ಶಿವಮೊಗ್ಗಕ್ಕೂ ವ್ಯಾಪಿಸಿತು ಹಿಜಾಬ್, ಕೇಸರಿ ಶಾಲು ವಿವಾದ
ಶಿವಮೊಗ್ಗ, ಫೆಬ್ರವರಿ 07; ಕುಂದಾಪುರದಲ್ಲಿ ಭುಗಿಲೆದ್ದಿದ್ದ ಹಿಜಾಬ್ ವಿವಾದ ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದೆ. ಇಲ್ಲಿನ ಪ್ರಮುಖ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು, ಎಟಿಎನ್ ವಾಣಿಜ್ಯ ಕಾಲೇಜು, ತೀರ್ಥಹಳ್ಳಿ ತಾಲೂಕಿನ ಬಾಳಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಸಹ್ಯಾದ್ರಿ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ವಸ್ತ್ರ ಸಂಹಿತೆಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು. ಕಾಲೇಜು ಆವರಣದಲ್ಲಿ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಮಾಡಿದರು. ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ತರಗತಿಗೆ ಬಂದರೆ, ನಾಳೆಯಿಂದ ತಾವು ಕೇಸರಿ ಶಾಲು ಧರಿಸಿ ಬರುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆ ಸಹ್ಯಾದ್ರಿ ಕಾಲೇಜಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಇನ್ನು, ಘಟನೆ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಡಾ. ವೀಣಾ, "ಸಹ್ಯಾದ್ರಿ ಕಾಲೇಜಿನಲ್ಲಿ ಯುನಿಫಾರಂ ಇಲ್ಲ. ಆದರೆ ತರಗತಿಗೆ ಬುರ್ಖಾ, ಹಿಜಾಬ್, ಕೇಸರಿ ಶಾಲು ಧರಿಸಿ ಬರಲು ಅವಕಾಶವಿಲ್ಲ. ಒಂದು ವೇಳೆ ಇವುಗಳನ್ನು ಧರಿಸಿ ತರಗತಿಗೆ ಬಂದರೆ ಅಂತಹವರನ್ನು ಮನೆಗೆ ಕಳುಹಿಸುತ್ತೇವೆ" ಎಂದು ತಿಳಿಸಿದರು.

ಎಟಿಎನ್ಸಿ ಕಾಲೇಜಿನಲ್ಲೂ ಸಂಘರ್ಷ
ಎಟಿಎನ್ಸಿ ಕಾಲೇಜಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ ಧರಿಸಿ ಬರಲು ಅನುಮತಿ ನೀಡಬೇಕು ಎಂದು ಪ್ರಾಂಶುಪಾಲರಲ್ಲಿ ಮನವಿ ಮಾಡಿದರು. ಇದನ್ನು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿತು. ಅದೇ ಸಂದರ್ಭ ಉಳಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿನಲ್ಲಿ ಘೋಷಣೆ ಕೂಗಿದರು.
ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ, ಕಾಲೇಜು ಕ್ಯಾಂಪಸ್'ನಲ್ಲಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ತರಗತಿಗೆ ಬಂದರೆ, ಇನ್ಮುಂದೆ ತಾವು ಕೇಸರಿ ಶಾಲು ಧರಿಸುತ್ತೇವೆ ಎಂದು ತಿಳಿಸಿದರು. ಎಟಿಎನ್ಸಿ ಕಾಲೇಜು ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಲಾಗಿದೆ.

ಕಾಲೇಜು ಬಳಿ ಬಿಗುವಿನ ವಾತಾವರಣ
ಎಟಿಎನ್ಸಿ ಕಾಲೇಜು ಬಳಿ ಇರುವ ಮಹಾವೀರ ವೃತ್ತದಲ್ಲಿ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿದರು. ಹಲವು ಯುವಕರು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತರು. ಈ ಗುಂಪು ಎಟಿಎನ್ಸಿ ಕಾಲೇಜು ಗೇಟ್ ಬಳಿ ಬರಲು ಮುಂದಾಯಿತು. ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿನಿಯರು, ಯುವಕರನ್ನು ಸಮಾಧಾನಪಡಿಸಿದರು. ಈ ಬೆಳವಣಿಗೆಯಿಂದಾಗಿ ಮಹಾವೀರ ವೃತ್ತದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬುರ್ಖಾ, ಹಿಜಾಬ್ ಪರ ಪ್ರತಿಭಟನೆ
ಮತ್ತೊಂದೆಡೆ ಹಿಜಾಬ್ ಮತ್ತು ಬುರ್ಖಾ ನಿಷೇಧ ಖಂಡಿಸಿ ಶಿವಮೊಗ್ಗ ಮಹಿಳಾ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಬುರ್ಖಾ ಧರಿಸಿದ್ದ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಾಲಾ, ಕಾಲೇಜುಗಳಿಗೆ ಬುರ್ಖಾ, ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಲಿದೆ. ಆದ್ದರಿಂದ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ
ನಗರದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷದಿಂದಾಗಿ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಶಿವಮೊಗ್ಗ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹಲವು ಕಡೆ ವಾಹನಗಳ ತಪಾಸಣೆ ಕಾರ್ಯವನ್ನು ನಡೆಸಲಾಗುತ್ತಿದೆ.

ನಾವೆಲ್ಲ ಭಾರತ ಮಾತೆಯ ಮಕ್ಕಳು
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ತಮ್ಮ ಮನೆಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದರು. "ಶಿಕ್ಷಣ ಇಲಾಖೆಯ ಆದೇಶವನ್ನು ಎಲ್ಲರು ಪಾಲಿಸಬೇಕು. ಹಿಜಾಬ್, ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವುದಕ್ಕೆ ಅವಕಾಶವಿಲ್ಲ. ಭಾರತ ಮಾತೆಯ ಮಕ್ಕಳು ನಾವೆಲ್ಲರು ಒಂದೆ. ಶಾಲೆ, ಕಾಲೇಜುಗಳು ಸಮಾನತೆಯನ್ನು ಕಲಿಸುತ್ತವೆ. ಅಲ್ಲಿಗೆ ಬುರ್ಖಾ, ಕೇಸರಿ ಶಾಲು ಹಾಕಿ ಬರುವುದು ಸರಿಯಲ್ಲ" ಎಂದು ತಿಳಿಸಿದರು.












Click it and Unblock the Notifications