ಪಂಚಭೂತಗಳಲ್ಲಿ ಲೀನವಾದ ಗಾಮಕ ಗಾಯಕ ಹೆಚ್. ಆರ್. ಕೇಶವಮೂರ್ತಿ
ಶಿವಮೊಗ್ಗ, ಡಿಸೆಂಬರ್ 22; ಖ್ಯಾತ ಗಮಕ ಗಾಯಕ, ಪದ್ಮಶ್ರೀ ಪಶಸ್ತಿ ಪುರಸ್ಕೃತ ಹೆಚ್. ಆರ್. ಕೇಶವಮೂರ್ತಿ ಅವರ ಅಂತ್ಯಕ್ರಿಯೆ ಶಿವಮೊಗ್ಗದಲ್ಲಿ ಗುರುವಾರ ನಡೆಯಿತು.
ವಯೋಸಹಜ ಅನಾರೋಗ್ಯದಿಂದ ಗಮಕ ಗಾಯಕ ಹೆಚ್. ಆರ್. ಕೇಶವಮೂರ್ತಿ(88) ಬುಧವಾರ ವಿಧಿವಶರಾಗಿದ್ದರು. ಗುರುವಾರ ಅಂತ್ಯಕ್ರಿಯೆಯು ಶಿವಮೊಗ್ಗ ತಾಲೂಕಿನ ಹೊಸಹಳ್ಳಿಯಲ್ಲಿ ಪೊಲೀಸ್ ಗೌರವದೊಂದಿಗೆ ನೆರವೇರಿತು.
ಮೃತರ ಗೌರವಾರ್ಥ ಸರ್ಕಾರ, ಪೊಲೀಸ್ ಗೌರವದೊಂದಿಗೆ ಅಂತಿಮ ಕ್ರಿಯೆ ನಡೆಸಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವ ಕುಮಾರ್ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಕೆ ಮಾಡಿದರು.

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಮಹಾನಗರ ಪಾಲಿಕೆ ಮಹಾಪೌರ ಶಿವಕುಮಾರ್ ಸೇರಿದಂತೆ ಇತರ ಗಣ್ಯರು ಪಾರ್ಥೀವ ಶರೀರಕ್ಕೆ ಪುಷ್ಪಮಾಲೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.
ನಂತರ ಪೊಲೀಸ್ ಇಲಾಖೆ ಶಿಷ್ಟಾಚಾರದಂತೆ ಪೊಲೀಸರು ಗೌರವ ಸೂಚಿಸಿದರು. ಅಂತ್ಯಕ್ರಿಯೆಯಲ್ಲಿ ಮೃತರ ಪತ್ನಿ, ಪುತ್ರಿ, ಬಂಧುಗಳು, ವಿಪ್ರ ಸಮಾಜದ ಮುಖಂಡರು, ಹಲವಾರು ಜನರು ಪಾಲ್ಗೊಂಡಿದ್ದರು.
ಗೃಹ ಸಚಿವರ ಸಂತಾಪ; ಹೆಚ್. ಆರ್. ಕೇಶವಮೂರ್ತಿ ನಿಧನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದರು. 'ಪ್ರಖ್ಯಾತ ಗಮಕ ಕಲಾವಿದರು, ಪದ್ಮಶ್ರೀ ಪುರಸ್ಕೃತ, ಶಿವಮೊಗ್ಗದ ಶ್ರೀ ಹೊಸಳ್ಳಿ ಕೇಶವಮೂರ್ತಿ ಅವರ ನಿಧನದ ಸುದ್ದಿ ತಿಳಿದು ಅಪಾರ ದುಃಖವಾಗಿದೆ. ಗಮಕ ಕಲಾ ಪ್ರಪಂಚಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿರುವ ಶ್ರೀಯುತರು, ಅಪಾರ ಶಿಷ್ಯರು, ಬಂಧು ಬಳಗವನ್ನು ಅಗಲಿದ್ದಾರೆ' ಎಂದು ಟ್ವೀಟ್ ಮಾಡಿದ್ದರು.

ಮತ್ತೊಂದು ಟ್ವೀಟ್ನಲ್ಲಿ ಗಮಕ ಕಲಾವಿದರು, ಪದ್ಮಶ್ರೀ ಪುರಸ್ಕೃತ, ಶ್ರೀ ಹೊಸಳ್ಳಿ ಕೇಶವಮೂರ್ತಿ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದರು.
ಅಮಿತ್ ಶಾ ಸಂತಾಪ; ಹೆಚ್. ಆರ್. ಕೇಶವಮೂರ್ತಿ ನಿಧನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದರು. ತಮ್ಮ ಟ್ವೀಟ್ನಲ್ಲಿ ಅವರು, 'ಖ್ಯಾತ ಗಮಕ ಕಲಾವಿದ ಶ್ರೀ ಹೆಚ್. ಆರ್. ಕೇಶವಮೂರ್ತಿ ಅವರ ನಿಧನ ತೀವ್ರ ದುಃಖ ತಂದಿದೆ. ಗಮಕವನ್ನು ಜನಪ್ರಿಯಗೊಳಿಸುವ ಅವರ ಉತ್ಸಾಹ ಅದ್ಭುತ. ಅವರು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲೆಯನ್ನು ಉಚಿತವಾಗಿ ಕಲಿಸಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತಾ, ಕುಟುಂಬದವರಿಗೆ ಸಂತಾಪವನ್ನು ಕೋರುತ್ತೇನೆ. ಓಂ ಶಾಂತಿಃ' ಎಂದು ತಿಳಿಸಿದ್ದರು.
ಗಮಕ ಕಲೆಗೆ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಹೆಗ್ಗಳಿಗೆ ಶಿವಮೊಗ್ಗದ ಹೊಸಹಳ್ಳಿಯ ಹೆಚ್. ಆರ್. ಕೇಶವಮೂರ್ತಿ ಅವರದ್ದಾಗಿದೆ. ಕೇಂದ್ರ ಸರ್ಕಾರ 2022ರಲ್ಲಿ ಅವರಿಗೆ ಪ್ರದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸಂಕ್ಷಿಪ್ತ ಪರಿಚಯ; ಹೆಚ್. ಆರ್. ಕೇಶವಮೂರ್ತಿ ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯವರು. 1934ರ ಫೆಬ್ರವರಿ 22ರಂದು ಜನಿಸಿದರು. ತಂದೆ ರಾಮಾಶಾಸ್ತ್ರಿ, ತಾಯಿ ಲಕ್ಷ್ಮೀ ದೇವಮ್ಮ. 16ನೇ ವಯಸ್ಸಿನಲ್ಲಿಯೇ ಹೊಸಹಳ್ಳಿ ಗ್ರಾಮದ ವೆಂಕಟೇಶಯ್ಯ ಬಳಿ ಗಮಕ ವಾಚನವನ್ನು ಕಲಿಯಲು ಅವರು ಆರಂಭಿಸಿದರು.
ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕಾರ್ಯಕ್ರಮಗಳನ್ನು ನೀಡಿ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಸೇರಿದಂತೆ ಹಲವು ಕೃತಿಗಳನ್ನು ಹೆಚ್ಚಿನ ಸಂಖ್ಯೆಯ ಕಲಾರಸಿಕರಿಗೆ ತಲುಪಿಸಿ, ಗಮಕ ಶೈಲಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಹೆಚ್. ಆರ್. ಕೇಶವಮೂರ್ತಿ.
ಹೆಚ್. ಆರ್. ಕೇಶವಮೂರ್ತಿ ಮತ್ತು ಹಿರಿಯ ವ್ಯಾಖ್ಯಾನಕಾರ ವಾಚಸ್ಪತಿ ಮತ್ತೂರು ಲಕ್ಷ್ಮೀ ಕೇಶವ ಶಾಸ್ತ್ರಿಯವರ ವ್ಯಾಖ್ಯಾನದೊಂದಿಗೆ 35 ಧ್ವನಿಸುರುಳಿಗಳಲ್ಲಿ ಜೈಮಿನಿ ಭಾರತ ಹೊರತರಲಾಗಿದೆ. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿಯಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ ಬಿಡುಗಡೆಯಾಗಿದೆ.












Click it and Unblock the Notifications