ಭಗತ್ ಸಿಂಗ್ ಜನ್ಮದಿದಂದೇ ಪಿಎಫ್ಐ ನಿಷೇಧಿಸಿರುವುದು ಸ್ವಾಗತಾರ್ಹ ಬೆಳವಣಿಗೆ: ಕೆಎಸ್ ಈಶ್ವರಪ್ಪ
ಶಿವಮೊಗ್ಗ, ಸೆಪ್ಟೆಂಬರ್ 28: ಸ್ವಾತಂತ್ರ್ಯ ಹೋರಾಟಗಾರ ಮಾಡಿದ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನಾಚರಣೆ ದಿನವೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ನಿಷೇಧ ಮಾಡಲಾಗಿದೆ. ರಾಷ್ಟ್ರದ್ರೋಹ ಚಟುವಟಿಕೆ ತೊಡಗಿಕೊಂಡಿದ್ದ ಸಂಘಟನೆಯನ್ನು ನಿಷೇಧ ಮಾಡಿರುವುದು ಸ್ವಾತಂತ್ರ್ಯ ಹೋರಾಟಗಾರ ಆತ್ಮಕ್ಕೆ ಶಾಂತಿ ಸಿಕ್ಕಂತಹ ಬೆಳವಣಿಗೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ,ಪಿಎಫ್ಐ ಸಂಘಟನೆ ಕಾನೂನು ಬಾಹಿರ ಚಟುವಟಿಕೆ, ಉಗ್ರರ ಜೊತೆ ಸಂಬಂಧ, ಹತ್ಯೆ, ಹವಾಲ ದಂಧೆ, ಯುವಕರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿತ್ತು. ಇವುಗಳ ಜೊತೆಗೆ ಸಾಕಷ್ಟು ಹಿಂದೂ ಯುವಕರ ಹತ್ಯೆ ಮಾಡುತ್ತಿದ್ದರು. ಈ ಸಂಘಟನೆಯನ್ನು ನಿಷೇಧ ಮಾಡಿರುವುದು ಎಲ್ಲಾ ರಾಷ್ಟ್ರಪ್ರೇಮಿಗಳಿಗೆ ಸಮಾಧಾನವಾಗಿದೆ ಎಂದು ತಿಳಿಸಿದರು.
"ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಆಗ ನಾನು ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದೆ. ವಿಧಾನ ಪರಿಷತ್ತಿನಲ್ಲಿ ಪಿಎಫ್ಐ ನಿಷೇಧದ ವಿಚಾರ ಪ್ರಸ್ತಾಪವಾಗಿತ್ತು. ಆಗ ಸಿದ್ದರಾಮಯ್ಯ, ಕೇಂದ್ರದಲ್ಲಿ ನಿಮ್ಮದೆ ಸರಕಾರವಿದೆ. ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿಸಿ ಎಂದಿದ್ದರು. ಈಗ ನಮ್ಮ ರಾಜ್ಯ ಸರಕಾರ ಪ್ರಸ್ತಾವನೆ ಕಳುಹಿಸಿದ್ದು ಪಿಎಫ್ಐ ಸಂಘಟನೆಯನ್ನು ನಿಷೇಧಿಸಲಾಗಿದೆ" ಎಂದರು.

ಪಿಎಫ್ಐ ಸಂಘಟನೆಯಿಂದ ಅಶಾಂತಿ
ದೇಶದ್ರೋಹಿಗಳಿಗೆ ಅಮಿತ್ ಷಾ ಸರಿಯಾದ ಕ್ರಮ ಕೈಗೊಂಡಿದ್ದಾರೆ. ರಾಜ್ಯ ಸರಕಾರ ಕೂಡ ಪಿಎಫ್ಐ ನಿಷೇಧ ಮಾಡಲು ಮನವಿ ಮಾಡಿ ದಾಖಲೆ ಸಲ್ಲಿಸಿತ್ತು. ಹರ್ಷನ ಕೊಲೆಯನ್ನು ಪಿಎಫ್ಐ ಸಂಘಟನೆಯವರು ಮಾಡಿದ್ದರು, ಇದರಿಂದ ಶಿವಮೊಗ್ಗದಲ್ಲಿ ಅಶಾಂತಿ ಉಂಟು ಮಾಡಿತ್ತು. ಪ್ರೇಮ್ ಸಿಂಗ್ಗೆ ಚಾಕು ಇರಿತದ ಪ್ರಕರಣದಲ್ಲಿ ಪಿಎಫ್ಐ ಇತ್ತು. ಪುರಲೆಯಲ್ಲಿ ಐಸಿಸ್ ಉಗ್ರರು ಬಾಂಬ್ ಸ್ಫೋಟದ ತಯಾರಿ ನಡೆಸಿದ್ದರು ಎಂದು ಆರೋಪಿಸಿದರು.

ಪಾಕಿಸ್ತಾನದ ಪರ ಒಲವನ್ನು ಬದಲಾಯಿಸಬೇಕು
ಕೆಲವು ಯುವಕರಿಗೆ ಪಾಕಿಸ್ತಾನದ ಪರ ಒಲವಿದೆ, ಆ ಮನಸ್ಥಿತಿಯನ್ನು ಬದಲಾಯಿಸಬೇಕು, ಅದಕ್ಕಾಗಿ ನಾನು ಮುಸ್ಲಿಂ ಸಮುದಾಯ ಹಿರಿಯರಿಗೆ ಮನವಿ ಮಾಡುತ್ತೇನೆ. ಕುವೆಂಪುರ ವಾಕ್ಯವಾದ ಸರ್ವಜನಾಂಗದ ಶಾಂತಿಯ ತೋಟ ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ಹಿಂದೂಗಳನ್ನು ಕೊಲೆ ಮಾಡಿದರೆ ಹೇಗೆ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ. ಹಾಗಾಗಿ ನಾನು ನಿಮ್ಮ ಮನೆಯಲ್ಲಿರುವ ಯುವಕರಿಗೆ ರಾಷ್ಟ್ರಪ್ರೇಮವನ್ನು ಬೆಳೆಸಿ, ಇಂತಹ ಸಂಘಟನೆಯಿಂದ ದೂರವಿಡಿ ಎಂದು ರಾಷ್ಟ್ರಭಕ್ತ ಮುಸಲ್ಮಾನರ ಬಳಿ ಪ್ರಾರ್ಥಿಸುತ್ತೇನೆ ಎಂದರು.

ಮನಸ್ಥಿತಿ ಬದಲಿಸಿಕೊಳ್ಳಲು 5 ವರ್ಷ ಸಮಯ
ಪಿಎಫ್ಐ ಸಂಘಟನೆಯನ್ನು ಮೊದಲೇ ನಿಷೇಧ ಮಾಡಿದ್ದರೇ ಹಿಂದೂ ಕಾರ್ಯಕರ್ತರ ಹತ್ಯೆ ತಡೆಯಬಹುದಿತ್ತು. ಯಾವುದೇ ಕಳ್ಳ ಕೊನೆಯ ತನಕ ಕಳ್ಳನಾಗಿ ಇರುವುಲ್ಲ ಹಾಗಾಗಿ ಪಿಎಫ್ಐ ಸಂಘಟನೆಗೆ 5 ವರ್ಷ ಮಾತ್ರ ನಿಷೇಧ ಹೇರಿ ಬದಲಾಗಲು ಅವಕಾಶ ನೀಡಲಾಗಿದೆ. ಒಂದು ವೇಳೆ ಈಗ ಪಿಎಫ್ಐ ಸಂಘಟನೆಯಲ್ಲಿರುವವರು ಮುಂದೆ ಬೇರೊಂದು ಸಂಘಟನೆ ಹೆಸರಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರೆ ಅದನ್ನೂ ಮಟ್ಟ ಹಾಕಲಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಸಿಸಿದರು.

8 ಸಂಘಟನೆಗಳ ನಿಷೇಧ
* ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)
* ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)
* ನ್ಯಾಷನಲ್ ವುಮೆನ್ಸ್ ಫ್ರಂಟ್
* ಜೂನಿಯರ್ ಫ್ರಂಟ್
* ರಿಹ್ಯಾಬ್ ಇಂಡಿಯಾ ಫೌಂಡೇಶನ್ (ಆರ್ಐಎಫ್)
* ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ)
* ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ಸಿಎಚ್ಆರ್ಒ)
* ಎಂಪವರ್ ಇಂಡಿಯಾ ಫೌಂಡೇಶನ್ ಅಂಡ್ ರಿಹ್ಯಾಬ್ ಫೌಂಡೇಶನ್, ಕೇರಳ.












Click it and Unblock the Notifications