ಬಿಎಸ್ವೈ ವಿರುದ್ಧ ಅಖಾಡಕ್ಕಿಳಿದ ಭಂಡಾರಿ
ಶಿವಮೊಗ್ಗ, ಮಾ. 18 : ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಈಗಾಗಲೇ ಜಿಲ್ಲೆಯ 8 ಕಡೆ ಪಾದಯಾತ್ರೆ ಮೂಲಕ ಮೊದಲ ಹಂತದ ಪ್ರಚಾರ ನಡೆಸಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಆದ್ದರಿಂದ ಪಕ್ಷ ಲೋಕಸಭೆ ಟಿಕೆಟ್ ನೀಡಿದ್ದು, ಕ್ಷೇತ್ರದಲ್ಲಿ ಜಯಗಳಿಸಲು ಜನರು ಬೆಂಬಲ ನೀಡಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಶಿವಮೊಗ್ಗ ನಗರದಲ್ಲಿಯೂ ಪಾದಯಾತ್ರೆ ಮೂಲಕ ಮತಯಾಚಿಸಿದ ಮಂಜುನಾಥ್ ಭಂಡಾರಿ ಅವರಿಗೆ ಸಚಿವ ಕಿಮ್ಮನೆ ರತ್ನಾಕರ್, ಶಿವಮೊಗ್ಗ ಕ್ಷೇತ್ರದ ಶಾಸಕ ಪ್ರಸನ್ನ ಕುಮಾರ್ ಮುಂತಾದವರು ಸಾಥ್ ನೀಡಿದ್ದು, ಜಿಲ್ಲೆಯ ಎಂಟು ಕಡೆ ಈಗಾಗಲೇ ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದಾರೆ. [ಶಿವಮೊಗ್ಗದಲ್ಲಿ ಭಂಡಾರಿಗೆ ಟಿಕೆಟ್]
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಪಕ್ಷದ ಗೀತಾ ಶಿವರಾಜ್ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ ಶ್ರೀಧರ ಕಲ್ಲಹಳ್ಳ ಅವರಿಗೆ ಮಂಜುನಾಥ್ ಭಂಡಾರಿ ಪೈಪೋಟಿ ನೀಡಲಿದ್ದಾರೆ. ಮಾ.19ರ ಬುಧವಾರ ಮಂಜುನಾಥ್ ಭಂಡಾರಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಚಿತ್ರಗಳಲ್ಲಿ ನೋಡಿ ಪ್ರಚಾರ (ಚಿತ್ರಕೃಪೆ : ಮಂಜುನಾಥ್ ಭಂಡಾರಿ ಫೇಸ್ ಬುಕ್)
ಪಕ್ಷ ನಂಬಿಕೆ ಇಟ್ಟು ಟಿಕೆಟ್ ನೀಡಿದೆ
ನಾನು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ 40 ವರ್ಷಗಳಿಂದ ಶ್ರಮಿಸಿದ್ದೇನೆ. ಆದ್ದರಿಂದ ಪಕ್ಷ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ. ಕ್ಷೇತ್ರದ ಜನರು ಚುನಾವಣೆಯಲ್ಲಿ ನಾನು ಜಯಗಳಿಸಲು ಬೆಂಬಲ ನೀಡಬೇಕು ಎಂದು ಮಂಜುನಾಥ್ ಭಂಡಾರಿ ಮನವಿ ಮಾಡಿದರು.
ಯಾವುದೇ ಭಿನ್ನಮತವಿಲ್ಲ
ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಕುಮಾರ್ ಬಂಗಾರಪ್ಪ ಅವರಿಗೆ ದೊರೆಯಬೇಕಾಗಿತ್ತು ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ, ಅವರು ನನ್ನ ಸ್ಪರ್ಧೆಯನ್ನು ವಿರೋಧಿಸಿಲ್ಲ. ಆದ್ದರಿಂದ ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ ನಾವೆಲ್ಲರೂ ಒಂದಾಗಿದ್ದೇವೆ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಭಂಡಾರಿ ಹೇಳಿದರು.
ಸೋನಿಯಾ, ರಾಹುಲ್ ಪ್ರಚಾರಕ್ಕೆ
ಜಿಲ್ಲೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಮಾವೇಶವನ್ನು ಏರ್ಪಡಿಸಿ ಪ್ರಚಾರ ನಡೆಸಲು ಚಿಂತಿಸಿದ್ದೇವೆ. ಈ ಕುರಿತು ಕೆಪಿಸಿಸಿಗೂ ಪ್ರಸ್ತಾವನೆ ಕಳುಹಿಸಲಾಗಿದೆ. ಸೋನಿಯಾ ಅಥವ ರಾಹುಲ್ ಗಾಂಧಿ ಅವರ ಸಮಾವೇಶ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಎದುರಾಳಿಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ
ಕ್ಷೇತ್ರದಲ್ಲಿ ನನ್ನ ಎದುರಾಳಿಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರು ಗೆಲವುವಿಗಾಗಿ ಪ್ರಯತ್ನ ಮಾಡುತ್ತೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆ ಮತ್ತು ನನ್ನ ಪಕ್ಷ ನಿಷ್ಠೆಯನ್ನು ನೋಡಿ ಜನರು ನನಗೆ ಬೆಂಬಲ ಸೂಚಿಸುತ್ತಾರೆ ಎಂದರು.
19ರಂದು ನಾಮಪತ್ರ
ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳುವ ಮಾ.19ರ ಬುಧವಾರ ನಾಮಪತ್ರ ಸಲ್ಲಿಸಲಿದ್ದೇನೆ. ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕರ್ತ ಜೊತೆ ಪಾದಯಾತ್ರೆ ನಡೆಸಿ ನಂತರ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಮಂಜುನಾಥ್ ಭಂಡಾರಿ ಹೇಳಿದರು. [ಭಂಡಾರಿ ಪ್ರಚಾರದ ಚಿತ್ರಗಳು]