ಸಾರಿಗೆ ನೌಕರರ ನಾಳೆಯ ಮುಷ್ಕರ ವಾಪಸ್; ಎಂದಿನಂತೆ ರಸ್ತೆಗಿಳಿಯಲಿವೆ ಬಸ್ಗಳು, ಪ್ರಯಾಣಿಕರಿಗೆ ನೆಮ್ಮದಿ
ಬೆಂಗಳೂರು: ಮೇ 20ರಂದು (ಬುಧವಾರ) ರಾಜ್ಯಾದ್ಯಂತ ನಡೆಯಬೇಕಿದ್ದ ಸಾರಿಗೆ ನೌಕರರ ಬೃಹತ್ ಮುಷ್ಕರ ದಿಢೀರ್ ರದ್ದಾಗಿದೆ. ಹೈಕೋರ್ಟ್ ನೀಡಿರುವ ಮಹತ್ವದ ನಿರ್ದೇಶನಕ್ಕೆ ಗೌರವ ನೀಡಿರುವ ಸಾರಿಗೆ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿಯು ತನ್ನ ಪ್ರತಿಭಟನೆಯ ನಿರ್ಧಾರವನ್ನು ಅಧಿಕೃತವಾಗಿ ಹಿಂಪಡೆದಿದೆ. ಇದರಿಂದಾಗಿ ನಾಳೆ ರಾಜ್ಯಾದ್ಯಂತ ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ ಸೇರಿದಂತೆ ಎಲ್ಲ ಸಾರಿಗೆ ಬಸ್ಗಳ ಸಂಚಾರ ಎಂದಿನಂತೆ ಸುಗಮವಾಗಿರಲಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.
ಮುಷ್ಕರದ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರತಿಭಟನೆಯನ್ನು ಕೈಬಿಟ್ಟು ಸರ್ಕಾರದೊಂದಿಗೆ ಸಂಧಾನ ಸಭೆ ನಡೆಸುವಂತೆ ಸಾರಿಗೆ ಒಕ್ಕೂಟಕ್ಕೆ ಸೂಚಿಸಿತ್ತು. ಈ ಕುರಿತು ಮಾಹಿತಿ ನೀಡಿರುವ ಕೆಎಸ್ಆರ್ಟಿಸಿ ಜಂಟಿ ಕ್ರಿಯಾ ಸಮಿತಿ, "ನಾವು ನಿಯಮಾನುಸಾರವೇ ಮುಷ್ಕರದ ಮುನ್ಸೂಚನೆಯನ್ನು ಸರ್ಕಾರಕ್ಕೆ ನೀಡಿದ್ದೆವು. ಆದರೆ ನ್ಯಾಯಾಲಯದ ಆದೇಶವನ್ನು ಗೌರವಿಸಿ ಸದ್ಯಕ್ಕೆ ಮುಷ್ಕರವನ್ನು ವಾಪಸ್ ಪಡೆಯುತ್ತಿದ್ದೇವೆ. ಮುಖ್ಯಮಂತ್ರಿಗಳು ಅಥವಾ ಸಾರಿಗೆ ಸಚಿವರು ಶೀಘ್ರದಲ್ಲೇ ನಮ್ಮ ಬೇಡಿಕೆಗಳ ಈಡೇರಿಕೆಗೆ ಕಾಲಾವಕಾಶ ನಿಗದಿಪಡಿಸಿ ಸಭೆ ಕರೆಯಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೂ ನಿರ್ದೇಶನ ನೀಡಿದೆ" ಎಂದು ತಿಳಿಸಿದೆ.

ಸರ್ಕಾರದ ವಿರುದ್ಧ ನೌಕರರ ಒಕ್ಕೂಟದ ಕಿಡಿ
ಇದೇ ವೇಳೆ ಜಂಟಿ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರಿಗೆ ಪ್ರತಿಭಟಿಸುವ ಹಕ್ಕಿದೆ. ಆದರೆ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ಬೇರೆಯವರಿಂದ ಕೋರ್ಟ್ನಲ್ಲಿ ಪಿಐಎಲ್ ಹಾಕಿಸಿರುವ ಶಂಕೆ ಮೂಡುತ್ತಿದೆ. ನೌಕರರ ವೇತನ ಹಾಗೂ ಡಿಎ (DA) ಹೆಚ್ಚಳವಾಗಬೇಕಿದೆ. ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಹೈಕೋರ್ಟ್ ಸೂಚನೆಯಂತೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲು ನಾವು ಸಿದ್ಧರಿದ್ದೇವೆ. ನ್ಯಾಯಾಲಯ ಕೂಡ ನಮ್ಮ ಹಲವು ಬೇಡಿಕೆಗಳನ್ನು ಗಮನಿಸಿದೆ ಎಂದಿದ್ದಾರೆ. ಸದ್ಯಕ್ಕೆ ಸಾರಿಗೆ ನೌಕರರು ಮುಷ್ಕರದ ನೋಟಿಸ್ ಅನ್ನು ಅಧಿಕೃತವಾಗಿ ಹಿಂಪಡೆದಿರುವುದರಿಂದ, ಬುಧವಾರ ಮುಂಜಾನೆಯಿಂದಲೇ ಎಲ್ಲ ನಗರ ಹಾಗೂ ಗ್ರಾಮಾಂತರ ಬಸ್ಗಳು ಎಂದಿನ ವೇಳಾಪಟ್ಟಿಯಂತೆಯೇ ಸಂಚರಿಸಲಿವೆ ಎಂದು ಸಾರಿಗೆ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.
ಹೈಕೋರ್ಟ್ನಿಂದ ಮುಷ್ಕರಕ್ಕೆ ತಡೆ
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಮುಷ್ಕರ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ಸಾರಿಗೆ ನೌಕರರ ಒಕ್ಕೂಟಗಳಿಗೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಸಾರ್ವಜನಿಕರಿಗೆ ಎದುರಾಗಬಹುದಾದ ಭಾರೀ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಸಾರಿಗೆ ನೌಕರರ ಉದ್ದೇಶಿತ ಮುಷ್ಕರಕ್ಕೆ ಮಧ್ಯಂತರ ತಡೆ ವಿಧಿಸಿ ಆದೇಶ ಹೊರಡಿಸಿದೆ. ಮುಷ್ಕರದ ಹಾದಿ ಬಿಟ್ಟು ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ರೀತಿಯ ಮುಷ್ಕರ ಅಥವಾ ಸಾರ್ವಜನಿಕ ಸೇವೆಗೆ ಧಕ್ಕೆ ತರುವಂತಹ ಪ್ರತಿಭಟನೆಗಳನ್ನು ನಡೆಸದಂತೆ ಒಕ್ಕೂಟಗಳಿಗೆ ನಿರ್ದೇಶಿಸಿದೆ. ಮುಷ್ಕರ ಮಾಡದಂತೆ ನಾವು ಇಂದು ತಡೆಹಿಡಿಯುತ್ತಿದ್ದೇವೆ. ಲಕ್ಷಾಂತರ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಕೈಗೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನೌಕರರ ಒಕ್ಕೂಟ ಸಜ್ಜಾಗಿದೆ. ನ್ಯಾಯಾಲಯದ ಈ ಹಸ್ತಕ್ಷೇಪದಿಂದಾಗಿ ನಾಳೆ ಎಂದಿನಂತೆ ಸಾರಿಗೆ ಬಸ್ಗಳು ರಸ್ತೆಗಿಳಿಯಲಿವೆ.













Click it and Unblock the Notifications