ಶಿವಮೊಗ್ಗ: ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳಿಂದ ದಿಢೀರ್ ಕಾರ್ಯಾಚರಣೆ
ಶಿವಮೊಗ್ಗ, ನವೆಂಬರ್ 3: ಶಿವಮೊಗ್ಗ ನಗರದ ಹೃದಯ ಭಾಗದಲ್ಲಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ, ರಕ್ಷಣಾಧಿಕಾರಿ, ಕಮಿಷನರ್ ಖುದ್ದು ಫೀಲ್ಡಿಗಿಳಿದಿದ್ದು, ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ್ದಾರೆ.
ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತರಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ರಕ್ಷಣಾಧಿಕಾರಿ ಮಿಥುನ್ ಕುಮಾರ್, ಮಹಾನಗರ ಪಾಲಿಕೆ ಕಮಿಷನರ್ ಮಾಯಣ್ಣ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಉತ್ತರ ಪ್ರದೇಶದ ಕಾಡಿಗೆ ತೆರಳಿದ ಸಕ್ರೆಬೈಲಿನ ಸೂರ್ಯ ಆನೆ
ನವೆಂಬರ್2ರ ಸಂಜೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ನೇತೃತ್ವದ ಅಧಿಕಾರಿಗಳ ತಂಡ ಗಾಂಧಿ ಬಜಾರ್ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಿದರು.ಈ ಕಾರ್ಯಾಚರಣೆ ವೇಳೆ ಗಾಂಧಿ ಬಜಾರ್ ಸುತ್ತಮುತ್ತಲಿನ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲಾಯಿತು.
ಶಿವಮೊಗ್ಗ ನಗರದ ಅನೇಕ ಕಡೆ ಫುಟ್ ಪಾತ್ ಒತ್ತುವರಿ
ಗಾಂಧಿ ಬಜಾರ್ ಮುಖ್ಯ ರಸ್ತೆ, ಸಿದ್ಧಯ್ಯ ರಸ್ತೆ, ಎಂಕೆಕೆ ರಸ್ತೆ, ಕಸ್ತೂರ ಬಾ ರಸ್ತೆ, ಕೆ.ಆರ್.ಪುರಂ ರಸ್ತೆಗಳಲ್ಲಿ ಫುಟ್ ಪಾತ್ ತೆರವು ಕಾರ್ಯ ನಡೆಸಲಾಯಿತು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿರುವ ಅಧಿಕಾರಿಗಳು, ಅಧಿಕಾರಿಗಳ ತಂಡ ಕಾಲ್ನಡಿಗೆಯಲ್ಲೇ ಬಡಾವಣೆಗಳನ್ನು ಸುತ್ತಿ ಪ್ರತಿ ಅಂಗಡಿ, ಮನೆ ಮುಂದೆ ಫುಟ್ ಪಾತ್ ಒತ್ತುವರಿ ಆಗಿರುವುದನ್ನು ಪರಿಶೀಲಿಸಿದರು.
''ಶಿವಮೊಗ್ಗ ನಗರದ ಗಾಂಧಿ ಬಜಾರ್ನಲ್ಲಿ ಅನೇಕರು ರಸ್ತೆಯಲ್ಲೇ ತಳ್ಳು ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ಫುಟ್ ಪಾತ್ ಮೇಲೆ ವ್ಯಾಪಾರ ಮಾಡುವವರು, ಅಂಗಡಿಗಳ ವಸ್ತುಗಳನ್ನು ಫುಟ್ ಪಾತ್ ಮೇಲೆ ಪ್ರದರ್ಶನಕ್ಕೆ ಇಟ್ಟಿರುವುದು ಅಧಿಕಾರಿಗಳ ಗಮನಕ್ಕೆ ಕಂಡು ಬಂತು. ಹೀಗಾಗಿ ಇವುಗಳನ್ನು ಕೂಡಲೇ ತೆರವು ಮಾಡುವಂತೆ ವ್ಯಾಪಾರಿಗಳಿಗೆ ಸೂಚಿಸಲಾಯಿತು. ಒಂದು ವೇಳೆ ತೆರವು ಮಾಡದೆ ಇದ್ದರೆ ವಶಕ್ಕೆ ಪಡೆಯಲಾಗುತ್ತದೆ'' ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಎಚ್ಚರಿಕೆ ನೀಡಿದರು.
ಸರ್ಕಾರಿ ವಾಹನದಲ್ಲಿ ಬಂದು ದಂಡ ಹಾಕಿದ ನಕಲಿ ಅಧಿಕಾರಿ
ಒತ್ತುವರಿ ತೆರವಿಗೆ ಅಧಿಕಾರಿಗಳ ಸೂಚನೆ
ಶಿವಮೊಗ್ಗ ನಗರದ ಸಿದ್ದಯ್ಯ ರಸ್ತೆ, ಎಂಕೆಕೆ ರೋಡ್, ಕೆ.ಆರ್. ಪುರಂ ರಸ್ತೆಯಲ್ಲಿ ಫುಟ್ ಪಾತ್, ಚರಂಡಿ ಒತ್ತುವರಿ ಆಗಿರುವುದು ಅಧಿಕಾರಿಗಳ ಗಮನಕ್ಕೆ ಬಂತು. ಬೆಳಗಾಗುವುದರಲ್ಲಿ ಇವುಗಳನ್ನು ತೆರವು ಮಾಡದಿದ್ದರೆ ಜೆಸಿಬಿ ಕರೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ತಿಳಿಸಿದರು. ಕೆಲವು ಕಡೆ ಅಂಗಡಿಯ ಹೊರಗೆ ಗೋಡೆ ನಿರ್ಮಿಸಿ ಸಣ್ಣದಾಗಿ ಗೋಡೌನ್ ಮಾದರಿಯಾಗಿ ನಿರ್ಮಿಸಲಾಗಿತ್ತು. ಬಿಸಿಲು, ಮಳೆಯಿಂದ ರಕ್ಷಣೆಗೆ ಅಂಗಡಿಗಳ ಮುಂದೆ ಶೀಟ್ ಹಾಕಲಾಗಿತ್ತು. ವಿವಿಧ ತಿನಿಸು ಅಂಗಡಿಗಳು, ಗ್ಯಾರೇಜ್, ಬಟ್ಟೆ ಅಂಗಡಿಗಳು ಫುಟ್ ಪಾತ್ಗಳನ್ನೇ ಕಬಳಿಸಿವೆ. ಇವುಗಳನ್ನು ತೆರವು ಮಾಡುವಂತೆ ಮಾಲೀಕರಿಗೆ ಅಧಿಕಾರಿಗಳು ಸೂಚಿಸಿದರು.
ರಸ್ತೆಗಳಲ್ಲಿ ಕಸದ ರಾಶಿ ಕಂಡು ಜಿಲ್ಲಾಧಿಕಾರಿ ಗರಂ
ಈ ಸಂದರ್ಭದಲ್ಲಿ ಗಾಂಧಿ ಬಜಾರ್ 2ನೇ ಅಡ್ಡರಸ್ತೆಯಲ್ಲಿ ಕಟ್ಟಡಗಳಿಗೆ ತಾಗುವಂತೆ ವಿದ್ಯುತ್ ತಂತಿ ಹಾದು ಹೋಗಿದೆ. ಇವುಗಳಿಂದ ಅಕ್ಕಪಕ್ಕದ ಕಟ್ಟಡದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ ಎಂದು ಸ್ಥಳೀಯರು, ಅಧಿಕಾರಿಗಳಿಗೆ ದೂರು ನೀಡಿದರು. ಈ ಕುರಿತು ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಇನ್ನು ಕೆ.ಆರ್.ಪುರಂ ರಸ್ತೆ, ಎಂಕೆಕೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ರಾಶಿ ಕಸ ಬಿದ್ದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಗರಂ ಆಗಿದ್ದು, ಇಲ್ಲಿನ ಕಸವನ್ನು ನಾಳೆ ಬೆಳಗ್ಗೆ ತೆರವು ಮಾಡಬೇಕು ಎಂದು ಪಾಲಿಕೆ ಕಮಿಷನರ್ ಮಾಯಣ್ಣ ಗೌಡಗೆ ಸೂಚಿಸಿದರು.
ಕಠಿಣ ಕ್ರಮಕ್ಕೆ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ಇನ್ನು ಅಮೀರ್ ಅಹಮದ್ ಸರ್ಕಲ್ನಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲು ತೀರ್ಮಾನಿಸಿತು. ಶಿವಪ್ಪನಾಯಕ ಪ್ರತಿಮೆ ಬಳಿಯಿಂದ ಎ.ಎ. ಸರ್ಕಲ್ ವರೆಗೆ ತಳ್ಳುಗಾಡಿ ವ್ಯಾಪಾರ, ಫುಟ್ ಪಾತ್ ಮೇಲೆ ಅಂಗಡಿಯ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಈ ಭಾಗದಲ್ಲಿ ವಾಹನ ನಿಲುಗಡೆ ಮಾಡಿದರೆ ಕೂಡಲೇ ದಂಡ ವಿಧಿಸಬೇಕು. ಇಲ್ಲವೇ ವಾಹವನ್ನು ವಶಕ್ಕೆ ಪಡೆಯುವಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದರು.
ಫುಟ್ ಪಾತ್ ಮತ್ತು ರಸ್ತೆ ಒತ್ತುವರಿ ಮಾಡಿಕೊಂಡಿರುವುದರಿಂದ ಗಾಂಧಿ ಬಜಾರ್ ಮತ್ತು ಸುತ್ತಮುತ್ತಲ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಕುರಿತು ದೂರು ಕೇಳಿ ಬಂದಿತ್ತು. ಹೀಗಾಗಿ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿರುವುದು ಈ ಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ.