ಶಿವಮೊಗ್ಗ : ಕೆ.ಬಿ.ಪ್ರಸನ್ನ ಕುಮಾರ್ ಗೆ ನಾಗಾಸಾಧುಗಳ ಆಶೀರ್ವಾದ!
ಶಿವಮೊಗ್ಗ, ಏಪ್ರಿಲ್ 19 : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳು ಇರುವಾಗ ನಾಗಾಸಾಧುಗಳು ಮತ್ತೆ ಕಾಣಿಸಿಕೊಂಡಿದ್ದಾರೆ. ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕಳೆದ ಚುನಾವಣೆಯಲ್ಲಿ ಈಶ್ವರಪ್ಪ ಅವರನ್ನು ಸೋಲಿಸಿದ್ದ ಕೆ.ಬಿ.ಪ್ರಸನ್ನ ಕುಮಾರ್ ಅವರಿಗೆ ನಾಗಾಸಾಧುಗಳು ಆಶೀರ್ವಾದ ಮಾಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸಮಾಜದ ಪ್ರಮುಖರು ಏರ್ಪಡಿಸಿದ್ದ ಆಶೀರ್ವಾದ ಸಭೆಯಲ್ಲಿ ಕೆ.ಬಿ ಪ್ರಸನ್ನಕುಮಾರ್ ದಂಪತಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುವಾಗ ನಾಗಾಸಾಧುಗಳು ಅವರನ್ನು ದಿಢೀರ್ ಭೇಟಿ ಮಾಡಿ ಆಶೀರ್ವಾದ ಮಾಡಿದರು.
ಬಿಜೆಪಿ ಅಧ್ಯಕ್ಷರ ಮನೆಗೆ ನಾಗಾಸಾಧುಗಳ ಭೇಟಿ
'ಹಣೆಗೆ ತಿಲಕವಿಟ್ಟುಕೊಂಡು, ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ನಾಗಾಸಾಧುಗಳು, 'ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿದೆ. ನೀನು ಮುಂದೆ ಶಾಸಕನಾಗಿ, ಮಂತ್ರಿಯಾಗಿ ಒಳ್ಳೆಯ ಕೆಲಸವನ್ನು ಸಮಾಜಕ್ಕೆ ಮಾಡುವೆ ಎಂದು ಆಶೀರ್ವಾದ ಮಾಡಿ' ನಿರ್ಗಮಿಸಿದರು.
ಕರ್ನಾಟಕ ಚುನಾವಣೆ: ಕೇದಾರನಾಥ್ ನಿಂದ ನಾಗಸಾಧು ನುಡಿದ ಭವಿಷ್ಯ
ಹಿಂದೆ ಬಿ.ಎಸ್.ಯಡಿಯೂರಪ್ಪ, ಸಿ.ಟಿ.ರವಿ, ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್, ವರ್ತೂರು ಪ್ರಕಾಶ್ ಸೇರಿದಂತೆ ವಿವಿಧ ರಾಜಕೀಯ ನಾಯಕರ ನಿವಾಸಕ್ಕೆ ನಾಗಾಸಾಧುಗಳು ಭೇಟಿ ಮಾಡಿ ಆಶೀರ್ವಾದ ಮಾಡಿದ್ದರು.
ಮಾಜಿ ಸಚಿವ ಸಿ.ಟಿ.ರವಿಗೆ ಆಶೀರ್ವಾದ
2017ರ ಡಿಸೆಂಬರ್ನಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ಸಿ.ಟಿ.ರವಿ ಅವರ ಚಿಕ್ಕಮಗಳೂರಿನ ನಿವಾಸಕ್ಕೆ ನಾಗಾಸಾಧುಗಳು ಭೇಟಿ ನೀಡಿ ಆಶೀರ್ವಾದ ಮಾಡಿದ್ದರು.
ಸಿ.ಟಿ.ರವಿ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದರು. 'ಇಂದು ನಾಗಾ ಸಾಧುಗಳು ನಮ್ಮ ಮನೆಗೆ ಆಗಮಿಸಿದ್ದು ನನ್ನ ಅದೃಷ್ಟ. ಸಾಧುಗಳ ಆಶೀರ್ವಾದ ಪಡೆಯಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುವೆ. ಅವರ ಆಶೀರ್ವಾದ ನಾಡಿನ ಸಮಸ್ತ ಜನರಿಗೆ ಇರಲಿ ಎಂದು ಕೇಳಿಕೊಂಡಿದ್ದೇನೆ' ಎಂದು ಹೇಳಿದ್ದರು.
ಬಿಎಸ್ವೈಗೆ ನಾಗಾಸಾಧುಗಳ ಆಶೀರ್ವಾದ
2017ರ ಅಕ್ಟೋಬರ್ ತಿಂಗಳಿನಲ್ಲಿ 10ಕ್ಕೂ ಹೆಚ್ಚು ನಾಗಾಸಾಧುಗಳು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಯಾವುದೇ ಸೂಚನೆ ನೀಡದೆ ಬಂದಿದ್ದ ನಾಗಾಸಾಧುಗಳು ಸುಮಾರು 30 ನಿಮಿಷಗಳ ಕಾಲ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದರು. ಮುಂದಿನ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ, ನೀವು ಮತ್ತೆ ಸಿಎಂ ಆಗಲಿದ್ದೀರಿ ಎಂದು ಆಶೀರ್ವಾದ ಮಾಡಿದ್ದರು.
ಯಶವಂತರಾವ್ ಜಾದವ್ಗೆ ಆಶೀರ್ವಾದ
2017ರ ಮಾರ್ಚ್ನಲ್ಲಿ ದಾವಣಗೆರೆಯ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಮನೆಗೆ ನಾಗಾಸಾಧುಗಳು ಭೇಟಿ ನೀಡಿದ್ದರು. ಯಶವಂತರಾವ್ ಜಾದವ್ ಅವರಿಗೆ ಆಶೀರ್ವಾದ ಮಾಡಿದ್ದರು.
ಯಾವುದೇ ಸೂಚನೆ ನೀಡಿದೆ ದಿಢೀರ್ ಆಗಿ ಭೇಟಿ ನೀಡಿದ್ದ ನಾಗಾಸಾಧುಗಳು, 'ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೀಯಾ ಎಂದು ಭವಿಷ್ಯ ನುಡಿದಿದ್ದರು.'
ಕಂಸಾಳೆ ರವಿ ಭೇಟಿ
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿ ಕಂಸಾಳೆ ರವಿ ಅವರ ಮನೆಗೆ ನಾಗಾಸಾಧುಗಳು ಭೇಟಿ ನೀಡಿ ಸಿದ್ದರಾಮಯ್ಯ ಮತ್ತು ಶಾಸಕ ವರ್ತೂರು ಪ್ರಕಾಶ್ ಅವರ ಫೋಟೋಗೆ ಆಶೀರ್ವದಿಸಿ ಶುಭಾವಾಗುವಂತೆ ಹಾರೈಸಿದ್ದರು. ಹಿಮಾಲಯದಿಂದ ನಾಗಾಸಾಧುಗಳು ಆಗಮಿಸಿದ್ದರು ಎಂದು ತಿಳಿದುಬಂದಿದೆ.