ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಪರಿಸರ ಜಾಗೃತಿಗೆ ಸೈಕಲ್ ಜಾಥಾ
ಶಿವಮೊಗ್ಗ, ಜುಲೈ 1: ಜೆಸಿಐ ವತಿಯಿಂದ 'ಪರ್ಯಾವರಣ ಸಪ್ತಾಹದ' ಅಂಗವಾಗಿ ಪರಿಸರ ಜಾಗೃತಿಯನ್ನು ಮೂಡಿಸಲು ಮೂರು ಕಿಲೋ ಮೀಟರ್ ಸೈಕಲ್ ಜಾಥಾವನ್ನು ಜೆಸಿಐ ಶಿವಮೊಗ್ಗ ಶರಾವತಿ ಘಟಕ ಹಮ್ಮಿಕೊಂಡಿತ್ತು. ಸೈಕಲ್ ಜಾಥಾಗೆ ಜೆಸಿಐ ಪ್ರಾದೇಶಿಕ ನಿರ್ದೇಶಕರಾದ ಭಾರತಿ ರಾಮಕೃಷ್ಣರವರು ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದ ಜೆಸಿ ಸದಸ್ಯರು ಪರಿಸರ ಜಾಗೃತಿ ಕುರಿತ ಪ್ಲೇ ಕಾರ್ಡ್ಸ್ ಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಡಿ ಜನರ ಗಮನ ಸೆಳೆದರು.
ಜಾಥಾ ನಂತರ ಸ್ಟೇಡಿಯಂ ಮುಂಭಾಗದಲ್ಲಿ ಬಹಿರಂಗ ಸಭೆ ನಡೆಯಿತು. ಮುಖ್ಯ ಅತಿಥಿಗಳಾಗಿ ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ ಯಾದವ್ ಮಾತನಾಡಿದರು. 'ಪರಿಸರ ಸಂರಕ್ಷಣೆ ಪ್ರತಿ ಮನೆ ಮನದ ಕರ್ತವ್ಯವಾಗಬೇಕು. ಪ್ರಕೃತಿ ಮೇಲಿನ ತಾತ್ಸಾರಗಳೇ ಇಂದು ಬರಗಾಲ ತಂದೊಡ್ಡಿದೆ. ಮಲೆನಾಡಿನ ಎಲ್ಲಾ ಸಂಘ ಸಂಸ್ಥೆಗಳು ನಿರಂತರವಾಗಿ ಪರಿಸರ ಕಾಳಜಿಗೆ ಒತ್ತು ಕೊಡಬೇಕು' ಎಂದು ಹೇಳಿದರು.

ಪರಿಸರ ರಮೇಶ್ರವರು ಮಾತನಾಡಿ, ಮೊದಲು ಪರಿಸರ ಉಳಿವಿನ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಬೇಕು. ಗಿಡ-ಮರ ಬೆಳೆಸುವುದರಿಂದ ಕಟ್ಟಡಗಳ ಸೌಂದರ್ಯ ಮರೆಮಾಚುತ್ತದೆ. ಹೀಗಾಗಿ ಮರಗಳನ್ನು ನಮ್ಮ ಮನೆ ಮುಂದೆ ಬೆಳೆಸುವುದು ಬೇಡ ಎನ್ನುವ ಮನೋಭಾವಗಳು ಕೆಲ ಮಹಿಳೆಯರಲ್ಲಿದೆ. ಈ ಕಾರಣದಿಂದ ಅವರಿಗೆ ಮೊದಲು ಅರಿವು ಮೂಡಿಸಬೇಕು ಎಂದರು.
ವಾಲಿಬಾಲ್ ಶಶಿ, ಜೆಸಿಐ ಶಿವಮೊಗ್ಗ ಶರಾವತಿಯ ಅಧ್ಯಕ್ಷರಾದ ಜ್ಯೋತಿ ಅರಳಪ್ಪನವರು ಪರಿಸರದ ಉಳಿವಿನ ಕುರಿತು ಮಾತನಾಡಿದರು. ಸ್ಥಳೀಯ ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣದ ಪರವಾನಿಗೆ ಬರುವ ಸಾರ್ವಜನಿಕ ಕಡತಗಳಲ್ಲಿ ಸೆಟ್ ಬ್ಯಾಕ್ ನಿಯಮಾವಳಿಗಳಲ್ಲಿ ಮನೆಗೊಂದು ಮರ ಪೋಷಿಸುವಂತೆ ಕಾನೂನನ್ನು ಅಳವಡಿಸಿದರೆ, ಪ್ರತಿ ಮನೆಗಳು ಮರಗಳನ್ನು ಪೋಷಿಸಿದರೆ ಬಹುಶಃ ಮಲೆನಾಡಿನ ಮಹಾನಗರಿಯನ್ನು ಹಸಿರ ನಗರಿಯನ್ನಾಗಿ ನೋಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಅಧ್ಯಕ್ಷರಾದ ವಿನಯ್ ಆರ್ ಗೌಡ, ಕರವೇ ಯುವಸೇನೆ ಅಧ್ಯಕ್ಷ ಕಿರಣ್, ಜೆಸಿಐ ಶಿವಮೊಗ್ಗ ಶರಾವತಿ ರೈಟ್ ಅಧ್ಯಕ್ಷರಾದ ಸೌಮ್ಯ ಅರಳಪ್ಪ, ಜೆಸಿಐ ಶಿವಮೊಗ್ಗ ಶರಾವತಿ ಜೆಜೆಸಿಯ ಅಧ್ಯಕ್ಷರಾದ ಸಾನ್ವಿ ಎಸ್ ಗೌಡ ಹಾಗೂ ಕಾರ್ಯದರ್ಶಿಗಳಾದ ಶೋಭಾ ಸತೀಶ್ ಇತರರು ಉಪಸ್ಥಿತರಿದ್ದರು.












Click it and Unblock the Notifications