ಶಿವಮೊಗ್ಗ ಟ್ರೀ ಪಾರ್ಕ್; ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ ಸಲ್ಲಿಕೆ
ಶಿವಮೊಗ್ಗ, ಡಿಸೆಂಬರ್ 28; ಶಿವಮೊಗ್ಗ ನಗರದಿಂದ 13 ಕಿ. ಮೀ. ದೂರದಲ್ಲಿರುವ ಮುದ್ದಿನಕೊಪ್ಪ ಟ್ರೀಪಾರ್ಕ್ ದೇಶದಲ್ಲೇ ಮಾದರಿ ಹಸಿರುತಾಣವಾಗಿ ಅಭಿವೃದ್ಧಿಯಾಗಲಿದೆ. ಈ ಕುರಿತು ಮಹತ್ವದ ಪ್ರಸ್ತಾವನೆಯೊಂದನ್ನು ಅರಣ್ಯ ಸಚಿವರಿಗೆ ಸಲ್ಲಿಕೆ ಮಾಡಲಾಗಿದೆ.
ಸೋಮವಾರ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಶಿವಮೊಗ್ಗ ಜಿಲ್ಲಾಉಸ್ತುವಾರಿ ಸಚಿವರಾದ ಕೆ. ಎಸ್. ಈಶ್ವರಪ್ಪ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರೊಂದಿಗೆ ಈ ಕುರಿತಂತೆ ಮಹತ್ವ ಸಭೆಯನ್ನು ನಡೆಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ಅವರು, "ಶಿವಮೊಗ್ಗ ನಗರದ ಕೇಂದ್ರದಿಂದ ಕೇವಲ 13 ಕಿ. ಮೀ. ದೂರ ಇರುವ ಮುದ್ದಿನಕೊಪ್ಪ ಟ್ರೀ ಪಾರ್ಕ್ ಅನ್ನು, ವಿಶೇಷವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಈ ಪತ್ರದೊಂದಿಗೆ ಸಚಿವರಿಗೆ ಸಲ್ಲಿಸಲಾಗಿದೆ" ಎಂದರು.
"ಪ್ರಸ್ತಾವನೆಯಲ್ಲಿರುವ ಯೋಜನೆಗಳು, ಪರಿಸರ ಸಂಬಂಧಿತ ಸತ್ಪರಿಣಾಮಗಳ ಜೊತೆಗೆ, ಶಿವಮೊಗ್ಗ ಜಿಲ್ಲೆಗೆ ಹಲವು ರೀತಿಯಿಂದ ಉದ್ಯೋಗ ಸೃಷ್ಟಿಸಿ ಕೊಡುವುದು ಅಲ್ಲದೇ, ಅನೇಕ ಆರ್ಥಿಕ ಲಾಭ ತರುವ ಆಯಾಮಗಳನ್ನು ಹೊಂದಿರುವುದನ್ನು ತಿಳಿಯಬಹುದು" ಎಂದು ಹೇಳಿದರು.

ಯೋಜನೆಯಲ್ಲಿ ಏನಿದೆ?
ಪ್ರಸ್ತಾವಿತ ಯೋಜನೆ ಶಿವಮೊಗ್ಗ ಜಿಲ್ಲೆಯ ಸಮಸ್ತ ವಯೋಮಾನದ ವಿದ್ಯಾರ್ಥಿಗಳಿಗೆ, ರೈತರಿಗೆ, ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಪ್ರವಾಸೋದ್ಯಮ ಹೆಚ್ಚಿಸುವ, ಪಶ್ಚಿಮಘಟ್ಟ ಅರಿಯುವ, ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ದೊರಕುವ, ಜೇನು ಹಾಗು ಚಿಟ್ಟೆಗಳ ಬಗ್ಗೆ ಮಾಹಿತಿ ಪಡೆಯುವ, ಅರಣ್ಯೋತ್ಪನ್ನಗಳ ಬಗ್ಗೆ ಮಾಹಿತಿ ದೊರಕುವ, ಸರ್ಕಾರ ಪರಿಸರದ ಬಗ್ಗೆ ಜನರಿಗೆ ಮನಮುಟ್ಟುವಂತೆ ತಲುಪಿಸುವ ವ್ಯವಸ್ಥೆ ಹೊಂದಬಹುದಾದಂತಹ ಹಲವು ಆಯಾಮಗಳನ್ನು ಹೊಂದಿದೆ.

ವಾಯು, ಜಲ ಮಾಲಿನ್ಯ ಹೆಚ್ಚಳ
"ಪ್ರಪಂಚ ಎದುರಿಸುತ್ತಿರುವ ಜಾಗತಿಕ ತಾಪಮಾನಕ್ಕೆ ಶಿವಮೊಗ್ಗ ನಗರದ ಯೋಗದಾನವೂ ಇರುವುದನ್ನು ನಾವು ಒಪ್ಪಿಕ್ಕೊಳ್ಳಲೇಬೇಕಾಗಿದೆ. ಒಂದೊಮ್ಮೆ ಮಲೆನಾಡ ಹೆಬ್ಬಾಗಿಲು ಎಂದು ಕರೆಯಲ್ಪಡುತ್ತಿದ್ದ ನಮ್ಮ ಶಿವಮೊಗ್ಗ ದಿನೇದಿನೇ ತನ್ನ ಹಸಿರನ್ನು ಕಳೆದುಕೊಂಡು ತನ್ನ ನೆಲ, ಜಲ ಮತ್ತು ವಾಯುಮಾಲಿನ್ಯ ಹೆಚ್ಚಿಸಿಕೊಂಡಿರುವುದು ಅತ್ಯಂತ ಕಳವಳಕಾರಿಯಾದ ವಿಷಯ" ಎಂದು ಈಶ್ವರಪ್ಪ ಹೇಳಿದರು.

ಉಳಿದ ಜಿಲ್ಲೆಗಳಲ್ಲೂ ಟ್ರೀ ಪಾರ್ಕ್
ಶಿವಮೊಗ್ಗೆಯ ಮುದ್ದಿನಕೊಪ್ಪ ಟ್ರೀ ಪಾರ್ಕ್ ಅನ್ನು ಮೊದಲು ಅನುಷ್ಠಾನಗೊಳಿಸಿ ನಂತರ ಉಳಿದ ಜಿಲ್ಲೆಗಳಲ್ಲೂ ಇದೇ ರೀತಿಯ ಯೋಜನೆ ಅನುಷ್ಠಾನಗೊಳಿಸಬಹುದು. ಜನರ, ನಗರದ, ರಾಜ್ಯದ ಹಾಗೂ ದೇಶದ ಜನರಿಗೆ ಒಳಿತಾಗುವ ಹಾಗೂ ಗರಿಮೆ ಹೆಚ್ಚಿಸುವ ಈ ಯೋಜನೆಯನ್ನು ತಾವು ಅನುಷ್ಠಾನಗೊಳಿಸಬೇಕು ಎಂದು ಪ್ರಸ್ತಾವನೆಯಲ್ಲಿ ಮನವಿ ಸಲ್ಲಿಸಲಾಗಿದೆ.

ಅರಣ್ಯ ಸಚಿವರ ಉಪಸ್ಥಿತಿ
ಅರಣ್ಯ ಸಚಿವ ಆನಂದ್ ಸಿಂಗ್ ಸೇರಿದಂತೆ ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಅಪರ ಮುಖ್ಯ ಕಾರ್ಯದರ್ಶಿಗಳಾದ ಸಂದೀಪ ದವೆ, ಸುಮಿತ್ರ ಬಿಜ್ಜೂರ ಕಾರ್ಯದರ್ಶಿಗಳು ಮತ್ತು ಪ್ರಕಾಶ್ ಜೊಡಿಯಾಕ್ ಪರಿಸರವಾದಿಗಳು, ಶಿವಮೊಗ್ಗ ನಂದನ್ ಮುಂತಾದವರು ಉಪಸ್ಥಿತರಿದ್ದರು.











Click it and Unblock the Notifications