ಸೇಫ್ ಶಿವಮೊಗ್ಗದಲ್ಲಿ ಲಾಕ್ಡೌನ್ ಸಡಿಲಿಕೆ: ಏನಿದೆ, ಏನಿಲ್ಲ?
ಶಿವಮೊಗ್ಗ, ಏಪ್ರಿಲ್ 29: ಲಾಕ್ಡೌನ್ ಸಡಿಲಿಕೆ ಹಿನ್ನಲೆ ನಾಲ್ಕು ಬಣ್ಣಗಳ ಝೋನ್ಗಳಾಗಿ ಜಿಲ್ಲೆಗಳಲ್ಲಿ ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಸೇಫ್ ಹಾಗೂ ಗ್ರೀನ್ ಝೋನ್ನಲ್ಲಿ ಇದೆ. ಗ್ರೀನ್ ಝೋನ್ನಲ್ಲಿ ಇರುವ ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ಡೌನ್ ಬಹುತೇಕ ಸಡಿಲಿಕೆ ಮಾಡಲಾಗಿದೆ.
ಲಾಕ್ಡೌನ್ ಸಡಿಲಿಕೆಯಾಗಿದ್ದು, ಅಂತರ ಕಾಯ್ದುಕೊಂಡು ತಮಗೆ ಬೇಕಾಗಿರುವ ಸಾಮಗ್ರಿಗಳ ಖರೀದಿಗೆ ಜನರು ಮುಂದಾಗಿದ್ದಾರೆ. ಸಡಿಲಿಕೆಯನ್ನು ಸದುಪಯೋಗ ಮಾಡಿಕೊಂಡು, ಅದರ ಜೊತೆಗೆ ವೈರಸ್ ಹರಡದಂತೆ ನಿವಾರಣೆ ಬಗ್ಗೆ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದು ತಿಳಿಸಲಾಗಿದೆ.
ಅನಗತ್ಯ ಓಡಾಟ, ಅನಗತ್ಯ ಖರೀದಿ, ಅನಗತ್ಯವಾಗಿ ಅಂಗಡಿ ಮುಗ್ಗಟ್ಟುಗಳ ತೆರೆಯುವಿಕೆಯಲ್ಲಿ ಅನಗತ್ಯ ಎಂದು ಕಂಡು ಬಂದರೆ, ಗ್ರೀನ್ ರಿಲೀವ್ ಅನ್ನು ವಾಪಸ್ ತೆಗೆದುಕೊಳ್ಳಲಾಗುವುದು ಮತ್ತೆ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಹಾಗಾಗಿ ಜನ ಜಾಗೃತಿ ಜೊತೆಗೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಲಾಗಿದೆ.

ಸಿನಿಮಾ, ಮಾಲ್, ಬಸ್ ಇಲ್ಲ
ಜನಸಂದಣಿ ಇರುವ ಜಾಗ, ಜನ ಸೇರುವ ಜಾಗಗಳು ಹಾಗೂ ಜನರು ಓಡಾಡಲು ಬಳಸುವ ವಾಹನಗಳು ನಿಷೇಧಿಸಲಾಗಿದೆ. ಚಿತ್ರಮಂದಿರಗಳು, ಶಾಪಿಂಗ್ ಮಾಲ್, ಬ್ಯೂಟಿ ಪಾರ್ಲರ್, ಸಲ್ಯೂನ್, ಕಟ್ಟಿಂಗ್ ಶಾಪ್ ತೆರೆಯುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಬಸ್, ಟ್ಯಾಕ್ಸಿ, ಕಡ್ಡಾಯವಾಗಿ ನಿಷೇಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೋಗುವುದು, ಅಲ್ಲಿಂದ ಇಲ್ಲಿಗೆ ಬರುವುದನ್ನು ಕೂಡ ನಿರ್ಬಂಧಿಸಲಾಗಿದೆ.

ಬಸ್ ನಿಲ್ದಾಣ ತರಕಾರಿ ಮಾರುಕಟ್ಟೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಖಾಸಗಿ ಬಸ್ ನಿಲ್ದಾಣ ಈಗ ತರಕಾರಿ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಲಾಗದೆ. ಬಸ್ ನಿಲ್ಲುವ ಸ್ಥಳದಲ್ಲಿ ತರಕಾರಿ ಇಟ್ಟುಕೊಂಡು ತರಕಾರಿ ಮಾರಾಟಗಾರರು ಮಾರಾಟ ಮಾಡುತ್ತಿದ್ದಾರೆ. ಇಲ್ಲಿಯೇ ಬಂದು ಜನ ತರಕಾರಿ ಖರೀದಿ ಮಾಡುತ್ತಿದ್ದಾರೆ. ಸಾಮಾಜಿಕ ಅಂತರದ ಬಗ್ಗೆ ಗಮನಹರಿಸಲು ತಿಳಿಸಲಾಗಿದೆ. ಸಾಗರದಲ್ಲಿಯು ಸಹಜವಾಗಿ ಜನಸಾಮಾನ್ಯರು ಓಡಾಡುತ್ತಿದ್ದಾರೆ.

ಒಂದು ತಿಂಗಳಿನಿಂದ ಸ್ತಬ್ಧವಾಗಿತ್ತು
ಲಾಕ್ ಡೌನ್ ಆದಾಗಿನಿಂದಲೂ ಸ್ತಬ್ಧವಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ಜನಸಂದಣಿಯಿಂದ ಹೆಚ್ಚಾಗಿದೆ. ಒಂದು ತಿಂಗಳಿನಿಂದಲೂ ರಸ್ತೆ ನೋಡದ ಜನರು ರಸ್ತೆಯನ್ನು ನೋಡಲು ಬರುತ್ತಿರುವಂತೆ ಕಾಣುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸಮಾಧಾನವಾಗಿ ತರಕಾರಿ ಖರೀದಿಯಲ್ಲಿ ಜನರು ನಿರತವಾಗಿದ್ದಾರೆ. ಒಂದು ತಿಂಗಳಿನಿಂದ ಪೋಲಿಸರ ಕಠಿಣ ಕ್ರಮಕ್ಕೆ ತಲೆ ಬಾಗಿದ ಜನರು, ಈಗ ಕೊಂಚ ಸಂತಸದಿಂದ ಖರೀದಿಗೆ ಮುಂದಾಗಿದ್ದಾರೆ.

ಒಂದು ಪಾಸಿಟಿವ್ ಕೇಸ್ ಬಂದಿಲ್ಲ
ಶಿವಮೊಗ್ಗದಲ್ಲಿ ಇದುವರೆಗೆ ಒಂದು ಕೊರೊನಾ ಪಾಸಿಟಿವ್ ಕೇಸ್ಗಳು ಬಂದಿಲ್ಲ. ಅಕ್ಕ ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾದವು. ಆದರೆ, ಶಿವಮೊಗ್ಗ ಕೊರೊನಾ ಮುಕ್ತವಾಗಿದೆ. ಈಗ ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳು ಕೂಡ ಗ್ರೀನ್ ಝೋನ್ಗೆ ಬಂದಿವೆ. ಲಾಕ್ಡೌನ್ ಸಡಿಲಿಕೆಯಿಂದ ಶಿವಮೊಗ್ಗ ಜನತೆ ಖುಷಿಯಾಗಿದ್ದಾರೆ.












Click it and Unblock the Notifications