ಮಲೆನಾಡಿಗೆ ಐಷಾರಾಮಿ ಬಸ್ಗಳನ್ನು ಪರಿಚಯಿಸಿದ ಉದ್ಯಮಿ ಸಾವಿಗೆ ಮರುಗಿದ ಜನ
ಶಿವಮೊಗ್ಗ, ಜನವರಿ 25: ಬಸ್ ಕ್ಲೀನರ್ ಆಗಿದ್ದ ಸಾಮಾನ್ಯ ವ್ಯಕ್ತಿ, ಮಲೆನಾಡು ಭಾಗದ ಸಾರಿಗೆ ಉದ್ಯಮವನ್ನು 'ಪ್ರಕಾಶ'ಮಾನಗೊಳಿಸಿದ್ದರು. ನೂರಾರು ಮಂದಿಗೆ ನೌಕರಿ ಕೊಟ್ಟು, ಹಲವರ ಬದುಕಿಗೆ ಆಸರೆಯಾಗಿದ್ದಾರೆ. ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿದ್ದ ವ್ಯಕ್ತಿಯ ಬದುಕು ದುರಂತ ಅಂತ್ಯ ಕಂಡಿದ್ದು, ಇದಕ್ಕೆ ಇಡೀ ಮಲೆನಾಡು ಮರುಗಿದೆ.
ಶಿವಮೊಗ್ಗ ಜಿಲ್ಲೆ ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಮೃತಪಟ್ಟಿದ್ದಾರೆ. ಕಳೆದ ಶುಕ್ರವಾರ ಮನೆಯಿಂದ ಹೊರಟವರು ಹಿಂತಿರುಗಿರಲಿಲ್ಲ. ಇದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಸೋಮವಾರ ಬೆಳಗ್ಗೆ ಹೊಸನಗರ ತಾಲೂಕು ಪಟಗುಪ್ಪ ಸೇತುವೆ ಬಳಿ ಶರಾವತಿ ಹಿನ್ನೀರಿನಲ್ಲಿ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿದೆ.

ಕಾರು, ಮೊಬೈಲ್, ಚಪ್ಪಲಿಗಳು
ಜನವರಿ 22ರಂದು ಬೆಳಗ್ಗೆ ಪಟಗುಪ್ಪ ಸೇತುವೆ ಮೇಲೆ ಕಾರು ನಿಂತಿತ್ತು. ಪರಿಶೀಲನೆ ಬಳಿಕ ಅದು ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರದ್ದು ಎಂದು ಗೊತ್ತಾಗಿದೆ. ಕಾರಿನಲ್ಲೇ ಮೊಬೈಲ್ ಫೋನ್ ಇತ್ತು. ಸ್ವಲ್ಪ ದೂರದಲ್ಲಿ ಅವರ ಚಪ್ಪಲಿಗಳು ಸಿಕ್ಕಿದ್ದವು. ಮಾಹಿತಿ ತಿಳಿಯುತ್ತಿದ್ದಂತೆ ಹೊಸನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯು ಪ್ರಕಾಶ್ ಅವರ ಶೋಧ ಕಾರ್ಯ ಆರಂಭಿಸಿದರು. ಕುಟುಂಬದವರು, ಆಪ್ತರು, ಟ್ರಾವೆಲ್ಸ್ ಸಂಸ್ಥೆಯ ನೌಕರರು ಪಟಗುಪ್ಪ ಸೇತುವೆ ಬಳಿ ತೆರಳಿದರು. ಎರಡು ದಿನ ಶೋಧ ಕಾರ್ಯ ನಡೆಸಿದ ಬಳಿಕ ಮೃತದೇಹ ಪತ್ತೆಯಾಗಿದೆ.

ಕ್ಲೀನರ್ ಆಗಿದ್ದವರು ಮಾಲೀಕರಾದರು
ಪ್ರಕಾಶ್ ಅವರು ಮೂಲತಃ ಹಾಸನ ಜಿಲ್ಲೆಯ ಕಾಣೆಗೆರೆ ಗ್ರಾಮದವರು. ಉದ್ಯೋಗ ಅರಸಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿಗೆ ಬಂದರು. ವಾಹನ ಚಾಲನೆ ಮಾಡಲು ಗೊತ್ತಿದ್ದರಿಂದ ಶಾರದಾ ಡ್ರೈವಿಂಗ್ ಸ್ಕೂಲ್ನಲ್ಲಿ ವಾಹನ ಚಾಲಕರಾಗಿದ್ದರು. ಸ್ವಲ್ಪ ಸಮಯದ ಬಳಿಕ ಗೀತಾ ಬಸ್ನ ಕ್ಲೀನರ್ ಆದರು. ಬಳಿಕ ಕಂಡಕ್ಟರ್, ಡ್ರೈವರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. 1997ರಲ್ಲಿ ಪ್ರಕಾಶ್ ಅವರು ತಮ್ಮ ಸಹೋದರ ಗಂಗರಾಜು ಅವರೊಂದಿಗೆ ಪ್ರಕಾಶ್ ಟ್ರಾವೆಲ್ಸ್ ಆರಂಭಿಸಿದರು. ಒಂದು ಬಸ್ ಖರೀದಿಸಿ ಸಾಗರ- ಸೊರಬ ನಡುವೆ ಸೇವೆ ಆರಂಭಿಸಿದರು.

ಐಷಾರಾಮಿ ಬಸ್ಗಳ ಪರಿಚಯ
ಮಲೆನಾಡಿಗೆ ಐಷಾರಾಮಿ ಬಸ್ಸುಗಳನ್ನು ತಂದ ಮೊದಲಿಗರಲ್ಲಿ ಪ್ರಕಾಶ್ ಅವರು ಒಬ್ಬರು. ಭದ್ರಾವತಿ, ಶಿವಮೊಗ್ಗ ತಾಲೂಕುಗಳು ಹೊರತುಪಡಿಸಿ, ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಬೆಂಗಳೂರಿಗೆ ಡೈರೆಕ್ಟ್ ಬಸ್ ಸೇವೆ ಆರಂಭಿಸಿದರು. ಸ್ಲೀಪರ್, ಸೆಮಿ ಸ್ಲೀಪರ್ಗಳು ನಿತ್ಯ ಓಡಾಟ ಆರಂಭಿಸಿದವು. ಜೊತೆಗೆ ಆರು ಸೆಮಿ ಸ್ಲೀಪರ್ ಟೂರಿಸ್ಟ್ ಬಸ್ಗಳು ಪ್ರವಾಸಿಗರನ್ನು ಸೆಳೆದವು. ಸಾಗರ, ಹೊಸನಗರ, ಸೊರಬ ಭಾಗದಲ್ಲಿ ಮದುವೆ ಸಮಾರಂಭಕ್ಕಂತೂ ಈ ಬಸ್ಗಳಿಗೆ ಜನ ಡಿಮಾಂಡ್ ಮಾಡುತ್ತಿದ್ದರು.

ನೂರಾರು ಉದ್ಯೋಗಿಗಳು
ಪ್ರಕಾಶ್ ಟ್ರಾವೆಲ್ಸ್ ಹೆಸರಿನಲ್ಲಿ 50ಕ್ಕೂ ಹೆಚ್ಚು ಬಸ್ಸುಗಳಿವೆ. ಪ್ರತ್ಯಕ್ಷ, ಪರೋಕ್ಷವಾಗಿ ಸುಮಾರು 500 ಮಂದಿ ಪ್ರಕಾಶ್ ಟ್ರಾವೆಲ್ಸ್ನಿಂದ ಜೀವನ ಕಟ್ಟಿಕೊಂಡಿದ್ದಾರೆ. ದೊಡ್ಡ ಸಂಖ್ಯೆ ಸಿಬ್ಬಂದಿ ಇದ್ದರೂ, ಪ್ರಕಾಶ್ ಅವರು ತಾಳ್ಮೆಯಿಂದಲೇ ವ್ಯವಹರಿಸುತ್ತಿದ್ದರು. ಎಂತಹ ಸಂದರ್ಭದಲ್ಲೂ ಸಿಬ್ಬಂದಿ ಜೊತೆ ನಿಲ್ಲುತ್ತಿದ್ದರು. ಇದೇ ಕಾರಣಕ್ಕೆ ಅನೇಕ ಸಿಬ್ಬಂದಿ ಹಲವು ವರ್ಷದಿಂದ ಪ್ರಕಾಶ್ ಟ್ರಾವೆಲ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೊರೊನಾದಿಂದ ಉದ್ಯಮಕ್ಕೆ ಪೆಟ್ಟು
ಕೊರೊನಾ ಮತ್ತು ಲಾಕ್ಡೌನ್ನಿಂದಾಗಿ ಸಾರಿಗೆ ಉದ್ಯಮ ಸಂಕಷ್ಟಕ್ಕೀಡಾಯಿತು. ಪ್ರಕಾಶ್ ಟ್ರಾವೆಲ್ಸ್ಗೂ ದೊಡ್ಡ ಪೆಟ್ಟು ಬಿತ್ತು. ಹಾಗಿದ್ದೂ ಲಾಕ್ಡೌನ್ ಸಂದರ್ಭದಲ್ಲಿ ಪ್ರಕಾಶ್ ಸಿಬ್ಬಂದಿಗೆ ನೆರವಾಗಿದ್ದರು. ಲಾಕ್ಡೌನ್ ತೆರವಾದ ಬಳಿಕ ಸರ್ಕಾರದ ನಿರ್ಬಂಧ, ಕೋವಿಡ್ ಮಾರ್ಗಸೂಚಿಗಳ ಪರಿಣಾಮ ಪ್ರಕಾಶ್ ಟ್ರಾವೆಲ್ಸ್ ಸಂಪೂರ್ಣ ನಷ್ಟದ ಹಾದಿ ಹಿಡಿಯಿತು. ಬಸ್ಸುಗಳ ನಿರ್ವಹಣೆ, ಸಿಬ್ಬಂದಿ ಸಂಬಳ, ಪಡೆದ ಸಾಲ ತೀರಿಸುವ ಒತ್ತಡ ಎದುರಾಯಿತು.
ಆರ್ಥಿಕ ಸಂಕಷ್ಟ ನಿವಾರಿಸಿಕೊಳ್ಳುವ ಸಲುವಾಗಿ ಇತ್ತೀಚೆಗಷ್ಟೆ ಪ್ರಕಾಶ್ ಅವರು ಎರಡು ರೂಟ್ಗಳನ್ನು ಮಾರಾಟ ಮಾಡಿದ್ದರು. ಇದರಿಂದ ತಮ್ಮ ಸಮಸ್ಯೆಗಳು ಬಗೆಹರಿಯಲಿದೆ ಎಂದು ಪ್ರಕಾಶ್ ಭಾವಿಸಿದ್ದರು.

ಸಾವಿನ ಕುರಿತು ಅನುಮಾನ
ಪ್ರಕಾಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲರಾಗಿರಲಿಲ್ಲ. ಅವರ ಹತ್ಯೆಯಾಗಿದೆ ಎಂದು ಕುಟುಂಬದವರು, ಆಪ್ತರು, ಸಂಸ್ಥೆಯ ನೌಕರರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಕೊರೊನಾದಿಂದ ಸಾರಿಗೆ ಉದ್ಯಮ ತೀವ್ರ ಸಂಕಷ್ಟಕ್ಕೀಡಾಗಿದೆ. ಟ್ರಾವೆಲ್ಸ್ ಉದ್ಯಮ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರಿಂದ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯು ಇದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Recommended Video
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ












Click it and Unblock the Notifications