Get Updates
Get notified of breaking news, exclusive insights, and must-see stories!

ಶಿವಮೊಗ್ಗ; ಎಲೆಕ್ಟ್ರಿಕ್ ಬಸ್ ಹತ್ತದ ಜನ, 8 ಬಸ್ ವಾಪಸ್!

ಶಿವಮೊಗ್ಗ, ಸೆಪ್ಟೆಂಬರ್ 27; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ಇವಿ ಪವರ್ ಪ್ಲಸ್ ಹೆಸರಿನ ವಿವಿಧ ಬಸ್‌ಗಳು ಬೆಂಗಳೂರು ನಗರವನ್ನು ವಿವಿಧ ಜಿಲ್ಲಾ ಕೇಂದ್ರಗಳಿಂದ ಸಂಪರ್ಕಿಸುತ್ತಿವೆ. ಈ ಐಷಾರಾಮಿ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ.

ಕೆಎಸ್‌ಆರ್‌ಟಿಸಿ ಶಿವಮೊಗ್ಗ-ಬೆಂಗಳೂರು ನಡುವೆ ಸಹ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಿತ್ತು. ಶಿವಮೊಗ್ಗ ವಿಭಾಗದಕ್ಕೆ 10 ಬಸ್‌ಗಳನ್ನು ನೀಡಲಾಗಿತ್ತು. ಈಗ ಈ ಪೈಕಿ 8 ಬಸ್‌ಗಳನ್ನು ಮೈಸೂರು ವಿಭಾಗಕ್ಕೆ ಕಳಿಸಲಾಗಿದೆ.

Poor Response For KSRTC Shivamogga Bengaluru Electric Bus Service

ವಿವಿಧ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಶಿವಮೊಗ್ಗ-ಬೆಂಗಳೂರು ಮಾರ್ಗದ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿದೆ. ಆದ್ದರಿಂದ ಹೆಚ್ಚು ಬೇಡಿಕೆ ಇರುವ ಮೈಸೂರು ವಿಭಾಗಕ್ಕೆ ಬಸ್‌ಗಳನ್ನು ಕಳಿಸಲಾಗಿದೆ.

ಪ್ರಯಾಣಿಕರ ಕೊರತೆ; shivamoggalive.com ಈ ಕುರಿತು ವರದಿ ಮಾಡಿದೆ. ಕೆಎಸ್ಆರ್‌ಟಿಸಿಯ ಶಿವಮೊಗ್ಗ ವಿಭಾಗದ ಜಿಲ್ಲಾ ಅಧಿಕಾರಿ ವಿಜಯ್ ಕುಮಾರ್ ಅವರ ಹೇಳಿಕೆಯನ್ನು ಪಡೆಯಲಾಗಿದ್ದು, "ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ 8 ಬಸ್‌ಗಳನ್ನು ಮೈಸೂರಿಗೆ ಕಳಿಸಿದ್ದೇವೆ. ಬೆಂಗಳೂರು-ಮೈಸೂರು ಮಾರ್ಗದಲ್ಲಿ ಈ ಬಸ್‌ಗಳು ಸಂಚಾರ ನಡೆಸುತ್ತಿವೆ" ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗ ವಿಭಾಗಕ್ಕೆ 10 ಬಸ್‌ಗಳು ಮಂಜೂರಾಗಿದ್ದವು. ಮೊದಲ ಹಂತದಲ್ಲಿ ಎರಡು ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಯಿತು. ಬಳಿಕ ಹಂತ ಹಂತವಾಗಿ 8 ಬಸ್‌ಗಳ ಸಂಚಾರ ಆರಂಭಿಸಲಾಯಿತು. ಆದರೆ ಪ್ರಯಾಣಿಕರ ಕೊರತೆಯ ಕಾರಣ ಬೇರೆ ವಿಭಾಗದಲ್ಲಿ ಬೇಡಿಕೆ ಇರುವ ಮಾರ್ಗಕ್ಕೆ ಬಸ್‌ಗಳನ್ನು ಕಳಿಸಲಾಗಿದೆ.

ಬೆಂಗಳೂರು-ಶಿವಮೊಗ್ಗ ನಡುವೆ ಸದ್ಯ ಕೆಎಸ್ಆರ್‌ಟಿಸಿಯ ಎರಡು ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ನಡೆಸುತ್ತಿವೆ. ಶಿವಮೊಗ್ಗದಿಂದ ಪ್ರತಿದಿನ ಬೆಳಗ್ಗೆ 11.03ಕ್ಕೆ ಮತ್ತು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ಬಸ್‌ ಹೊರಡಲಿದೆ. ಬೆಂಗಳೂರಿನಿಂದ ರಾತ್ರಿ 11 ಮತ್ತು 11.40ಕ್ಕೆ ಬಸ್‌ಗಳು ಶಿವಮೊಗ್ಗಕ್ಕೆ ಹೊರಡಲಿವೆ. ಈ ಬಸ್‌ಗಳ ಪ್ರಯಾಣ ದರ 550 ರೂ.ಗಳು.

ಕೆಎಸ್ಆರ್‌ಟಿಸಿಯ ಇವಿ ಪವರ್ ಪ್ಲಸ್ ಹೆಸರಿನ ಎಲೆಕ್ಟ್ರಿಕ್ ಬಸ್ ಐಷಾರಾಮಿ ಸೌಲಭ್ಯವನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾದ ಬಸ್ ಆಸನ ವ್ಯವಸ್ಥೆಯೂ ಉತ್ತಮವಾಗಿದೆ. ಅಲ್ಲದೇ ಶಬ್ದವಿಲ್ಲದೇ ಸಂಚಾರ ನಡೆಸುತ್ತದೆ, ಹೊರಗಿನ ಹೆಚ್ಚಿನ ಶಬ್ದ ಕೇಳದಂತೆ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಐರಾವತ ಮತ್ತು ಇವಿ ಪವರ್ ಪ್ಲಸ್ ಎಲೆಕ್ಟ್ರಿಕ್‌ ಬಸ್‌ಗಳ ದರಗಳು ಒಂದೇ ಆಗಿವೆ. ಆದ್ದರಿಂದ ಬಹುತೇಕ ಜನರು ಎಲೆಕ್ಟ್ರಿಕ್ ಬಸ್‌ ಬಿಟ್ಟು ಐರಾವತ ಬಸ್‌ಗಳಲ್ಲಿಯೇ ಸಂಚಾರ ನಡೆಸುತ್ತಿರುವುದು ಪ್ರಯಾಣಿಕರ ಕೊರತೆಗೆ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.

ಶಿವಮೊಗ್ಗ-ತುಮಕೂರು ನಡುವೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಬಸ್‌ಗಳು ನಿಧಾನವಾಗಿ ಸಂಚಾರ ನಡೆಸುತ್ತಿವೆ. ಬೆಂಗಳೂರು-ಶಿವಮೊಗ್ಗ ನಡುವೆ 5.30 ಅಥವ 6 ಗಂಟೆಯಲ್ಲಿ ಸಂಚಾರ ನಡೆಸಬೇಕಾದ ಬಸ್‌ಗಳು 8 ಗಂಟೆ ತೆಗೆದುಕೊಳ್ಳುತ್ತಿವೆ. ಆದ್ದರಿಂದಲೂ ಜನರು ಈ ಬಸ್ ಹತ್ತುತ್ತಿಲ್ಲ ಎಂದು ವಿಶ್ಲೇಷಿಸಲಾಗಿದೆ.

ಕೆಎಸ್ಆರ್‌ಟಿಸಿ ಇವಿ ಪವರ್ ಪ್ಲಸ್ ಹೆಸರಿನ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭ ಮಾಡುವುದಕ್ಕೂ ಮೊದಲು ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿತ್ತು. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್ ಆರಂಭಿಸಿ ಬಳಿಕ ಸೇವೆ ಆರಂಭಿಸಿತ್ತು. ಆದರೆ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಕರ ಕೊರತೆ ಇದೆ.

'ಮೇಕ್ ಇನ್ ಇಂಡಿಯಾ' ವಿದ್ಯುತ್ ಬಸ್ ಫೇಮ್-2 ಯೋಜನೆಯಯಲ್ಲಿ 50 ಅಂತರ-ನಗರ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರವನ್ನು ಕೆಎಸ್ಆರ್‌ಟಿಸಿ ಆರಂಭಿಸಿದೆ. ಓಲೆಕ್ಟ್ರಾ ಕಂಪನಿಯ ಬಸ್‌ಗಳು ಇದಾಗಿವೆ. ದೇಶದ ಮೊದಲ ಬಹು ದೂರದ ಅಂತರ-ನಗರ ಎಲೆಕ್ಟ್ರಿಕ್ ಬಸ್‌ಗಳು ಇದಾಗಿದೆ.

ಈ ಬಸ್‌ ಪ್ರತಿ ಚಾರ್ಜ್‌ಗೆ 300 ಕಿ. ಮೀ. ವರೆಗೂ ಸಂಚಾರ ನಡೆಸುತ್ತದೆ. ಸುಧಾರಿತ Li-ion Phosphate ಬ್ಯಾಟರಿಯನ್ನು 2-3 ಗಂಟೆಗಳ ಅವಧಿಯಲ್ಲಿ ಫಾಸ್ಟ್ ಚಾರ್ಜರ್‌ನೊಂದಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಬಸ್ 43 + ನಿರ್ವಾಹಕರು + ಚಾಲಕರ ಆಸನ ಸಾಮರ್ಥ್ಯವನ್ನು ಹೊಂದಿದೆ. 12 ಮೀ., ಹವಾನಿಯಂತ್ರಿತ ಬಸ್‌ಗಳು ಎಲೆಕ್ಟ್ರಾನಿಕ್ ನಿಯಂತ್ರಿತ ಏರ್ ಸಸ್ಪೆನ್ಷನ್‌ನಿಂದಾಗಿ ಆರಾಯದಾಯಕ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+