ಮಲೆನಾಡಲ್ಲಿ ಮಳೆಯ ಅಬ್ಬರ; ಕೈ ಬೀಸಿ ಕರೆಯುತ್ತಿದೆ ಜೋಗ ಜಲಪಾತ
ಶಿವಮೊಗ್ಗ, ಜುಲೈ 06: ಶಿವಮೊಗ್ಗ ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹಳ್ಳಕೊಳ್ಳಗಳು ಭರ್ತಿಯಾಗಿದ್ದು, ತುಂಗಾ, ಶರಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಮಳೆಯಲ್ಲಿ ಮಲೆನಾಡಿನ ಅಂದವನ್ನು ಸವಿಯಲು ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಎರಡು ವಾರಗಳಿಂದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಧುಮ್ಮಿಕ್ಕುತ್ತಿರುವ ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.

ಜೋಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಮಳೆಗಾಲದಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಜೋಗ ಜಲಪಾತ ವೀಕ್ಷಣೆಗೆ ಪ್ರತಿದಿನ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಮಳೆ ಜೋರಾಗಿ ಸುರಿಯುತ್ತಿದ್ದು, ಜೋಗ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಭಾರೀ ಮಳೆಯಾದರೆ ಮಂಜು ಮುಸುಕಿ ಜೋಗ ಜಲಪಾತ ವೀಕ್ಷಣೆಗೆ ಹೋಗುವ ಪ್ರವಾಸಿಗರಿಗೆ ನಿರಾಸೆ ಉಂಟಾಗುತ್ತದೆ. ಶನಿವಾರ, ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಜಲಪಾತದ ರಾಜ, ರಾಣಿ, ರೋರರ್ ಮತ್ತು ರಾಕೆಟ್ಗಳ ಮೂಲಕ ಜಲಧಾರೆ ಧುಮ್ಮಿಕ್ಕುತ್ತಿದೆ. ಜಲಪಾತ ದ ಸೌಂದರ್ಯಕ್ಕೆ ಪ್ರವಾಸಿಗರು ಮಾರು ಹೋಗಿದ್ದಾರೆ.
ಡ್ಯಾಂ ನೀರಿನ ಮಟ್ಟ: ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯದ ಒಳ ಹರಿವು 20,420 ಕ್ಯೂಸೆಕ್ ಆಗಿದೆ. ಹೊರ ಹರಿವು 2030.76 ಕ್ಯೂಸೆಕ್. ಡ್ಯಾಂ ಗರಿಷ್ಟ ಮಟ್ಟ 1819 ಅಡಿಗಳು. ಇಂದಿನ ನೀರಿನ ಮಟ್ಟ 1764.80 ಅಡಿಗಳು. ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಶರಾವತಿ ನದಿಗೆ ನೀರಿನ ಹರಿವು ಹೆಚ್ಚಿದೆ.
ಈ ಬಾರಿಯ ಬೇಸಿಗೆಯಲ್ಲಿ ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದು ಹೋಗಿತ್ತು. ಆದ್ದರಿಂದ ಹಸಿರುಮಕ್ಕಿ ಲಾಂಚ್ ಸೇವೆ ಬಂದ್ ಆಗಿತ್ತು. ಆದರೆ ಕಳೆದ ವಾರದಿಂದ ಲಾಂಚ್ ಸೇವೆ ಪುನರ್ ಆರಂಭವಾಗಿದೆ.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದ ಹಿನ್ನೆಲೆ ಲಾಂಚ್ ಸೇವೆ ಸ್ಥಗಿತ ಗೊಳಿಸಲಾಗಿತ್ತು. ಈಗ ಜಲಾಶಯಕ್ಕೆ ನೀರು ಹರಿದುಬರುತ್ತಿರುವ ಹಿನ್ನೆಲೆ ಲಾಂಚ್ ಸೇವೆ ಪುನಃ ಆರಂಭವಾಗಿದ್ದು, ಸ್ಥಳೀಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಲಾಂಚ್ ಸೇವೆಯಿಂದ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳುವ ಭಕ್ತರಿಗೂ ಅನುಕೂಲವಾಗಿದೆ.
ಮೇ ತಿಂಗಳಿನಲ್ಲಿ ಪೂರ್ವ ಮುಂಗಾರು ಮಳೆ ಮಲೆನಾಡಲ್ಲಿ ಆರಂಭವಾಗಿತ್ತು. ಆಗಲೇ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮೇ ತಿಂಗಳಿನಲ್ಲಿ ಒಂದೇ ದಿನ ಜೋಗ ಜಲಪಾತಕ್ಕೆ 30,000 ಪ್ರವಾಸಿಗರು ಭೇಟಿ ನೀಡಿದ್ದರು. ಈಗ ಮಳೆಗಾಲದಲ್ಲಿ ಜೋಗ ಜಲಪಾತ ವೀಕ್ಷಣೆ ಮಾಡಲು ಬರುವ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಜೋಗದ ಅಭಿವೃದ್ಧಿಗಾಗಿ ಹಲವಾರು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ಮುಗಿಯಲು ಕನಿಷ್ಠ 2 ವರ್ಷಗಳು ಬೇಕು. ಅಲ್ಲಿಯ ತನಕ ಜೋಗ ಜಲಪಾತ ವೀಕ್ಷಣೆ ಮಾಡಲು ಬರುವ ಪ್ರವಾಸಿಗರು ಎಚ್ಚರಿಕೆಯಿಂದ ಸಂಚಾರ ನಡೆಸಬೇಕು.
ಮಳೆಗಾಲದಲ್ಲಿ ಮಲೆನಾಡು ಪ್ರವಾಸ ಕೈಗೊಳ್ಳುವ ಜನರು ಸ್ಥಳೀಯರು ನೀಡುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಿ ಎಂದು ಮನವಿ ಮಾಡಲಾಗಿದೆ. ನೀರಿನ ಹರಿವು, ರಸ್ತೆಗಳು ಮಣ್ಣು ಕುಸಿದು ಬಂದ್ ಆಗಿರುವುದು ಈ ಕುರಿತ ಮಾಹಿತಿ ಸ್ಥಳೀಯರಿಗೆ ಚೆನ್ನಾಗಿ ತಿಳಿದಿರುತ್ತದೆ. ಕೇವಲ ಗೂಗಲ್ ಮ್ಯಾಪ್ ನೋಡಿಕೊಂಡು ಸಂಚಾರ ನಡೆಸಬೇಡಿ ಎಂದು ಮನವಿ ಮಾಡಲಾಗಿದೆ.












Click it and Unblock the Notifications