ಭದ್ರಾವತಿ: ಅಪ್ಪಾಜಿ ಗೌಡರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಚ್ಡಿಕೆ
ಶಿವಮೊಗ್ಗ, ಸೆಪ್ಟೆಂಬರ್ 13: ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಆಗದವರು ಯಾರೋ ಅವರ ಸಾವಿಗೆ ಕಾರಣರಾಗಿರಬಹುದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸದರು.
ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡರ ಅಗಲಿಕೆಗೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಇಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅಪ್ಪಾಜಿ ಗೌಡರ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೇಳಿದರು.
""ಅಪ್ಪಾಜಿ ಗೌಡ ಅವರ ಕುಟುಂಬದವರೇ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ಮಾಜಿ ಜನಪ್ರತಿನಿಧಿಗೆ ವೆಂಟಿಲೇಟರ್ ಸಿಕ್ಕಿಲ್ಲ ಅಂದರೆ ಏನರ್ಥ?'' ಎಂದರು.

""ಅಪ್ಪಾಜಿ ಗೌಡ ಅವರಿಗೆ ಕೋವಿಡ್-19 ಸೋಂಕು ತಾಗಿತ್ತು ಎನ್ನುತ್ತಿದ್ದಾರೆ. ಆದರೆ ಅವರ ಕುಟುಂಬದ ಯಾರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ. ಇದೆಲ್ಲವನ್ನೂ ನೋಡಿದರೆ ಅಪ್ಪಾಜಿ ಗೌಡ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ'' ಎಂದು ತಿಳಿಸಿದರು.
ಅಪ್ಪಾಜಿ ಗೌಡ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಂದು ಬೆಳಿಗ್ಗೆ ಗೊತ್ತಾಗಿದ್ದರೆ ನಾನು ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಆದರೆ ಸಂಜೆ ವೇಳೆಗೆ ವಿಷಯ ತಿಳಿದಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಕರೆತರಲು ಆಗಲಿಲ್ಲ ಎಂದು ಹೇಳಿದರು.
ಡ್ರಗ್ಸ್ ಕುರಿತ ತನಿಖೆಗೂ ಜಮೀರ್ ಅಹಮದ್ ಅವರ ಹೇಳಿಕೆಗೂ ಸಂಬಂಧವಿಲ್ಲ, ಡ್ರಗ್ಸ್ ಗೂ ನನ್ನ ಕೊಲಂಬೊ ಪ್ರವಾಸಕ್ಕೂ ಏನು ಸಂಬಂಧ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು.
ಮಾಜಿ ಮುಖ್ಯ ಮಂತ್ರಿ ಎಚ್ಡಿಕೆ ಅವರು ಇಂದು ಶಿವಮೊಗ್ಗದ ಭೇಟಿ ನೀಡಿ, ಅಪ್ಪಾಜಿ ಗೌಡರ ಆರಾಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೃತ ಮಾಜಿ ಶಾಸಕರ ಪತ್ನಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.












Click it and Unblock the Notifications