ಶಿವಮೊಗ್ಗದಲ್ಲಿ ಹೊಸವರ್ಷದ ಪಾರ್ಟಿ ವೇಳೆ ಗನ್ ಫೈರ್, ಯುವಕನಿಗೆ ಗಾಯ, ಗುಂಡು ಹಾರಿಸಿದ ವ್ಯಕ್ತಿ ಸಾವು
ಶಿವಮೊಗ್ಗ, ಡಿಸೆಂಬರ್, 01: ಹೊಸ ವರ್ಷದ ಪಾರ್ಟಿ ವೇಳೆ ಗುಂಡು ತಗುಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ನಂತರ ಗುಂಡು ಹಾರಿಸಿದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ.
ನಗರದ ವಿದ್ಯಾನಗರದಲ್ಲಿರುವ ಮಂಜುನಾಥ ಓಲೇಕರ್ ಎಂಬುವವರ ಮನೆಯಲ್ಲಿ ಹೊಸವರ್ಷದ ಪಾರ್ಟಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಓಲೇಕರ್ ಅವರು ತಮ್ಮ ಕುಟುಂಬದವರೊಂದಿಗೆ ಹೊಸ ವರ್ಷಾಚರಣೆ ಮಾಡುತ್ತಿದ್ದು, 12 ಗಂಟೆಗೆ ಅವರು ತಮ್ಮ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮಂಜುನಾಥ್ ಓಲೇಕರ್ ಹಾರಿಸಿದ ಗುಂಡು ಮಿಸ್ ಫೈರ್ ಆಗಿ ಪಾರ್ಟಿ ಮಾಡುತ್ತಿದ್ದ ವಿನಯ್ ಎಂಬುವವರಿಗೆ ತಗುಲಿದೆ. ಗುಂಡು ತಗುಲಿದ ಕಾರಣ ಯುವಕ ವಿನಯ್ ಗಂಭೀರ ಗಾಯಗೊಂಡಿದ್ದು, ಆತನನ್ನು ಕೂಡಲೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಂಜುನಾಥ್ಗೆ ಹೃದಯಾಘಾತ
ಯುವಕನಿಗೆ ಗುಂಡು ತಗುಲುತ್ತಿದ್ದಂತೆ ಮಂಜುನಾಥ್ ಓಲೇಕರ್ ಅವರು ಆತಂಕಕ್ಕೀಡಾಗಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ನಂತರ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕುಣಿದು ಕುಪ್ಪಳಿಸಿದ ಯುವಕ, ಯುವತಿಯರು
ಹೊಸ ವರ್ಷ 2023ಕ್ಕೆ ಭರ್ಜರಿಯಾಗಿ ಸ್ವಾಗತ ಕೋರಲಾಗಿತ್ತು. ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಜನರು ಮೋಜು ಮಸ್ತಿಯಲ್ಲಿ ಮುಳುಗಿದ್ದ ಜನ ಸಂಭ್ರಮದಿಂದ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾ ಮತ್ತು ಭಾರತದಾದ್ಯಂತದ ಇತರ ದೊಡ್ಡ ನಗರಗಳು 2023ರ ಸ್ವಾಗತಕ್ಕೆ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕೂಡ ನಡೆದಿದೆ. ಬೆಂಗಳೂರಿನಲ್ಲಿ ಹೊಸ ವರ್ಷದ ಕಾರ್ಯಕ್ರಮಗಳಿಗೆ ಹೆಸರಾಗಿರುವ ಬ್ರಿಗೇಡ್ ರೋಡ್, ಎಂಜಿ ರೋಡ್ ಮತ್ತು ಚರ್ಚ್ ಸೀಟ್ನಲ್ಲಿ ಡಿಸೆಂಬರ್ 31ರ ಮಧ್ಯ ರಾತ್ರಿ ನಗರದ ಮಂದಿ ಅದ್ದೂರಿಯಾಗಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ.
ಜನದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹ
ಹೊಸ ವರ್ಷದ ಸಂಭ್ರಮದಲ್ಲಿದ್ದ ಕೆಲ ಮದ್ಯಪ್ರಿಯರು ಫುಲ್ ಟೈಟ್ ಆಗಿ ಬ್ರಿಗೇಡ್ ರೋಡ್, ಎಂಜಿ ರೋಡ್ ಮತ್ತು ಚರ್ಚ್ ಸೀಟ್ನಲ್ಲಿ ಎಲ್ಲೆಂದರಲ್ಲಿ ತೂರಾಡುತ್ತಿದ್ದ ದೃಶ್ಯಗಳು ಕಂಡು ಬಂದಿವೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಎಳೆದುಕೊಂಡು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದಿವೆ. ಇನ್ನು, ಈ ಬೃಹತ್ ಜನಸಮೂಹವನ್ನು ಚದುರಿಸಲು ಪೊಲಿಸರು ಹರ ಸಾಹಸ ಪಟ್ಟರು. ಬ್ರಿಗೇಡ್ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇಡೀ ರಸ್ತೆಯೂದ್ದಕ್ಕೂ ನೆರೆದಿದ್ದ ಜನರನ್ನು ಒಂದು ಗಂಟೆಯ ನಂತರ ಜಾಗ ಖಾಲಿ ಮಾಡಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಜಾಗ ಖಾಲಿ ಮಾಡಿ, ತಮ್ಮ ತಮ್ಮ ಸ್ಥಳಗಳಿಗೆ ತಲುಪುವಂತೆ ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದರು. ಕೊನೆಗೆ ನಿಯಂತ್ರಣ ತಪ್ಪಿ ಜನರನ್ನು ಬ್ರಿಗೇಡ್ ರೋಡ್, ಎಂಜಿ ರೋಡ್ ಮತ್ತು ಚರ್ಚ್ ಸೀಟ್ನಿಂದ ಚದುರಿಸಲು ಬೆಂಗಳೂರು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಹೊಸ ವರ್ಷದ ಸಂಭ್ರಮಾಚರಣೆಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ಸುಮಾರು ಎರಡು ವರ್ಷಗಳಲ್ಲಿ ಇದೇ ಮೊದಲು ಇಂತಹ ಜನ ಸಮೂಹಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಯಿತು.












Click it and Unblock the Notifications