ಅತ್ತಿಗೆ ಗೀತಾ ಪರ ಪ್ರಚಾರಕ್ಕೆ ಬರೋಲ್ಲ: ರಾಘು, ಅಪ್ಪು
ಶಿವಮೊಗ್ಗ, ಮಾರ್ಚ್24: ಶಿವಮೊಗ್ಗದ ಲೋಕಸಭಾ ಚುನಾವಣೆ ಕಣದಿಂದ ಜೆಡಿಎಸ್ ಪರ ಕಣಕ್ಕಿಳಿದಿರುವ ಡಾ ರಾಜ್ ಅವರ ಸೊಸೆ ಗೀತಾ ಶಿವರಾಜ್ ಕುಮಾರ್ ಅವರ ಪರ ಡಾ ರಾಜ್ ಅವರ ಇಬ್ಬರು ಕಿರಿಯ ಪುತ್ರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಡಾ ರಾಜ್ ಕುಟುಂಬದಿಂದ ಗೀತಾರ ಪತಿ, ಖ್ಯಾತ ನಟ ಶಿವರಾಜ್ ಕುಮಾರ್ ಮಾತ್ರ ಪ್ರಚಾರ ನಡೆಸಲಿದ್ದಾರೆ.
ನಟ ಶಿವರಾಜ್ ಕುಮಾರ್ ಅವರೇ ಈ ವಿಷಯ ತಿಳಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ತಮ್ಮ ಪತ್ನಿ ಗೀತಾ ಅವರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುಟುಂಬದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗೀತಾ ನಾಮಪತ್ರ ಸಲ್ಲಿಕೆ ವೇಳೆ ಅವರ ಕಿರಿಯ ಸೋದರ ಮಧು ಬಂಗಾರಪ್ಪ ಹಾಗೂ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ಸಾಥ್ ನೀಡಿದರು. (ಡಾ ರಾಜ್ ಆಶಯಕ್ಕೆ ವಿರುದ್ಧವಾಗಿ ಗೀತಾ ಜೆಡಿಎಸ್ ಅಭ್ಯರ್ಥಿ)
ರಾಜ್ ಕುಟಂಬದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಹೆಚ್ಚಾಗಿ ನಿರ್ಣಯ ತೆಗೆದುಕೊಳ್ಳುವುದು ರಾಘವೇಂದ್ರ ರಾಜ್ ಕುಮಾರ್. ಅದನ್ನು ಚಾಚೂತಪ್ಪದೆ ಅಣ್ಣ ಮತ್ತು ತಮ್ಮ ಪರಿಪಾಲಿಸುತ್ತಾರೆ. ಆದರೆ ಅತ್ತಿಗೆ ಚುನಾವಣೆಗೆ ನಿಂತಿರುವಾಗ ಇದೀಗ ತಮ್ಮಂದಿರಿಬ್ಬರೂ ಪ್ರಚಾರಕ್ಕೆ ಬರೋಲ್ಲ ಎಂದಿರುವುದು ಆಶ್ಚರ್ಯಕರವಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ರಾಘಣ್ಣಗೆ ಆರೋಗ್ಯ ಸರಿಯಿಲ್ಲ - ಶಿವರಾಜ್ ಕುಮಾರ್
'ರಾಘಣ್ಣಗೆ ಆರೋಗ್ಯ ಸರಿಯಿಲ್ಲ. ಅವರು ಚಿಕಿತ್ಸೆಯಲ್ಲಿದ್ದಾರೆ. ಹಾಗಾಗಿ ಅವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದಿಲ್ಲ' ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಅಪ್ಪು ಶೂಟಿಂಗ್ ನಲ್ಲಿ ಬಿಜಿ - ಶಿವಣ್ಣ
ಇನ್ನು ಅಪ್ಪು, ಶೂಟಿಂಗ್ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಹಾಗಾಗಿ ಪುನೀತ್ ರಾಜ್ ಕುಮಾರ್ ಸಹ ತಮ್ಮ ಪತ್ನಿ ಗೀತಾ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಶಿವಣ್ಣ ತಿಳಿಸಿದ್ದಾರೆ.

ಯಾರನ್ನೂ ಬಲವಂತ ಮಾಡುವುದಿಲ್ಲ - ಶಿವರಾಜ್ ಕುಮಾರ್
ಆದರೆ ಈ ಸ್ಪಷ್ಪನೆಯ ನಡುವೆಯೂ ಶಿವರಾಜ್ ಕುಮಾರ್ ಅವರು 'ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಯಾರನ್ನೂ ಬಲವಂತ ಮಾಡುವುದಿಲ್ಲ. ಅದು ಅವರವರ ಇಷ್ಟಕ್ಕೆ/ವಿವೇಚನೆಗೆ ಬಿಟ್ಟ ವಿಷಯ' ಎಂದು ನಿರ್ಲಿಪ್ತರಾಗಿ ಹೇಳಿದರು. ಶಿವಣ್ಣ ಅವರ ಈ ಹೇಳಿಕೆಯು ಅನೇಕ ಅನುಮಾನ/ ಗುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ. ರಾಜ್ ಪುತ್ರರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಕಿರಿಯ ಸೋದರರ ಅಸಮಾಧಾನಕ್ಕೆ ಕಾರಣವಾಗಿದೆಯಾ?
ಸ್ವತಃ ಡಾ. ರಾಜ್ ಅವರು ತಮ್ಮ ಜೀವನದುದ್ದಕ್ಕೂ ರಾಜಕೀಯದಿಂದ ದೂರವುಳಿದವರು. ಅವರ ಮಕ್ಕಳಾಗಿ ಶಿವಣ್ಣ, ರಾಘು ಮತ್ತು ಅಪ್ಪು ಸಹ ಇದುವರೆಗೂ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಆದರೆ ಇದೀಗ ಶಿವಣ್ಣ ಅವರು ತಮ್ಮ ಪತ್ನಿ ಗೀತಾರ ಮುಖಾಂತರ ರಾಜಕೀಯಕ್ಕೆ ಪರೋಕ್ಷ ಎಂಟ್ರಿ ಕೊಟ್ಟಿದ್ದಾರೆ. ಇದು ಕಿರಿಯ ಸೋದರರ ಅಸಮಾಧಾನಕ್ಕೆ ಕಾರಣವಾಗಿದೆಯಾ? ಅದನ್ನು ಬಹಿರಂಗವಾಗಿ ಸಾಬೀತುಪಡಿಸಲು ಪ್ರಚಾರದಿಂದ ದೂರವಾಗುತ್ತಿದ್ದಾರಾ? ತನ್ಮೂಲಕ ಡಾ. ರಾಜ್ ಕುಟುಂಬ ಇಂದಿಗೂ ರಾಜಕೀಯದಿಂದ ದೂರ ಎಂಬುದನ್ನು ರುಜುವಾತು ಪಡಿಸಲು ಯತ್ನಿಸುತ್ತಿದ್ದಾರಾ?












Click it and Unblock the Notifications