ಮಲೆನಾಡು ಭಾಗದ ಜನರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ
ಶಿವಮೊಗ್ಗ, ಜನವರಿ 21: ಕೇಂದ್ರ ಸರ್ಕಾರ ಮಲೆನಾಡು ಭಾಗದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಶಿವಮೊಗ್ಗ ಎಫ್ಎಂ ಪ್ರಸರಣ ಕೇಂದ್ರವನ್ನು 10 ವ್ಯಾಟ್ನ ಎಫ್ಎಂ ಕೇಂದ್ರವಾಗಿ ವಿಸ್ತರಣೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ 10 ಕಿಲೋ ವ್ಯಾಟ್ ಎಫ್ಎಂ ಪ್ರಸರಣ ಕೇಂದ್ರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ದೂರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿ. ವೈ. ರಾಘವೇಂದ್ರ, " ಶಿವಮೊಗ್ಗ ನಗರದ ಜನತೆಯ ಬಹುದಿನದ ಬೇಡಿಕೆ ಆಗಿದ್ದ ಎಫ್ಎಂ ಕೇಂದ್ರ 10 ವ್ಯಾಟ್ನ ಎಫ್ಎಂ ಕೇಂದ್ರವಾಗಿ ವಿಸ್ತರಣೆ ಹೊಂದಿದೆ" ಎಂದು ಹೇಳಿದರು.
8 ಜಿಲ್ಲೆಗಳಿಗೆ ವಿಸ್ತರಣೆ; ಶಿವಮೊಗ್ಗದ ಎಫ್ಎಂ ಪ್ರಸರಣ ಕೇಂದ್ರ ಸದ್ಯ 1 ಕಿಲೋ ವ್ಯಾಟ್ ಇದೆ. ಈಗ ಶಿವಮೊಗ್ಗ ಭದ್ರಾವತಿ ಕೇಂದ್ರಕ್ಕೆ 10 ಕಿಲೋ ವ್ಯಾಟ್ ಸಿಕ್ಕಿರುವುದು ಮಲೆನಾಡಿಗೆ ಸಿಕ್ಕ ಗೌರವವಾಗಿದೆ.
"ಪ್ರಸ್ತುತ ಶಿವಮೊಗ್ಗ ಮತ್ತು ಭದ್ರಾವತಿ ವ್ಯಾಪ್ತಿಯಲ್ಲಿ ಆಕಾಶವಾಣಿ ಮತ್ತು ಎಫ್ಎಂ ರೇಡಿಯೋ ಸುಮಾರು 1 ಕೆವಿ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಉನ್ನತೀಕರಣದ ನಂತರ ಇದರ ವ್ಯಾಪ್ತಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಅಕ್ಕಪಕ್ಕದ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ" ಎಂದು ಸಂಸದರು ಹೇಳಿದರು.
"ಇದರ ಪೂರ್ಣಪ್ರಮಾಣದ ಕಾರ್ಯಾರಂಭವಾದ ಮೇಲೆ ನಾವು ಕಾರಿನಲ್ಲಿ ಪ್ರಯಾಣ ಮಾಡುವಾಗ ಶಿವಮೊಗ್ಗದ ಯಾವುದೇ ಮೂಲೆಗೆ ಸಮಾರು 150 ಕಿಲೋ ಮೀಟರ್ವರೆಗೆ ರೇಡಿಯೋ ಕೇಳಿಕೊಂಡು ಹೋಗಬಹುದು" ಎಂದು ಸಂಸದರು ವಿವರಣೆ ನೀಡಿದರು.
"ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅತ್ಯಧಿಕ ಸಾಮರ್ಥ್ಯದ ಟ್ರಾನ್ಸ್ಮೀಟರ್ ಅಳವಡಿಕೆ ಕಾರ್ಯ ನಮ್ಮ ಶಿವಮೊಗ್ಗದಲ್ಲಿ ಆಗುತ್ತಿರುವುದು ನಮಗೆಲ್ಲ ಹೆಮ್ಮೆ ಹಾಗೂ ಸಂತೋಷ ತರುವ ವಿಚಾರವಾಗಿದೆ" ಎಂದು ಬಿ. ವೈ. ರಾಘವೇಂದ್ರ ತಿಳಿಸಿದರು.
"ಆಕಾಶವಾಣಿಗೆ 59 ವರ್ಷ ತುಂಬಿದ್ದು ಇಳಿ ವಯಸ್ಸಿನಲ್ಲಿ ಯೌವನ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವವು ನಮ್ಮ ಮಲೆನಾಡಿನ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಯೋಜನೆಗೆ ರೂ. 10 ಕೋಟಿ ಅನುದಾನ ನೀಡಲಾಗಿದ್ದು, ಅನುಷ್ಠಾನದ ನಂತರ ತುಮಕೂರುವರೆಗೂ ರೇಡಿಯೋ ಸೇವೆ ದೊರೆಯಲಿದೆ. ಮೊಬೈಲ್ನಲ್ಲೂ ಇಂಟರ್ನೆಟ್ ಇಲ್ಲದೆ ಬಳಸಬಹುದು. ನಮ್ಮ ಮಲೆನಾಡಿನ ಗ್ರಾಮೀಣ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹ ಸಹಕಾರಿ ಆಗಲಿದ್ದು ಮುಂದಿನ ದಿನಗಳಲ್ಲಿ ಭಾರತದಲ್ಲಿ ಅತೀ ದೊಡ್ಡ ಎಫ್ಎಂ ಕೇಂದ್ರ ಆಗಲಿದೆ" ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.
"ಭದ್ರಾವತಿ ಆಕಾಶವಾಣಿ ಸ್ಟುಡಿಯೋವನ್ನು ಮೇಲ್ದರ್ಜೆಗೇರಿಸಲಾಗುವುದು. ಈ ರೀತಿಯ ಯೋಜನೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರದ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಸಂಸದರು ಹೇಳಿದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಮಾತನಾಡಿ, "ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ಈ ದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಅಭಿವೃದ್ಧಿ ಚಿಂತನೆಯೊಂದಿಗೆ ಈ ರೀತಿಯ ಅನೇಕ ಯೋಜನೆಯನ್ನು ನೀಡಿದ್ದಾರೆ. ಸಂಸದ ಬಿ. ವೈ. ರಾಘವೇಂದ್ರ ಅವರು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ" ಎಂದರು.
ಭದ್ರಾವತಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಎಸ್. ಆರ್. ಭಟ್ ಮಾತನಾಡಿ, "ನಮ್ಮ ಆಕಾಶವಾಣಿಗೆ ಹೊಸ ಹುರುಪು ಬರುತ್ತಿದೆ. ಈ ನಿಟ್ಟಿನಲ್ಲಿ ಸಂಸದ ಬಿ. ವೈ. ರಾಘವೇಂದ್ರ ಅವರ ಶ್ರಮ ಅತ್ಯಂತ ಅಮೂಲ್ಯವಾದದ್ದು" ಎಂದು ಶ್ಲಾಘಸಿದರು.












Click it and Unblock the Notifications