ಶಿವಮೊಗ್ಗ; ಪೊಲೀಸರಿಂದ ವಿಭಿನ್ನವಾಗಿ ಮಾಸ್ಕ್ ಕಾರ್ಯಾಚರಣೆ
ಶಿವಮೊಗ್ಗ, ಏಪ್ರಿಲ್ 19; ಮಾಸ್ಕ್ ಧರಿಸದವರಿಗೆ ಕಪಾಳಮೋಕ್ಷ, ಹಣವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ದಂಡ ವಸೂಲಿ ಮಾಡುತ್ತಿರುವ ಪ್ರಕರಣಗಳ ನಡುವೆ ಶಿವಮೊಗ್ಗ ಪೊಲೀಸರು ವಿಭಿನ್ನವಾಗಿ ಕಾರ್ಯನಿರ್ವಹಣೆ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಾಸ್ಕ್ ಧರಿಸದವರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಮಾಸ್ಕ್ ವಿತರಣೆ ಮಾಡಿ, ಕೊರೋನದಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಹಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಹೆಚ್. ಟಿ. ಶೇಖರ್, ಡಿವೈಎಸ್ಪಿ ಪ್ರಶಾಂತ್ ಮತ್ತು ಪೊಲೀಸರು, ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸಿದರು.

ಮಾಸ್ಕ್ ತೊಡದೆ ಬಸ್ಸಿಗಾಗಿ ಕಾದು ಕೂತಿದ್ದ ಮಕ್ಕಳಿಗೆ ಹೆಚ್ಚುವರಿ ಎಸ್ಪಿ ಡಾ. ಶೇಖರ್ , ತಾವೇ ಮಾಸ್ಕ್ ತೊಡಿಸಿ, ಪೋಷಕರಿಗೆ ತಿಳಿವಳಿಕೆ ಹೇಳಿದರು. ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಕೆಲವರು ಕರ್ಚೀಫ್, ಟವೆಲ್ ಮುಖಕ್ಕೆ ಸುತ್ತಿಕೊಂಡರು.
ಇದನ್ನು ಗಮನಿಸಿ ಬಸ್ ಏರಿದ ಹೆಚ್ಚುವರಿ ರಕ್ಷಣಾಧಿಕಾರಿಗಳು ಜೀವ ಮತ್ತು ಜೀವನ ಮುಖ್ಯ. ದಂಡಕ್ಕೆ ಹೆದರಿ ಮುಖ ಮುಚ್ಚಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಕೋವಿಡ್ನಿಂದ ಬಚಾವ್ ಆಗೋದು ಮುಖ್ಯ ಎಂದು ತಿಳಿವಳಿಕೆ ನೀಡಿದರು.

ಸಿಟಿ ಬಸ್ನಲ್ಲಿ ಡಿವೈಎಸ್ಪಿ ಪಾಠ; ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ್ ನಗರ ಸಾರಿಗೆ ಬಸ್ಸುಗಳಲ್ಲಿ ಮಾಸ್ಕ್ ಧರಿಸದವರಿಗೆ ತಿಳಿವಳಿಕೆ ಹೇಳಿದರು. ಕೋವಿಡ್ನಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಕಡ್ಡಾಯ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ಜಾಗೃತಿ ಮೂಡಿಸುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಂಡ ಪ್ರಯೋಗದ ಜೊತೆಗೆ ಜನರ ಕಷ್ಟ ಅರಿತು ಮಾಸ್ಕ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications