ಕರ್ತವ್ಯ ನಿರತ ನೌಕರ ಸಾವು; ವಿಎಸ್ಐಎಲ್ ಮುಂದೆ ಪ್ರತಿಭಟನೆ
ಶಿವಮೊಗ್ಗ, ಜನವರಿ 25 : ಭದ್ರಾವತಿಯ ವಿಎಸ್ಐಎಲ್ನಲ್ಲಿ ಕರ್ತವ್ಯ ನಿರತನಾಗಿದ್ದ ಗುತ್ತಿಗೆ ನೌಕರರೊಬ್ಬರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದಾಗಿ ನಿಧನರಾಗಿದ್ದು, ಕಾರ್ಖಾನೆ ಮುಂಭಾಗದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸೋಮವಾರ ಮುಂಜಾನೆ ವಿಎಸ್ಐಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಅಂಥೋಣಿ ರಾಜ್ (47) ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವಿಎಸ್ಐಎಲ್ ಕಾರ್ಖಾನೆಯ ನಿಯಮಾವಳಿಗಳ ಅನ್ವಯ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದ ವೇಳೆಯಲ್ಲಿ ಅಪಘಾತ ಅಥವಾ ಅವಘಡಗಳು ಸಂಭವಿಸಿದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಅಂಥೋಣಿ ಹೃದಯಾಘಾತದಿಂದ ನಿಧನರಾಗಿರುವ ಹಿನ್ನೆಲೆಯಲ್ಲಿ ಪರಿಹಾರ ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.

ಆದರೆ, ಅಂಥೋಣಿಯವರು ಕರ್ತವ್ಯದಲ್ಲಿದ್ದ ವೇಳೆಯಲ್ಲಿಯೇ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕುಟುಂಬದಲ್ಲಿ ಓರ್ವರಿಗೆ ಉದ್ಯೋಗ ನೀಡಬೇಕು ಎಂದು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವಿಚಾರ ಕುರಿತು ಮೃತ ಅಂಥೋಣಿ ಕುಟುಂಬಸ್ಥರು, ಕಾರ್ಮಿಕರು ಹಾಗೂ ಕಾರ್ಖಾನೆ ಅಧಿಕಾರಿಗಳ ನಡುವೆ ವಾಗ್ವಾದ ನಡೆಯುತ್ತಿದೆ. ಪರಿಹಾರವನ್ನು ನೀಡಬೇಕು ಎಂದು ನೌಕರರು ಒತ್ತಾಯವನ್ನು ಮಾಡುತ್ತಿದ್ದಾರೆ. ಶಾಸಕರು ಸಹ ಸ್ಥಳಕ್ಕೆ ತೆರಳಿದ್ದು, ಸಂಧಾನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ.












Click it and Unblock the Notifications