು ತಗುಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಜಿಲ್ಲೆಯ ಮೂವರು ಜನಪ್ರತಿನಿಧಿಗಳಿಗೆ ಈಗಾಗಲೇ ಕೊರೊನಾ ವೈರಸ್ ಸೋಂಕು ತಗುಲಿದೆ.
ಮಂಗಳವಾರ ಶಾಸಕ ಹರತಾಳು ಹಾಲಪ್ಪ ಫೇಸ್ ಬುಕ್ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿದ್ದ ಶಾಸಕರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. "ಇತ್ತೀಚೆಗೆ ನನ್ನನ್ನು ಸಂಪರ್ಕಿಸಿದವರಿಗೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಗಾಗಬೇಕಾಗಿ ವಿನಂತಿಸುತ್ತೇನೆ" ಎಂದು ಮನವಿ ಮಾಡಿದ್ದಾರೆ.
ಶಾಸಕ ಹರತಾಳು ಹಾಲಪ್ಪ ಮಾತ್ರವಲ್ಲ. ಶಾಸಕರ ಪತ್ನಿ, ಕಾರು ಚಾಲಕ ಮತ್ತು ಒಬ್ಬರು ಭದ್ರತಾ ಸಿಬ್ಬಂದಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಹರತಾಳು ಹಾಲಪ್ಪ ಅವರನ್ನು ಎಂಎಸ್ಐಎಲ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಜುಲೈ 30ರಂದು ಅವರು ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕಾರ ಮಾಡಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯಲ್ಲಿ ಒಟ್ಟು ಸೋಕಿತರ ಸಂಖ್ಯೆ 2096. ಸೋಮವಾರ ಜಿಲ್ಲೆಯಲ್ಲಿ 155 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.

ಹರತಾಳು ಹಾಲಪ್ಪ ಫೇಸ್ ಬುಕ್ ಪೋಸ್ಟ್
"ನಾನು ಕೋವಿಡ್ - 19 ಪರೀಕ್ಷೆಗೆ ಒಳಗಾಗಿದ್ದು ಇದೀಗ ಬಂದ ವರದಿಯ ಪ್ರಕಾರ ನನಗೆ, ನನ್ನ ಪತ್ನಿ, ಕಾರು ಚಾಲಕ ಹಾಗೂ ಓರ್ವ ಸಿಬ್ಬಂದಿಗೆ ಪಾಸಿಟಿವ್ ಎಂದು ದೃಢಪಟ್ಟಿದೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ" ಎಂದು ಶಾಸಕ ಹರತಾಳು ಹಾಲಪ್ಪ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.

ಅಧಿಕಾರ ಸ್ವೀಕಾರ ಮಾಡಿದ್ದರು
ಹರತಾಳು ಹಾಲಪ್ಪ ಅವರನ್ನು ಎಂಎಸ್ಐಎಲ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಜುಲೈ 30ರಂದು ಅವರು ಬೆಂಗಳೂರಿನ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕಾರ ಮಾಡಿದ್ದರು. ಹಲವು ಸಚಿವರು, ಶಾಸಕರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಸೋಮಣ್ಣ, ಶೆಟ್ಟರ್
ಹರತಾಳು ಹಾಲಪ್ಪ ಎಂಎಸ್ಐಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವಾಗ ಜಗದೀಶ್ ಶೆಟ್ಟರ್ ಜೊತೆಗಿದ್ದರು. ಸಚಿವರಾದ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ರೇಣುಕಾಚಾರ್ಯ, ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವರು ಕಚೇರಿಗೆ ಭೇಟಿ ನೀಡಿದ ಹಾಲಪ್ಪ ಅಭಿನಂದಿಸಿದ್ದರು.

ಜಿಲ್ಲೆಯ ಮೂವರಿಗೆ ಸೋಂಕು
ಶಿವಮೊಗ್ಗ ಜಿಲ್ಲೆಯಲ್ಲಿ ಮೂವರು ಜನಪ್ರತಿನಿಧಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಶಿಕಾರಿಪುರ ಶಾಸಕ, ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಈಗ ಹರತಾಳು ಹಾಲಪ್ಪಗೆ ಸೋಂಕು ತಗುಲಿದೆ.












Click it and Unblock the Notifications