ಶಿವಮೊಗ್ಗದಲ್ಲಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ: ಹೆಚ್ಚಿದ ಪೈಪೋಟಿ
ಶಿವಮೊಗ್ಗ, ಆಗಸ್ಟ್, 26: ಶಿವಮೊಗ್ಗದಲ್ಲಿ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆಗೆ ಕೊನೆಗೂ ಮೀಸಲಾತಿ ಪ್ರಕಟವಾಗಿದೆ. ನಾಲ್ಕನೇ ಅವಧಿಗೆ ನಗರದ ಪ್ರಥಮ ಪ್ರಜೆ ಯಾರಾಗುತ್ತಾರೆ ಎಂಬ ಕುತೂಹಲ ಮತ್ತು ರಾಜಕೀಯ ಚರ್ಚೆಗಳು ಆರಂಭವಾಗಿದೆ.
ಶಿವಮೊಗ್ಗ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಇದಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ಇನ್ನ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಇಲ್ಲಿಯು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.
ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆ ಕಳೆದ ಐದು ತಿಂಗಳ ಹಿಂದೆಯೇ ನಡೆಯಬೇಕಿತ್ತು. ಆದರೆ ಮೀಸಲಾತಿ ವಿಚಾರವಾಗಿ ಹೈಕೋರ್ಟ್ನಲ್ಲಿತ್ತು. ಹಾಗಾಗಿ ಹಿಂದಿನ ಅವಧಿಯ ಮೇಯರ್ ಮತ್ತು ಉಪ ಮೇಯರ್ ಅವರಿಗೆ ಐದು ತಿಂಗಳು ಹೆಚ್ಚಿನ ಅಧಿಕಾರವಧಿ ಸಿಕ್ಕಿತ್ತು. ವಿಧಾನಸಭೆ ಚುನಾವಣೆ ಸಮೀಪದಲ್ಲಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಮೀಸಲು ಪ್ರಕಟವಾಗಿದೆ. ಜಾತಿ, ಪಕ್ಷ ಸಂಘಟನೆ, ಮತಗಳಿಕೆ ಆಧಾರದ ಮೇಲೆಯೇ ಮುಂದಿನ ಮೇಯರ್, ಉಪ ಮೇಯರ್ ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತವಿದೆ. ಹಾಗಾಗಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಪಕ್ಷದ ಪಾಲಿಕೆ ಸದಸ್ಯರೇ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಪಾಲಿಕೆಯಲ್ಲಿ ಬಿಜೆಪಿಯ 20 ಸದಸ್ಯರಿದ್ದಾರೆ. ಕಾಂಗ್ರೆಸ್ 7, ಜೆಡಿಎಸ್ 2, ಎಸ್ ಡಿಪಿಐ ಓರ್ವ, ಪಕ್ಷೇತರರು 5 ಜನ ಸದಸ್ಯರಿದ್ದಾರೆ.
ಯಾರಾಗಬಹುದು ಮುಂದಿನ ಮೇಯರ್?
ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಪ್ರಸ್ತುತ ಐವರು ಪಾಲಿಕೆ ಸದಸ್ಯರು ಅರ್ಹರಾಗಿದ್ದಾರೆ. ಈ ಐವರು ಸದಸ್ಯರು ಇದೆ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿದ್ದಾರೆ. ವಿನೋಬನಗರ ವಾರ್ಡ್ನ ರಾಹುಲ್ ಬಿದರೆ ಅವರು ಪಕ್ಷೇತರರಾಗಿ ಗೆದ್ದು, ಬಳಿಕ ಬಿಜೆಪಿ ಸೇರ್ಪಡೆ ಆಗಿದ್ದರು. ಅರಮನೆ ವಾರ್ಡ್ನ ಪಿ.ಪ್ರಭಾಕರ್, ಆರ್.ಎಂ.ಎಲ್ ನಗರ ವಾರ್ಡ್ನ ಎಸ್.ಜಿ.ರಾಜು, ಮಿಳಘಟ್ಟ ವಾರ್ಡ್ನ ಯು.ಹೆಚ್.ವಿಶ್ವನಾಥ್, ಗೋಪಾಲಗೌಡ ವಾರ್ಡ್ನ ಎಸ್.ಜ್ಞಾನೇಶ್ವರ್ ಅವರು ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡುವ ಅರ್ಹತೆ ಹೊಂದಿದ್ದಾರೆ.
ಉಪ ಮೇಯರ್ ಸ್ಥಾನಕ್ಕ ಪೈಪೋಟಿ
ಎಸ್.ಜ್ಞಾನೇಶ್ವರ್ ಅವರು ಮೊದಲ ಬಾರಿ ಪಾಲಿಕೆ ಸದಸ್ಯರಾದರೂ ಕೂಡ ಬಿಜೆಪಿ ಸಂಘಟನೆಯಲ್ಲಿ ಹಲವು ವರ್ಷದಿಂದ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಜಿಲ್ಲಾಪ್ರಕೋಷ್ಠದ ಸಂಯೋಜಕರಾಗಿದ್ದಾರೆ. ಬಿಜೆಪಿ ನಗರ ಅಧ್ಯಕ್ಷರಾಗಿ, ಸೂಡಾ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಹಿರಿಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರನ್ನು ಮೇಯರ್ ಸ್ಥಾನಕ್ಕೆ ಸೂಚಿಸಿದರೆ ಉಳಿದ ಸದಸ್ಯರು ವಿರೋಧ ವ್ಯಕ್ತಪಡಿಸುವುದಿಲ್ಲ. ಹಾಗಾಗಿ ಎಸ್.ಜ್ಞಾನೇಶ್ವರ್ ಅವರು ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ಇನ್ನು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದೆ. 12 ಮಹಿಳಾ ಸದಸ್ಯರು ಅರ್ಹರಾಗಿದ್ದಾರೆ. ಮೊದಲ ಬಾರಿಗೆ ಆಯ್ಕೆ ಆದ ಗಾಂಧಿ ಬಜಾರ್ ಪಶ್ಚಿಮ ವಾರ್ಡ್ನ ಭಾನುಮತಿ ವಿನೋದ್ ಕುಮಾರ್, ಗಾಂಧಿ ಬಜಾರ್ ಪೂರ್ವ ವಾರ್ಡ್ನ ಕಲ್ಪನಾ ರಮೇಶ್, ರವೀಂದ್ರನಗರ ವಾರ್ಡ್ನ ಸದಸ್ಯೆ ಆರತಿ ಪ್ರಕಾಶ್, ಸೂಳೆಬೈಲು ವಾರ್ಡ್ನ ಸಂಗೀತಾ ನಾಗರಾಜ್, ಕಲ್ಲಹಳ್ಳಿ ವಾರ್ಡ್ನ ಅನಿತಾ ರವಿಶಂಕರ್ ಅವರು ಅರ್ಹರಾಗಿದ್ದಾರೆ. ಉಳಿದಂತೆ ಸುನೀತ ಅಣ್ಣಪ್ಪ, ಸುರೇಖಾ ಮುರಳೀಧರ್, ಸುವರ್ಣ ಶಂಕರ್, ಲತಾ ಗಣೇಶ್ ಅವರು ಈಗಾಗಲೇ ಮೇಯರ್, ಉಪ ಮೇಯರ್ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಮೇಯರ್ ಸ್ಥಾನಕ್ಕೆ ಪ್ರಬಲ ಪೈಪೋಟಿ
ಮೊದಲ ಬಾರಿ ಪಾಲಿಕೆ ಸದಸ್ಯರಾಗಿರುವ ಅನಿತಾ ರವಿಶಂಕರ್ ಅವರು ಈ ಹಿಂದೆ ಮೇಯರ್ ಸ್ಥಾನಕ್ಕೆ ಪ್ರಬಲವಾಗಿ ಪೈಪೋಟಿ ನಡೆಸಿದ್ದರು. ಆದರೆ ಕಡೆ ಕ್ಷಣದಲ್ಲಿ ಅವಕಾಶ ವಂಚಿತರಾದರು. ಸುವರ್ಣ ಶಂಕರ್ ಅವರು ಮೇಯರ್ ಆಗಿದ್ದರು. ಇನ್ನು ಈ ಹಿಂದೆ ಎರಡು ಬಾರಿ ನಗರಸಭೆ ಸದಸ್ಯರಾಗಿದ್ದ ಲಕ್ಷ್ಮೀ ಶಂಕರ ನಾಯ್ಕ್ ಅವರು ಇದೀಗ ಪಾಲಿಕೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಸುರೇಖಾ ಮುರಳೀಧರ್ ಅವರು ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ವೇಳೆ ಲಕ್ಷ್ಮಿ ಶಂಕರ ನಾಯ್ಕ್ ಅವರು ಆಕಾಂಕ್ಷಿ ಆಗಿದ್ದರು. ಆಗ ಅವರು ಅವಕಾಶ ಕಳೆದುಕೊಂಡಿದ್ದರು. ಹಾಗಾಗಿ ಲಕ್ಷ್ಮೀ ಶಂಕರ ನಾಯ್ಕ್ ಮತ್ತು ಅನಿತಾ ರವಿಶಂಕರ್ ಇವರಲ್ಲಿ ಯಾರು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಅನ್ನುವುದನ್ನು ಕಾದುನೋಡಬೇಕಿದೆ.
ಜಿದ್ದಾಜಿದ್ದಿನ ಅಖಾಡದಲ್ಲಿ ಯಾರಿಗೆ ಮೇಯರ್ ಪಟ್ಟ?
ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಈ ಅವಧಿಯಲ್ಲಿ ಇದು ಕೊನೆಯ ಚುನಾವಣೆ ಆಗುವ ಸಂಭವವಿದೆ. ಇದೀಗ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆಗೆ ನೊಟೀಸ್ ಜಾರಿಗೊಳಿಸಬೇಕಿದೆ. ಬಳಿಕ ಪ್ರಾದೇಶಿಕ ಆಯುಕ್ತರು ಸಮಯ ನೋಡಿಕೊಂಡು ಚುನಾವಣೆ ನಿಗದಿ ಮಾಡಬೇಕು. ಇದೆಲ್ಲ ಆಗುವುದರಲ್ಲಿ ಒಂದು ತಿಂಗಳು ಕಾಲವಕಾಶ ತೆಗೆದುಕೊಳ್ಳಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನೂತನ ಮೇಯರ್, ಉಪ ಮೇಯರ್ ಆಯ್ಕೆ ಆಗಲಿದ್ದಾರೆ. ಎರಡು ತಿಂಗಳಿಗಾಗಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಸಾದ್ಯತೆ ಕಡಿಮೆ ಇದೆ. ಹಾಗಾಗಿ ಇದೇ ಕೊನೆಯ ಅವಧಿಯ ಚುನಾವಣೆ ಅಗುವ ಸಾದ್ಯತೆ ಇದೆ.